ಬೆನ್ನುಮೂಳೆಯ ತಳಭಾಗದ ನರಜೀವಕೋಶದಲ್ಲಿ ಗಡ್ಡೆ| ಮಣಿಪಾಲ್‌ ಆಸ್ಪತ್ರೆಯ ಐವರು ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ|ಓರಿಸ್ಸಾ ಮೂಲದ ಜಗದೀಶ್‌ ರಥ ಅವರಿಗೆ ಶಸ್ತ್ರಚಿಕಿತ್ಸೆ|

ಬೆಂಗಳೂರು(ಫೆ.20): ಬೆನ್ನುಮೂಳೆಯ ತಳಭಾಗದ ನರಜೀವಕೋಶಗಳಲ್ಲಿ ಕಂಡುಬರುವ ಅಪರೂಪದ ಪ್ಯಾರಾಗ್ಯಾಂಗ್ಲಿಯೋಮಾ ಗಡ್ಡೆ ಹೊಂದಿದ್ದ 36 ವರ್ಷದ ಓರಿಸ್ಸಾ ಮೂಲದ ಜಗದೀಶ್‌ ರಥ ಅವರಿಗೆ ಮಣಿಪಾಲ್‌ ಆಸ್ಪತ್ರೆಯ ಐವರು ವೈದ್ಯರ ತಂಡ ಸತತ ಹತ್ತು ಗಂಟೆಗಳ ಕಾಲ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ನಾಳ ಗ್ರಂಥಿಶಾಸ್ತ್ರ ಸಲಹಾ ತಜ್ಞ ಡಾ.ಕಾರ್ತಿಕ್‌ ಪ್ರಭಾಕರ್‌, ಇತ್ತೀಚಿನ ಅಧ್ಯಯನದ ಪ್ರಕಾರ ಪ್ರತಿ ವರ್ಷ 10 ಲಕ್ಷ ಜನರಲ್ಲಿ ಒಬ್ಬರಿಗೆ ಈ ರೀತಿಯ ಗಡ್ಡೆಗಳು ಕಂಡು ಬರುತ್ತವೆ. ಶೇ.02ರಷ್ಟು ಕಡಿಮೆ ಜನರಲ್ಲಿ ಇದು ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಈ ಗಡ್ಡೆಯಿಂದ ಕ್ಯಾಟೆಕೋಲಾಮೈನ್‌ ಹಾರ್ಮೋನ್‌ ಹೆಚ್ಚಾಗಿ ಸ್ರವಿಸುತ್ತಿದ್ದರಿಂದ ಪಾಶ್ರ್ವವಾಯು, ಹೃದಯಾಘಾತ ಸೇರಿದಂತೆ ಇನ್ನಿತರೆ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುವ ಅಪಾಯವಿತ್ತು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಪ್ರವೀಣ್‌ ಎಂ.ಗಾಣಗಿ ಮಾತನಾಡಿ, ಬೆನ್ನುಮೂಳೆಯ ಪ್ಯಾರಾಗ್ಯಾಂಗ್ಲಿಯೋಮಾ ಅಪರೂಪದ ಪ್ರಕರಣ. ಇದುವರೆಗೆ ಸುಮಾರು 90 ಪ್ರಕರಣಗಳು ಕಂಡುಬಂದಿವೆ. 30ರಿಂದ 50 ವರ್ಷದೊಳಗಿನ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ರೋಗಿಗೆ ಶಸ್ತ್ರಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ನಡೆಸಲಾಗಿದೆ. ಈ ಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು 10 ಗಂಟೆಗಳ ಕಾಲ ವೈದ್ಯರು, ಸಿಬ್ಬಂದಿ ತಂಡ ನಡೆಸಿದ್ದಾರೆ ಎಂದರು.ಈ ವೇಳೆ ಅರವಳಿಕೆ ತಜ್ಞ ಡಾ ಜಿ.ಎಸ್‌.ನಾಗರಾಜ ಪ್ರಭಾಕರ್‌, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಗದೀಶ್‌ ರಥ ಇನ್ನಿತರರು ಉಪಸ್ಥಿತರಿದ್ದರು.