Asianet Suvarna News Asianet Suvarna News

ನನ್ನ ಸ್ಪರ್ಧೆಯಿಂದ ರವೀಂದ್ರ, ರಮೇಶ್‌ ವಿಚಲಿತ: ವೆಂಕಟೇಶ್‌

ಹಣ ಬಲವುಳ್ಳ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್‌ಬಾಬು ಅವರು ನನ್ನ ಸ್ಪರ್ಧೆಯಿಂದ ವಿಚಲಿತರಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್‌ ಮನವಿ ಮಾಡಿದರು.

Ravindra  Ramesh distracted by my competition: Venkatesh snr
Author
First Published Jan 11, 2023, 6:31 AM IST

  ಮಂಡ್ಯ (ಜ. 11 ):  ಹಣ ಬಲವುಳ್ಳ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್‌ಬಾಬು ಅವರು ನನ್ನ ಸ್ಪರ್ಧೆಯಿಂದ ವಿಚಲಿತರಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್‌ ಮನವಿ ಮಾಡಿದರು.

ಕ್ಷೇತ್ರದಲ್ಲಿ ಅರಕೆರೆಯ ಈ ಎರಡು ಕುಟುಂಬಗಳೇ ಹಲವಾರು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಶಾಸಕರಾಗಿ ಆಡಳಿತ ಮಾಡಿದ್ದಾರೆ. ಆದರೆ, ಕ್ಷೇತ್ರ ನಿರೀಕ್ಷಿಸಿದಷ್ಟುಪ್ರಗತಿ ಸಾಧಿಸಿಲ್ಲ. ಹೀಗಾಗಿ ಜನರು ಬದಲಾವಣೆ ಬಯಸಿದ್ದಾರೆ. ಜನರ ನಡುವೆ ಇದ್ದು ಹೋರಾಟ ನಡೆಸಿಕೊಂಡು ಬಂದಿರುವ ನನ್ನ ಬಗ್ಗೆ ಮತದಾರರು ಒಲವು ವ್ಯಕ್ತಪಡಿಸಿರುವುದನ್ನು ಹಾಲಿ ಮತ್ತು ಮಾಜಿ ಶಾಸಕರಿಗೆ ಸಹಿಸಲಾಗದೆ ಹಣ ಬಲದಿಂದ ನನ್ನನ್ನು ಸ್ಪರ್ಧೆಯಿಂದ ಹಿಮ್ಮೆಟ್ಟಿಸುವ ಕುತಂತ್ರ ಮಾಡುತ್ತಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

15-20 ವರ್ಷಗಳ ಹಿಂದೆ ಇವರೆಲ್ಲ ಹೇಗಿದ್ದರು, ಈಗ ಎಷ್ಟೆಲ್ಲ ಹಣ-ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ಮತದಾರರ ಮುಂದೆ ಬಹಿರಂಗಪಡಿಸಲಿ. ನಾನೂ ಕೂಡ ಅವರು ಕರೆದ ದಿನ ಶ್ರೀರಂಗನಾಥಸ್ವಾಮಿಯ ಸನ್ನಿಧಿಗೆ ಬರುತ್ತೇನೆ. ಪ್ರಮಾಣ ಮಾಡೋಣ ಬನ್ನಿ ಎಂದು ಹಾಲಿ-ಮಾಜಿ ಶಾಸಕರಿಗೆ ಸವಾಲು ಹಾಕಿದರು.

ಇದಲ್ಲದೆ ಇಂಡುವಾಳು ಸಚ್ಚಿದಾನಂದ ಕೂಡ ನನ್ನ ಬಗ್ಗೆ ಸಲ್ಲದ ಮಾತನಾಡಿದ್ದಾರೆ. ತಗ್ಗಹಳ್ಳಿ ವೆಂಕಟೇಶ್‌ ಬಿಜೆಪಿ ಸೇರುತ್ತಾರೆ ಎಂದೆಲ್ಲಾ ಅಪಪ್ರಚಾರ ನಡೆಸುತ್ತಿರುವುದು ಕೇಳಿಬಂದಿದೆ. ಇವರೆಲ್ಲ ಕೋಟಿ ಕೋಟಿ ಹಣದ ಬಗ್ಗೆ ಮಾತನಾಡುತ್ತಾರೆ. ಇಷ್ಟೊಂದು ಹಣ ಹೇಗೆ ಬಂತು?, ಏನೆಲ್ಲ ಬೇನಾಮಿ ಆಸ್ತಿ ಮಾಡಿದ್ದೀರಿ ಎಂಬುದನ್ನು ಶ್ರೀರಂಗನಾಥನ ಮುಂದೆ ಬಹಿರಂಗಪಡಿಸಿ ಎಂದು ಪಂಥಾಹ್ವಾನ ನೀಡಿದರು.

ಕಳೆದ ಚುನಾವಣೆ ವೇಳೆ ರಮೇಶ್‌ಬಾಬು ಬಂಡಿಸಿದ್ದೇಗೌಡರು ಖಾಸಗಿ ಹೋಟೆಲೊಂದರಲ್ಲಿ ನನ್ನನ್ನು ಕರೆಸಿಕೊಂಡು, ನಿನ್ನನ್ನು ಜಿಪಂ ಅಧ್ಯಕ್ಷನನ್ನಾಗಿ ಮಾಡಿದ್ದೆ. ಆದ್ದರಿಂದ ಈಗ ಕಾಂಗ್ರೆಸ್‌ಗೆ ಬಂದುಬಿಡು ಎಂದು ಆಹ್ವಾನಿಸಿದ್ದರು. ಆಗಲೂ ನನಗೆ ದೇವೇಗೌಡ ಪಿತೃಸಮಾನರು ಮತ್ತು ಕುಮಾರಣ್ಣ ಸೋದರ ಸಮಾನ. ಹಾಗಾಗಿ ಅವರ ಬಗ್ಗೆ ಅಪಾರ ಗೌರವವಿದೆ. ಯಾವುದೇ ಕಾರಣಕ್ಕೂ ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ನಿರಾಕರಿಸಿ ಬಂದಿದ್ದೆ. ಹೀಗೆ ಕಳೆದ 30 ವರ್ಷಗಳಿಂದ ಜೆಡಿಎಸ್‌ ಪಕ್ಷಕ್ಕೆ ನಿಷ್ಠನಾಗಿ ಪಕ್ಷದ ಬ್ಯಾನರ್‌, ಫ್ಲೆಕ್ಸ್‌ ಹಾಕಿ ಆಟೋದಲ್ಲಿ ಪ್ರಚಾರ ನಡೆಸಿಕೊಂಡು ಪಕ್ಷಕ್ಕಾಗಿ ಶ್ರಮಿಸಿದವನು ನಾನು. ರಮೇಶ್‌ಬಾಬು ಹಾಗೂ ರವೀಂದ್ರ ಶ್ರೀಕಂಠಯ್ಯ ಅವರು ಶಾಸಕರಾಗಲು ನನ್ನ ಪರಿಶ್ರಮವೂ ಇದೆ. ಇದಕ್ಕಾಗಿ ನಾನು ಹಣ ಪಡೆದಿದ್ದೇನೆಂದು ಪುಕಾರು ಹಬ್ಬಿಸುವವರು ಬಂದು ಪ್ರಮಾಣ ಮಾಡಲಿ ಎಂದರು.

ಒಟ್ಟಾರೆ ಬರಲಿರುವ ಚುನಾವಣೆಯಲ್ಲಿ ಜಾ.ದಳ ನನ್ನ ಪಕ್ಷ ನಿಷ್ಠೆ ಗುರುತಿಸಿ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುವೆ. ಟಿಕೆಟ್‌ ಕೊಡದಿದ್ದರೆ ಬಂಡಾಯ ಅಥವಾ ಪಕ್ಷೇತರನಾಗಿಯಾದರೂ ಸರಿ ನನ್ನ ಸ್ಪರ್ಧೆ ಖಚಿತ ಎಂದು ಸ್ಪಷ್ಠಪಡಿಸಿದರು.

ಗೋಷ್ಠಿಯಲ್ಲಿ ಬೆಂಬಲಿಗರಾದ ತಾಪಂ ಮಾಜಿ ಉಪಾಧ್ಯಕ್ಷ ಮುರಳಿ, ಜಾ.ದಳ ಮುಖಂಡರಾದ ಸಿದ್ದರಾಜು, ಹನಿಯಂಬಾಡಿ ಸುರೇಶ್‌, ಮಂಜು, ನಿಂಗಯ್ಯ ಮತ್ತಿತರರಿದ್ದರು.

Follow Us:
Download App:
  • android
  • ios