Asianet Suvarna News Asianet Suvarna News

ಅಪರೂಪದ ರಾಜಕಾರಣಿ ಧ್ರುವನಾರಾಯಣ್‌ :ಪ್ರೊ. ಮಹೇಶ್‌ ಚಂದ್ರಗುರು

ಒಂದು ಮತದಿಂದ ಗೆಲ್ಲುವ ಮೂಲಕ ಒಂದು ಮತಕ್ಕೆ ಎಷ್ಟುಮೌಲ್ಯ ಇದೆ ಎಂಬುದನ್ನು ಜಗತ್ತಿಗೆ ತೋರಿಸಿ, ಅಭಿವೃದ್ಧಿಗಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದ ಅಪರೂಪದ ರಾಜಕಾರಣಿ ಆರ್‌. ಧ್ರುವನಾರಾಯಣ್‌ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ಬಿ.ಪಿ. ಮಹೇಶ್‌ ಚಂದ್ರಗುರು ತಿಳಿಸಿದರು.

Rare Politician Dhruvanarayan  Mahesh Chandraguru snr
Author
First Published Mar 19, 2023, 5:23 AM IST

  ಮೈಸೂರು : ಒಂದು ಮತದಿಂದ ಗೆಲ್ಲುವ ಮೂಲಕ ಒಂದು ಮತಕ್ಕೆ ಎಷ್ಟುಮೌಲ್ಯ ಇದೆ ಎಂಬುದನ್ನು ಜಗತ್ತಿಗೆ ತೋರಿಸಿ, ಅಭಿವೃದ್ಧಿಗಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದ ಅಪರೂಪದ ರಾಜಕಾರಣಿ ಆರ್‌. ಧ್ರುವನಾರಾಯಣ್‌ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ಬಿ.ಪಿ. ಮಹೇಶ್‌ ಚಂದ್ರಗುರು ತಿಳಿಸಿದರು.

ನಗರದ ವಾಲ್ಮೀಕಿ ರಸ್ತೆಯಲ್ಲಿರುವ ಲೀಲಾ ಚೆನ್ನಯ್ಯ ಸಭಾಂಗಣದಲ್ಲಿ ಶನಿವಾರ ನಡೆದ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಆರ್‌. ಧ್ರುವನಾರಾಯಣ್‌ ವಿದ್ಯಾರ್ಥಿ ದಿಸೆಯಲ್ಲೇ ಎನ್‌ಎಸ್‌ಯುಐ ಘಟಕದ ಮೂಲಕ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಪ್ರಾರಂಭ ಮಾಡಿದರು ಎಂದರು.

ಕಾಂಗ್ರೆಸ್‌ ಮುಖಂಡ ಕೆ. ಹರೀಶ್‌ಗೌಡ ಮಾತನಾಡಿ, ಆರ್‌. ಧ್ರುವನಾರಾಯಣ್‌ ಅವರ ಹೆಸರು ಮುಂದೆ ಅಜರಾಮರರಾಗಿರಬೇಕು ಎಂಬುದು ನಮ್ಮೆಲ್ಲರ ಆಸೆ, ಕನಿಷ್ಠ 3 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತಿ ಪ್ರಧಾನ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಕಾಂಗ್ರೆಸ್‌ ನಗರಾಧÜ್ಯಕ್ಷ ಆರ್‌. ಮೂರ್ತಿ, ಮಾಜಿ ಮೇಯರ್‌ಗಳಾದ ಬಿ.ಕೆ. ಪ್ರಕಾಶ್‌, ಪುರುಷೋತ್ತಮ್‌, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಪ್ರೊ. ನಂಜರಾಜೇ ಅರಸ್‌, ಮುಖಂಡರಾದ ಪುಷ್ಪವಲ್ಲಿ, ಅಶೋಕ್‌, ರವಿಶಂಕರ್‌, ಗೋಪಿನಾಥ್‌, ಡಿ. ನಾಗಭೂಷಣ್‌, ಡಾ. ಸುಜಾತ ರಾವ್‌, ಸುನಂದಕುಮಾರ್‌, ದ್ಯಾವಪ್ಪನಾಯಕ ಮೊದಲಾದವರು ಇದ್ದರು.

ಧ್ರುವನಾರಾಯಣ್ ಪುತ್ರಗೆ ಟಿಕೆಟ್ ನೀಡಲಿ

ಮೈಸೂರು : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಆರ್‌. ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಆಗ್ರಹಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್‌. ಧ್ರುವನಾರಾಯಣ್‌ ಅವರು ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ತುಂಬಾ ಶ್ರಮಿಸಿದ್ದಾರೆ. ಅವರ ಸಾವಿನ ಸಮಯದಲ್ಲಿ ಅವರ ಮೇಲೆ ಜನರಿಗೆ ಎಷ್ಟುಪ್ರೀತಿ ಅಭಿಮಾನವಿತ್ತು ಎಂಬುದು ವ್ಯಕ್ತವಾಗಿದೆ. ಧ್ರುವನಾರಾಯಣ್‌ ಸರಳ ಸಜ್ಜನ ರಾಜಕಾರಣಿಯಾಗಿದ್ದರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಧ್ರುವನಾರಾಯಣ್‌ ಅವರ ಪತ್ನಿ ಕೂಡಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಂಜನಗೂಡು ಕ್ಷೇತ್ರದ ಟಿಕೆಟನ್ನು ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ಗೆ ನೀಡಬೇಕು. ಆ ಮೂಲಕ ಧ್ರುವನಾರಾಯಣ್‌ ಅವರ ಕುಟುಂಬದ ಜೊತೆ ಕಾಂಗ್ರೆಸ್‌ ಪಕ್ಷ ಇದೆ ಎಂಬ ಸಂದೇಶ ರವಾನಿಸಬೇಕು ಎಂದು ಅವರು ತಿಳಿಸಿದರು.

ಪ್ರಸ್ತುತ ರಾಜಕಾರಣದಲ್ಲಿ ರಿಯಲ್‌ ಎಸ್ಟೇಟ್‌ನವರು, ರೌಡಿಶೀಟರ್‌ ಹಿನ್ನೆಲೆಯುಳ್ಳವರು ಹೆಚ್ಚಿದ್ದಾರೆ. ವಕೀಲರು ರಾಜಕೀಯದಲ್ಲಿ ಇರುವುದು ತುಂಬಾ ಕಡಿಮೆ. ಹೀಗಾಗಿ ವಕೀಲರಾಗಿರುವ ದರ್ಶನ್‌ಗೆ ನಂಜನಗೂಡು ಟಿಕೆಟ್‌ ನೀಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಹಾಗೂ ರಾಜ್ಯದ ಹಿರಿಯ ನಾಯಕರು ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

—ಬಿಜೆಪಿ ರಾಜ್ಯ ನಾಯಕರು ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ಬಂದಾಗ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಮೃತಪಟ್ಟಬಗ್ಗೆ ಸೌಜನ್ಯಕ್ಕಾದರೂ ಪ್ರಸ್ತಾಪ ಮಾಡುವಂತೆ ತಿಳಿಸಬಹುದಿತ್ತು. ಆದರೆ, ಅದ್ಯಾವುದೋ ಉರಿಗೌಡ, ನಂಜೇಗೌಡರ ಹೆಸರು ಹೇಳಿಕೊಂಡು ಭಾವನಾತ್ಮಕ ವಿಚಾರ ತಂದು ಮತಬೇಟೆ ಕೆಲಸ ಮಾಡುತ್ತಿದ್ದಾರೆ. ರೌಡಿಶೀಟರ್‌ಗಳನ್ನು ಕರೆದುಕೊಂಡು ಹೋಗಿ ಪ್ರಧಾನಿಯವರ ಮುಂದೆ ನಿಲ್ಲಿಸಿದ್ದಾರೆ.

- ಎಚ್‌. ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ

ಧ್ರುವ ಪುತ್ರಗೆ ನಂಜನಗೂಡು ಕಾಂಗ್ರೆಸ್‌ ಟಿಕೆಟ್‌?

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಅವರ ಪುತ್ರ ದರ್ಶನ್‌ಗೆ ದೊರೆಯುವ ಸಾಧ್ಯತೆಗಳಿವೆ.

ಲಂಡನ್‌ನಲ್ಲಿ ಎಲ್‌ಎಲ್‌ಎಂ ವಿದ್ಯಾಭ್ಯಾಸ ಮುಗಿಸಿ ಬಂದಿರುವ ದರ್ಶನ್‌ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ದರ್ಶನ್‌ ಹಾಗೂ ಅವರ ಕುಟುಂಬ ಆಸಕ್ತಿ ತೋರಿದರೆ ಮೊದಲ ಆದ್ಯತೆಯಾಗಿ ಅವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆಯಿದೆ. ಒಂದು ವೇಳೆ ಅವರ ಕುಟುಂಬ ಒಪ್ಪದಿದ್ದರೆ ಮಾತ್ರ ಮೊದಲಿನಿಂದಲೂ ಟಿಕೆಟ್‌ಗೆ ಯತ್ನಿಸುತ್ತಿರುವ ಎಚ್‌.ಸಿ.ಮಹದೇವಪ್ಪ ಅವರ ಹೆಸರು ಪರಿಗಣಿಸಬಹುದು ಎಂದು ತಿಳಿದುಬಂದಿದೆ.

Follow Us:
Download App:
  • android
  • ios