Asianet Suvarna News Asianet Suvarna News

ರಾಮನಗರದಲ್ಲಿ ಡೆಂಘೀ ಜ್ವರಕ್ಕೆ 19 ವರ್ಷದ ಕಾಲೇಜು ಯುವತಿ ಬಲಿ

ರಾಮನಗರ ಜಿಲ್ಲೆಯಲ್ಲಿ 19 ವರ್ಷದ ಕಾಲೇಜು ಯುವತಿಯೊಬ್ಬಳು ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾಳೆ ಎಂದು ಖಾಸಗಿ ಆಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದೆ.

Ramanagara 19 year old college girl succumbed from dengue fever sat
Author
First Published Jul 18, 2024, 7:18 PM IST | Last Updated Jul 18, 2024, 7:18 PM IST

ಬೆಂಗಳೂರು (ಜು.18): ರಾಜ್ಯದಲ್ಲಿ ಡೆಂಘೀ ಆರ್ಭಟ ಮುಂದುವರೆದಿದ್ದು ರಾಮನಗರ ಜಿಲ್ಲೆಯಲ್ಲಿ 19 ವರ್ಷದ ಕಾಲೇಜು ಯುವತಿಯೊಬ್ಬಳು ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾಳೆ ಎಂದು ಖಾಸಗಿ ಆಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದೆ.

ಮೃತ ಯುವತಿಯನ್ನು ರಾಮನಗರ ಜಿಲ್ಲೆಯ ಮಾಗಡಿ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪಟ್ಟಣದ ಮಹಾತ್ಮನಗರ ಬಡಾವಣೆ ನಿವಾಸಿ ಹೇಮಾ (19) ಎಂದು ಗುರುತಿಸಲಾಗಿದೆ. ಇದು ರಾಮನಗರ ಜಿಲ್ಲೆಯಲ್ಲಿ ಡೆಂಘೀ ಜ್ವರಕ್ಕೆ ಬಲಿಯಾದ ಮೊದಲ ಪ್ರಕರಣವಾಗಿದೆ. ಕೂದೂರು ಪಟ್ಟಣದ ಸುರೇಶ್ ಹಾಗೂ ನಳಿನಿ ಎಂಬುವವರ ಪುತ್ರಿ ಹೇಮಾ, ಪ್ರಥಮ ವರ್ಷದ ಬಿ.ಕಾಂ. ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಾಲೇಜಿಗೆ ಹೋಗಿ ಬರುತ್ತಿದ್ದ ಹೇಮಾಗೆ ಕಳೆದ‌ 15 ದಿನದ ಹಿಂದೆ ಜ್ವರ ಕಾಣಿಸಿಕೊಂಡಿದೆ. 

ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 293 ಮಂದಿಗೆ ಡೆಂಘೀ ಜ್ವರ ದೃಢ

ಇದ್ದಕ್ಕಿದ್ದಂತೆ ಜ್ವರ ತೀರ್ವ ಹೆಚ್ಚಳವಾದ ಬೆನ್ನಲ್ಲಿಯೇ ಆಕೆಯನ್ನು ಆಸ್ಪತ್ರೆ ದಾಖಲು ಮಾಡಿದ್ದಾರೆ. ಆದರೆ, ಇದಕ್ಕೂ ಮೊದಲೇ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದ ಕಾಲೇಜು ಯುವತಿ ಹೇಮಾಗೆ ಡೆಂಘೀ ಜ್ವರ ಮತ್ತಷ್ಟು ಬಾಧಿಸುವಂತೆ ಮಾಡಿದೆ. ರಾಮನಗರದಲ್ಲಿನ ಆಸ್ಪತ್ರೆ ಚಿಕಿತ್ಸೆಗಿಂತ ಉತ್ತಮ ಚಿಕಿತ್ಸೆ ಕೊಡಿಸುವುದಕ್ಕಾಗಿ ಹೇಮಾಳ ತಂದೆ ತಾಯಿ ಮಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಇನ್ನು ಕುದೂರು ಪಟ್ಟಣದ ಮಹಾತ್ಮನಗರ ಬಡಾವಣೆಗೆ ತಾಲೂಕು ವೈದ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬಡಾವಣೆಯಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡಿದ್ದು, ಸೊಳ್ಳೆ ಉತ್ಪಾದನಾ ತಾಣಗಳನ್ನು ನಿಯಂತ್ರಣ ಮಾಡಿದ್ದಾರೆ. ಜೊತೆಗೆ, ಸೊಳ್ಳೆ ಉತ್ಪಾದನೆಗೆ ಅವಕಾಶ ಆಗುವಂತಹ ಅನೈರ್ಮಲ್ಯ, ಗುಂಡಿಗಳು, ನೀರು ನಿಲ್ಲುವಂತಹ ಎಲ್ಲವನ್ನೂ ಮುಕ್ತಗೊಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಡೆಂಘೀ ಜ್ವರದ ಲಕ್ಷಣಗಳು:

  • ಡೆಂಘೀ, ಏಡಿಸ್ ಸೊಳ್ಳೆಗಳಿಂದ ಹರಡುತ್ತದೆ.
  • ತೀವ್ರತರವಾದ ಜ್ವರ.
  • ತೀವ್ರ ತಲೆನೋವು.
  • ಕಣ್ಣುಗಳ ಹಿಂದೆ ನೋವು.
  • ಕೀಲು ಮತ್ತು ಸ್ನಾಯು ನೋವು. 
  • ಕೆಲವು ಸಂದರ್ಭಗಳಲ್ಲಿ ಹೆಮರಾಜಿಕ್ ಜ್ವರದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಗುದು. 
  • ಡೆಂಘೀ ಜ್ವರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.

ರಾಜ್ಯಾದ್ಯಂತ ಡೆಂಗ್ಯೂ ಹೆಚ್ಚಳ: ಮೆಡಿಕಲ್‌ ಎಮರ್ಜೆನ್ಸಿ ಘೋಷಣೆಗೆ ಸಂಸದ ಜಗದೀಶ್ ಶೆಟ್ಟರ್‌ ಒತ್ತಾಯ

ಡೆಂಘೀ ತಡೆಗಟ್ಟಲು, ಪ್ಲೇಟ್‌ಲೇಟ್ ಹೆಚ್ಚಿಸಲು ಈ ಕ್ರಮ ಅನುಸರಿಸಿ:
ಸೋಂಕಿನ ವಿರುದ್ಧ ಹೋರಾಡಲು ಮತ್ತು ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೇಹದ ಸಾಮರ್ಥ್ಯವನ್ನು ಬೆಂಬಲಿಸಲು ಇಂತಹ ಏಕಾಏಕಿ ಸಮಯದಲ್ಲಿ ಆರೋಗ್ಯಕರ ಪ್ಲೇಟ್‌ಲೆಟ್ ಸಂಖ್ಯೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉತ್ತಮ ಆಹಾರ ಸೇವನೆ, ಹೆಚ್ಚು ನೀರು ಸೇವನೆ, ಜ್ಯೂಸ್ ಸೇವನೆ, ಪಪ್ಪಾಯಿ ಎಲೆಯ ರಸ ಕುಡಿಯುವುದು, ಹಣ್ಣು, ತರಕಾರಿಗಳ ಸೇವನೆಯನ್ನು ಹೆಚ್ಚು ಮಾಡಬೇಕು. ಸೊಳ್ಳೆ ಕಡಿತದಿಂದ ದೂರವಿರಬೇಕು. ಸೊಳ್ಳೆ ಉತ್ಪತ್ತಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. 

Latest Videos
Follow Us:
Download App:
  • android
  • ios