ಮುಂಗಾರು ಹಂಗಾಮಿನ ಭತ್ತ ತೆನೆ ತುಂಬಿ ಬಾಗಿ ಗದ್ದೆಗಳಲ್ಲಿ ಬೆಳೆ ಮಾಗಿ ನಿಂತಿದೆ. ಆದರೆ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ, ಒಮ್ಮಲೇ ಸುರಿಯುವ ಮಳೆ, ಕಣ್ಣಾ ಮುಚ್ಚಾಲೆಯ ಮಳೆಯಾತಂಕ ಅನ್ನದಾತರ ನಿದ್ದೆಗೆಡಿಸಿದೆ.

 ಎಸ್‌.ಆರ್‌. ಪ್ರಕಾಶ್‌

Add Asianetnews Kannada as a Preferred SourcegooglePreferred

 ಸಾಲಿಗ್ರಾಮ (ಡಿ.13): ಮುಂಗಾರು ಹಂಗಾಮಿನ ಭತ್ತ ತೆನೆ ತುಂಬಿ ಬಾಗಿ ಗದ್ದೆಗಳಲ್ಲಿ ಬೆಳೆ ಮಾಗಿ ನಿಂತಿದೆ. ಆದರೆ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ, ಒಮ್ಮಲೇ ಸುರಿಯುವ ಮಳೆ, ಕಣ್ಣಾ ಮುಚ್ಚಾಲೆಯ ಮಳೆಯಾತಂಕ ಅನ್ನದಾತರ ನಿದ್ದೆಗೆಡಿಸಿದೆ.

ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಕೃಷ್ಣ ರಾಜನಗರ ತಾಲೂಕಿನ ಸುಮಾರು 25 ಸಾವಿರಕ್ಕೂ ಅಧಿಕ ಹೆಕ್ಟೇರ್‌ ನೀರಾವರಿ ಅಚ್ಚುಕಟ್ಟು ಪ್ರದೇಶಗಳ ಗದ್ದೆಗಳಲ್ಲಿ (Paddy Field) ಸಮೃದ್ಧಿಯಾಗಿ ತುಂಬಿದ ಭತ್ತದ ತೆನೆ ಬಾಗಿ ನಿಂತಿದೆ, ಕೆಲವೆಡೆ ಭತ್ತದ ಕಟಾವು ಮುಗಿಸಿ ವರ್ಷದ ಕೂಳು ಮನೆ ಸೇರಿದೆ. ಆದರೆ ಬಹುತೇಕ ಕಡೆಗಳಲ್ಲಿ ಕಟಾವು ಆರಂಭದ ಹಂತಕ್ಕೆ ತಲುಪಿ ರೈತರ (Farmers) ಬಾಳಲ್ಲಿ ಆಶಾಕಿರಣದ ಮಂದಹಾಸ ಮೂಡಿ ಸುಗ್ಗಿ-ಹುಗ್ಗಿ ಇಷ್ಟೋತ್ತಿಗೆಲ್ಲ ಸಂಭ್ರಮ ಕಳೆಕಟ್ಟುತ್ತಿತ್ತು, ಆದರೆ ಕಷ್ಟಪಟ್ಟು ಬೆಳೆದ ಬೆಳೆ ಕೈಸೇರುವ ಸಮಯಕ್ಕೆ ಸುರಿಯುತ್ತಿರುವ ಅಕಾಲಿಕ ಮಳೆ ರೈತರ ಬಾಳಿಗೆ ಮೊಗ್ಗಲ ಮುಳ್ಳಾಗಿರುವುದು ಕಳವಳಕ್ಕೀಡು ಮಾಡಿದೆ.

ಒಂದಿಷ್ಟುಒಣ ಹವೆ ವಾತಾವರಣವಿದ್ದರೂ, ಮೋಡ ಕವಿದ ವಾತಾವರಣ ಮಳೆ ಮುನ್ಸೂಚನೆ, ಒಮ್ಮೆಲೆ ಬಂದು ಹೋಗುತ್ತಿರುವ ಮಳೆಯ ಕಣ್ಣಾಮುಚ್ಚಾಲೆ. ನಿರೀಕ್ಷಿತ ಬೆಳೆದ ಬೆಳೆ ಮಳೆಗೆ ಸಿಲುಕಿ ಭತ್ತ, ರಾಗಿ ಪೈರಿನಲ್ಲೇ ಮೊಳಕೆಯೊಡೆಯುವ ಭೀತಿ. ಬಿಟ್ಟರೆ ಭತ್ತ ಉದುರುವುದು. ರೋಗ ರುಜಿನದಿಂದ ಇಳುವರಿ ಕುಂಠಿತ ಇನ್ನಿತರ ವಾಣಿಜ್ಯ ಬೆಳೆಗಳ ಕೃಷಿ ಚಟುವಟಿಕೆಗಳ ಸಮಸ್ಯೆಗಳ ಆತಂಕದ ನಡುವೆ ಕಟಾವು ಮುಗಿಸಿ ವರ್ಷದ ಕೂಳು ಉಳಿಸಿಕೊಳ್ಳುವ ಭರದಲ್ಲಿರುವ ರೈತರು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಕಟಾವು ಯಂತ್ರಗಳ ಕೊರತೆಯ ಜತೆಗೆ ಕೂಲಿ ಕಾರ್ಮಿಕರ ಯಂತ್ರಗಳ ಬಾಡಿಗೆ ದುಬಾರಿಯಾಗಿರುವುದು ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಈ ಹಿಂದೆ ರೈಸ್‌ ಮಿಲ…ನವರು ಅವರದ್ದೇ ವಾಹನಗಳಲ್ಲಿ ಯಾವುದೇ ಬಾಡಿಗೆ ಇಲ್ಲದೇ ಭತ್ತ ತುಂಬಿಕೊಂಡು ತಮ್ಮ ಮಿಲ…ಗಳಿಗೆ ಕೊಂಡೊಯ್ಯುತ್ತಿದ್ದರು. ಆದರೆ ಈ ಬಾರಿ ಸರ್ಕಾರ ನೇರವಾಗಿ ಖರೀದಿ ಮಾಡುತ್ತಿರುವುದರಿಂದ ಬಾಡಿಗೆ ವಾಹನಗಳಿಗೆ ಹೆಚ್ಚು ಹಣ ನೀಡಿ ರೈತರೇ ಭತ್ತವನ್ನು ಕೇಂದ್ರಗಳಿಗೆ ಕೊಂಡೊಯ್ಯ ಬೇಕಿರುವುದು ಮತ್ತಷ್ಟುನಷ್ಟದ ಸುಳಿಯಲ್ಲಿ ಸಿಲುಕುವಂತಾಗಿ ಎಂದು ರೈತ ನವೀನ್‌ ಆರೋಪಿಸುತ್ತಿದ್ದಾರೆ.

ಈಗಾಗಲೇ ಭತ್ತ ಕಟಾವಿನ ಹಂತದಲ್ಲಿದ್ದು ಕೊಯ್ಲು ಮಾಡಿಸುವ ಅನಿವಾರ್ಯತೆಯಿದೆ ಆದರೆ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆದು ನಿಂತಿರುವ ಭತ್ತವನ್ನು ಕಟಾವು ಮಾಡಲು ಆಗುತ್ತಿಲ್ಲ ಹೀಗೆ ಸುರಿಯುತ್ತಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುವುದು. ಈ ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ರೈತರ ಅಸಾಯಕತೆಯನ್ನೆ ಬಂಡವಾಳ ಮಾಡಿಕೊಂಡು ಕಟಾವು ಯಂತ್ರಕ್ಕೂ ಹಾಗೂ ಕೂಲಿ ಕಾರ್ಮಿಕರ ಬೇಡಿಕೆಯೂ ಹೆಚ್ಚಾಗುವುದು, ಇದರಿಂದ ಮಧ್ಯಮ ಮತ್ತು ಬಡ ಕೃಷಿಕರ ರೈತರಿಗೆ ಮತ್ತಷ್ಟುಆರ್ಥಿಕ ಸಂಕಷ್ಟಎದುರಾಗಿದೆ.

 ಸತೀಶ್‌ ರೈತ, ಬೇವಿನಹಳ್ಳಿ.

 ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ!

ಹೊರ ರಾಜ್ಯಗಳಿಂದ ಬಂದಿರುವ ಹತ್ತಾರು ಯಂತ್ರಗಳ ಪೈಕಿ 6 ಅಡಿ ಚೈನ್‌ ಯಂತ್ರ ಪ್ರತಿ ಘಂಟೆಗೆ 2,600 ರು., ಇನ್ನು 16 ಅಡಿಯ ದೊಡ್ಡ ಟೈರ್‌ ಯಂತ್ರಗಳಿಗೆ ಪ್ರತಿ ಎಕರೆಗೆ 5,500 ರು. ಗಳನ್ನು ಪಡೆಯುತ್ತಿದ್ದಾರೆ. ಇನ್ನು ಸ್ಥಳೀಯ ಕೂಲಿ ಕಾರ್ಮಿಕರು ಪ್ರತಿ ಎಕರೆಗೆ 6,500 ರಿಂದ ಸಾವಿರದಿಂದ 7 ಸಾವಿರವರೆಗೆ ನೀಡಬೇಕಿದೆ.

ಪ್ರತಿ ವರ್ಷವೂ ಭತ್ತ ಬೆಳೆಗಾರರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ, ಭತ್ತ ಕಟಾವು ಪ್ರಾರಂಭದಿಂದ ಮನವಿ ಮಾಡುತ್ತ ಬಂದರು ಖರೀದಿಗೆ ಗಮನ ಕೊಡುವುದಿಲ್ಲ. ನವೆಂಬರ್‌ ತಿಂಗಳಲ್ಲೇ ನೋಂದಣಿ ಮಾಡಿಕೊಂಡು ಡಿಸಂಬರ್‌ನಲ್ಲಿ ಖರೀದಿ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುವುದು. ಆದರೆ ಪ್ರತಿ ವರ್ಷ ಸರ್ಕಾರ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ನಡೆಸುತ್ತಾರೆ ಎಂಬುದು ರೈತರ ಆರೋಪ.