ಶೆಟ್ಟರ್, ಜೋಶಿ ಜೊತೆ ಜಾರಕಿಹೊಳಿ ಮಾತುಕತೆ: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ
ಹೋಟೆಲ್ನಲ್ಲಿ ಪರಸ್ಪರ ಚರ್ಚೆ ನಡೆಸಿದ ಜೋಶಿ ಹಾಗೂ ಜಾರಕಿಹೊಳಿ| ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವ ಹಿನ್ನೆಲೆಯಲ್ಲಿ ಜೋಶಿ ಅವರೊಂದಿಗೆ ಚರ್ಚೆ ನಡೆಸಿದ ಜಾರಕಿಹೊಳಿ|
ಹುಬ್ಬಳ್ಳಿ(ಜ.16): ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ದಿಢೀರ್ ಹುಬ್ಬಳ್ಳಿಗೆ ಆಗಮಿಸಿ ಸಚಿವರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಅವರೊಂದಿಗೆ ಕೆಲಕಾಲ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಹುಬ್ಬಳ್ಳಿ ಫ್ಲೈಓವರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಮುಗಿದ ನಂತರ ಸ್ಥಳಕ್ಕೆ ಜಾರಕಿಹೊಳಿ ಆಗಮಿಸಿದ್ದರು. ಈ ವೇಳೆ ಹೋಟೆಲ್ನ ಲಾಂಜ್ನಲ್ಲೇ ಶೆಟ್ಟರ್ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಕೆಲಕಾಲ ಚರ್ಚೆ ನಡೆಸಿದರು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಲ್ಲಿದ್ದರೂ ಅವರಿಂದ ಸ್ವಲ್ಪ ದೂರದಲ್ಲಿ ಸಚಿವರಿಬ್ಬರೇ ಗೌಪ್ಯವಾಗಿ ಚರ್ಚೆ ನಡೆಸಿದ್ದು ಚರ್ಚೆಗೆ ಕಾರಣವಾಗಿತ್ತು.
'ರಮೇಶ್ ಮುಸ್ಲಿಂ ಟೋಪಿ ಹಾಕಿದ್ದು, ಕರಿ ಟೋಪಿಯಲ್ಲ'
ಇದೇ ವೇಳೆ ಚೆನ್ನಮ್ಮ ಸರ್ಕಲ್ಗೆ ತೆರಳಲು ಕಾರಿನಲ್ಲಿ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಾರಕಿಹೊಳಿ ಅವರನ್ನು ನೋಡಿ ಕಾರು ನಿಲ್ಲಿಸಿದರು. ಕಾರ್ಯಕ್ರಮ ಮುಗಿಸಿ ಬರುತ್ತೇನೆ ಎಂದು ಜಾರಕಿಹೊಳಿ ಅವರಿಗೆ ಹೇಳಿ ಜೋಶಿ ತೆರಳಿದರು. ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್ನಲ್ಲಿ ಜೋಶಿ ಹಾಗೂ ಜಾರಕಿಹೊಳಿ ಪರಸ್ಪರ ಚರ್ಚೆ ನಡೆಸಿದರು. ಜ.17ಕ್ಕೆ ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವ ಹಿನ್ನೆಲೆಯಲ್ಲಿ ಜೋಶಿ ಅವರೊಂದಿಗೆ ಜಾರಕಿಹೊಳಿ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.