* ಆರ್‌ಎಟಿ ನೆಗೆಟಿವ್‌ ಇದ್ದರಷ್ಟೇ ಪ್ರವೇಶ* ಕೊಡಗು ಜಿಲ್ಲೆಯಿಂದ ಕೇರಳಕ್ಕೆ ತೆರಳುವವರಿಗೆ ನಿರ್ಬಂಧವಿಲ್ಲ* ಕೇರಳದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಕೊಡಗು ಗಡಿಯಲ್ಲಿ ತಪಾಸಣೆ ಬಿಗಿ

ಮಡಿಕೇರಿ(ಜು.10): ಪಾಸಿಟಿವಿಟಿ ರೇಟ್‌ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕೊಡಗು ಪ್ರವಾಸೋದ್ಯಮಕ್ಕೆ ವಿಧಿಸಲಾಗಿದ್ದ ನಿರ್ಬಂಧ ಇದೀಗ ಸಡಿಲಗೊಳಿಸಲಾಗಿದ್ದು ಸರ್ಕಾರದ ಮಾರ್ಗಸೂಚಿಯಂತೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರವಾಸಿಗರೂ ಸೇರಿದಂತೆ ಜಿಲ್ಲೆಯನ್ನು ಪ್ರವೇಶಿಸುವ ಪ್ರತಿಯೊಬ್ಬರಿಗೂ ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ಟ್‌(ಆರ್‌ಎಟಿ)ನಲ್ಲಿ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ. 

ಆರ್‌ಎಟಿ ಮಾಡುವ ಸಲುವಾಗಿಯೇ ಜಿಲ್ಲಾ ಗಡಿಗಳಲ್ಲಿ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಬಳಿಕವೇ ಜಿಲ್ಲೆಗೆ ಪ್ರವೇಶಾವಕಾಶ ನೀಡಲಾಗುವುದು ಎಂದು ಚಾರುಲತಾ ಸೋಮಲ್‌ ತಿಳಿಸಿದ್ದಾರೆ.

ಈಗ ಕೊಡಗು ಜಿಲ್ಲೆಯೂ ಅನ್‌ಲಾಕ್‌: ಹೋಮ್‌ಸ್ಟೇ, ರೆಸಾರ್ಟ್‌ ಓಪನ್‌

ನಗರದಲ್ಲಿ ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಅನ್‌ಲಾಕ್‌ ನಿಯಮಗಳು ಕೊಡಗಿಗೂ ಅನ್ವಯವಾಗಲಿದೆ. ಪ್ರವಾಸೋದ್ಯಮಕ್ಕೆ ಅವಕಾಶ ಇರಲಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗಡಿಯಲ್ಲಿ ಆರ್‌ಎಟಿ ಕಡ್ಡಾಯ: 

ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗೆ ಮಾತ್ರ ನಿಯಂತ್ರಣ ಇರಲಿದ್ದು, ಉಳಿದಂತೆ ಯಾವುದೇ ನಿರ್ಬಂಧವಿರುವುದಿಲ್ಲ. ಕೇರಳದಲ್ಲಿ ಕೊರೋನಾ ವೈರಸ್‌ ಹೆಚ್ಚಳ ಹಿನ್ನೆಲೆಯಲ್ಲಿ ಕೊಡಗು ಗಡಿಯಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದೇವೆ. ಆರೋಗ್ಯ ಇಲಾಖೆ ವತಿಯಿಂದ ಆರ್‌ಎಟಿ ಮಾಡಿಸುತ್ತಿದ್ದೇವೆ. ನೆಗೆಟಿವ್‌ ರಿಪೋರ್ಟ್‌ ಇದ್ದವರಿಗೆ ಮಾತ್ರ ಕೊಡಗಿಗೆ ಪ್ರವೇಶ ನೀಡಲಾಗುತ್ತಿದೆ. ಜಿಲ್ಲೆಯಿಂದ ಕೇರಳಕ್ಕೆ ತೆರಳುವವರಿಗೆ ಯಾವುದೇ ನಿರ್ಬಂಧವಿಲ್ಲ. ಅದೇ ರೀತಿಯಲ್ಲಿ ಜಿಲ್ಲೆಯ ಮೂಲಕ ಅನ್ಯ ಜಿಲ್ಲೆಗಳಿಗೆ ಸ್ವಂತ ವಾಹನಗಳಲ್ಲಿ ತೆರಳುವವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.