‘ಅಪಾರ್ಟ್ಮೆಂಟ್ಗಳಿಗೆ ಕೆರೆ ನೀರು ತಪ್ಪಿಸಲು ಏರಿ ಒಡೆದರು’
ಕೆರೆ ಏರಿ ಒಡೆದು ಹುಳಿ ಮಾವು ಕೆರೆ ದುರಂತ ಸಂಭವಿಸಿತ್ತು. ಅಪಾರ್ಟ್ ಮೆಂಟ್ ಗಳ ರಕ್ಷಣೆಗಾಗಿ ಈ ರೀತಿ ಮಾಡಲಾಗಿತ್ತು.
ಬೊಮ್ಮನಹಳ್ಳಿ [ನ.30]: ಬಿಲ್ಡರ್ಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿ ಹುಳಿಮಾವು ಕೆರೆ ದುರಂತಕ್ಕೆ ಕಾರಣಗಾಗಿದ್ದಾರೆ. ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಅಧಿಕಾರಿಗಳು ಶಾಮೀಲಾಗಿ ಕೆರೆ ಒಡೆದಿದ್ದಾರೆ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಹುಳಿಮಾವು ಕೆರೆ ನೀರು ನುಗ್ಗಿ ಹಾನಿಗೊಳಗಾದ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ದುರಂತಕ್ಕೆ ಕಾರಣರಾದ ಅಧಿಕಾರಿಗಳನ್ನು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದರು.
ಹುಳಿಮಾವು ಕೆರೆ ಸುತ್ತಮುತ್ತ ಇರುವ ಅಪಾರ್ಟ್ಮೆಂಟ್ಗಳು ಕೆರೆಗೆ ನೇರವಾಗಿ ಕೊಳಚೆ ನೀರು ಹರಿಸುತ್ತಿದ್ದವು. ಆದರೆ ಕೆರೆಯಲ್ಲಿ ನೀರು ಹೆಚ್ಚಾಗಿದ್ದರಿಂದ ಅಪಾರ್ಟ್ಮೆಂಟ್ಗಳ ಡ್ರೈನೇಜ್ಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಹೀಗಾಗಿ ಅವರು ಜಲ ಮಂಡಳಿಗೆ ಪತ್ರ ಬರೆದಿದ್ದರು. ಆದರೆ ಜಲ ಮಂಡಳಿ ಸಿಬ್ಬಂದಿ ಕರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ರವಾನಿಸಿ, ಕೆರೆಯಲ್ಲಿ ನೀರು ಕಡಿಮೆ ಮಾಡಲು ಸೂಚಿಸಿದ್ದಾರೆ. ಅದರಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಕೆರೆಯಲ್ಲಿ ನೀರನ್ನು ಕಡಿಮೆ ಮಾಡಲು ಚಿಕ್ಕದಾಗಿ ಹಳ್ಳ ತೋಡಲು ಸೂಚಿಸಿದ್ದಾರೆ. ಈ ವೇಳೆ ಕೆರೆ ಒಡೆದು ಇಷ್ಟೇಲ್ಲ ಅನಾಹುತಕ್ಕೆ ಕಾರಣವಾಗಿದೆ ಎಂದು ಶಾಸಕರು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆರೆಯ ಬಫರ್ ಜೋನ್ನಲ್ಲಿ ನಿರ್ಮಾಣವಾಗಿರುವ ಮಾರ್ಟ್, ಹೀರಾ ನಂದಿನಿ ಅಪಾರ್ಟ್ಮೆಂಟ್ಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ದುರಂತದಲ್ಲಿ 200ಕ್ಕೂ ಹೆಚ್ಚು ಕಾರುಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಇನ್ಶೂರೆನ್ಸ್ ಕಂಪನಿಗಳ ಜೊತೆ ಮಾತನಾಡಿ ಅವರ ನೆರಗೂ ಸಹ ಸರ್ಕಾರ ಧಾಸಬೇಕೆಂದು ಇಲ್ಲಿನ ಪಾಲಿಕೆ ಸದಸ್ಯರಾದ ಭಾಗ್ಯಲಕ್ಷ್ಮೇ ಮುರುಳಿ ಮನವಿ ಮಾಡಿಕೊಂಡಿದ್ದಾರೆ.