ಹಣ ಸಂಗ್ರಹದ ಉದ್ದೇಶಕಲ್ಲದಿದ್ದರೂ, ಕೊರೋನಾದ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನಾದರೂ ಮಾಡಬಹುದು ಎಂಬ ಉದ್ದೇಶದಿಂದ  ಈ ಬಾರಿ ರವಿ ಕಟಪಾಡಿ ಡ್ರ್ಯಾಗನ್ ವೇಷ ಹಾಕಿದ್ದಾರೆ.

ಉಡುಪಿ (ಸೆ.11): ಉಡುಪಿಯ ಕೃಷ್ಣಾಷ್ಟಮಿ ಎಂದರೆ, ಈ ಬಾರಿ ರವಿ ಕಟಪಾಡಿ ಅವರದ್ದು ಯಾವ ವೇಷ ಎಂದು ಜನರು ಕೇಳುವಷ್ಟುಅವರು ಜನಪ್ರಿಯರಾಗಿದ್ದಾರೆ. ಅವರು ಜನಪ್ರಿಯರಾಗಿರುವುದು ಅವರು ಹಾಕುವ ಚಿತ್ರವಿಚಿತ್ರ ವೇಷಗಳಿಂದಷ್ಟೇ ಅಲ್ಲ, ವೇಷ ಹಾಕಿ ಜನರ ಮುಂದೆ ಹೋಗಿ ಸಂಗ್ರಹಿದ ಲಕ್ಷಾಂತರರ ರು.ಗಳನ್ನು, ಮಾರಣಾಂತಿಕ ಕಾಯಿಲೆಯ ಚಿಕಿತ್ಸೆಗೆ ಹಣ ಇಲ್ಲದೆ ಒದ್ದಾಡುತ್ತಿರುವ ಬಡವರ ಮನೆಯ ಮಕ್ಕಳಿಗೆ ನೀಡುವ ಸಹೃದಯ ಕಾಳಜಿಯಿಂದಾಗಿಯೂ ಜನಮನ ಗೆದ್ದಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಾರಿ ಕೊರೋನಾ ಮಹಾಮಾರಿಯಿಂದಾಗಿ ಕೃಷ್ಣಾಷ್ಟಮಿ ಯಾವುದೇ ಉತ್ಸವ, ಉತ್ಸಾಹ, ಗೌಜಿ ಗದ್ದಲ ಇಲ್ಲದೇ ನಡೆಯುತ್ತಿದೆ. ಆದರೂ ರವಿ ಕಟಪಾಡಿ ಅವರ ಮನಸ್ಸು ಕೇಳುತ್ತಿಲ್ಲ. ಹಣ ಸಂಗ್ರಹದ ಉದ್ದೇಶಕಲ್ಲದಿದ್ದರೂ, ಕೊರೋನಾದ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನಾದರೂ ಮಾಡಬಹುದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಅವರ ವಿಶೇಷ ಪರವಾನಗಿ ಪಡೆದು ವೇಷ ಹಾಕಿದ್ದಾರೆ.

ಉಡುಪಿ: ಸಂಪ್ರದಾಯಕ್ಕೆ ಸೀಮಿತವಾಗಿ ನಡೆದ ಕೃಷ್ಣ ಜನ್ಮಾಷ್ಟಮಿ

ಈ ಬಾರಿ ಅವರು ಹಾಕಿರುವ ವೇಷದ ಕೊರೋನಾ ಡ್ರ್ಯಾಗನ್‌. ಎತ್ತರದ ಭಯ ಮೂಡಿಸುವಂತಹ ವೇಷ ಹಾಕಿಕೊಂಡು ಜಾಗ್ರತೆ ವಹಿಸಿ, ಸಾಮಾಜಿಕ ಅಂತರ ಪಾಲಿಸಿ, ಇಲ್ಲದಿದ್ದರೆ ನನ್ನಂತಹ ಕೊರೋನಾ ಡ್ರ್ಯಾಗನ್‌ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ಅಬ್ಬರಿಸುತ್ತಾ ಜನರನ್ನು ಎಚ್ಚರಿಸುತಿದ್ದಾರೆ ರವಿ.

ಕಟ್ಟಡ ಕಾರ್ಮಿಕನಾಗಿರುವ ರವಿ ಕಳೆದ 10 ವರ್ಷಗಳಿಂದ 50 ಲಕ್ಷ ರು.ಗಳಿಗೂ ಅಧಿಕ ಹಣವನ್ನು ವೇಷ ಹಾಕಿಯೇ ಸಂಗ್ರಹಿಸಿ, 58 ಮಂದಿ ಬಡ ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡಿದ್ದಾರೆ. ಹಿಂದಿನ 9 ವರ್ಷಗಳಲ್ಲಿ ಅವರು 35 ಲಕ್ಷ ರು.ಗಳನ್ನು ವಿತರಿಸಿದ್ದರೆ, ಕಳೆದ ಒಂದೇ ವರ್ಷದಲ್ಲಿ ಅವರು 15 ಲಕ್ಷ ರು.ಗಳನ್ನು ವಿತರಿಸಿದ್ದಾರೆ.

2 ದಿನಗಳ ಕಾಲ ವೇಷದೊಳಗೆ ಇರುವ ರವಿ ಅವರಿಗೆ ಊಟ, ನೀರಡಿಕೆ, ಶೌಚ ಇತ್ಯಾದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ, ನಿದ್ರೆಯೂ ಇರುವುದಿಲ್ಲ. ಆದರೆ ತನಗಾಗುವ ಈ ತೊಂದರೆ ಬಡಕುಟುಂಬಗಳ ಮಕ್ಕಳ ನೋವಿನ ಮುಂದೆ ಮರೆತುಹೋಗುತ್ತದೆ ಎನ್ನುತ್ತಾರೆ ರವಿ.