ಕರ್ನಾಟಕದಲ್ಲಿ ಇನ್ನು ಮೂರ್ನಾಲ್ಕು ದಿನ ಮಳೆಯಬ್ಬರ ಇಳಿಮುಖ
ಗಾಳಿಯ ವೇಗ ಹೆಚ್ಚಳ, ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆಯಬ್ಬರ ತುಸು ತಗ್ಗಲಿದೆ
ಬೆಂಗಳೂರು(ಆ.11): ಕಳೆದ ಹತ್ತು ದಿನಗಳಿಂದ ಕೆಂಪು (20.45 ಸೆಂ.ಮೀ ಗಿಂತ ಹೆಚ್ಚು) ಅಥವಾ ಕಿತ್ತಳೆ (11.56 ಸೆಂ.ಮೀ ನಿಂದ 20.44 ಸೆಂ.ಮೀ) ಎಚ್ಚರಿಕೆ ಪಡೆಯುತ್ತಿದ್ದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿಯೂ ಮಳೆ ಕ್ಷೀಣಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆದರೆ ಗಾಳಿಯ ವೇಗ ಹೆಚ್ಚಿರುವ ಸಾಧ್ಯತೆ ಇರುವು ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಕೇಂದ್ರ ಸೂಚಿಸಿದೆ.
ಶುಕ್ರವಾರ ಬೆಳಗ್ಗೆ 8.30 ರ ತನಕ ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಟ್ (6.45 ಸೆಂ.ಮೀ ನಿಂದ 11.55 ಸೆಂ.ಮೀ) ನೀಡಲಾಗಿದೆ. ಈ ಅವಧಿಯಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಮತ್ತು 3.5 ಮೀ ನಿಂದ 4.4 ಮೀ ಎತ್ತರದವರೆಗಿನ ಅಲೆ ಅಪ್ಪಳಿಸುವ ಸಂಭವ ಇರುವುದರಿಂದ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಶನಿವಾರ ಕರಾವಳಿಯಲ್ಲಿ ಮಾತ್ರ ಭಾರಿ ಮಳೆಯಾಗುವ ಸಂಭವವಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಭಾನುವಾರ ಮತ್ತು ಸೋಮವಾರ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು ಯಾವುದೇ ಅಲರ್ಟ್ ನೀಡಲಾಗಿಲ್ಲ.
Belagavi: ಮಳೆಯಿಂದ 255 ಕೋಟಿ ಹಾನಿ: ಮಳೆಯಿಂದ ಧರೆಗುರುಳುತ್ತಿರುವ ಮನೆಗಳು
ಬುಧವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ 13 ಸೆಂ.ಮೀ, ಬೆಳಗಾವಿಯ ಲೋಂಡಾ 11, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಕಮ್ಮರಡಿ ತಲಾ 9 ಸೆಂ.ಮೀ ಮಳೆಯಾಗಿದೆ.
ರಾಜ್ಯದಲ್ಲಿ ಒಂದೇ ವಾರದಲ್ಲಿ 4400ಕ್ಕೂ ಅಧಿಕ ಮನೆ ಕುಸಿತ
ಬೆಂಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಒಟ್ಟು 4474ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ಬುಧವಾರದಂದು ಮಳೆ ಸಂಬಂಧಿ ಕಾರಣಗಳಿಗಾಗಿ ಐವರು ಮೃತಪಟ್ಟಿದ್ದು, ಅದರಲ್ಲಿ ಮನೆ ಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ.
ಬುಧವಾರದಂದು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಅತಿ ಹೆಚ್ಚು ಮನೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ತಾಲೂಕು ಒಂದರಲ್ಲೇ ಒಂದೇ ದಿನ 15 ಮನೆಗಳು ಕುಸಿದಿವೆ. ಕಲಬುರಗಿಯಲ್ಲಿ 1050, ಚಾಮರಾಜನಗರ 61, ದಾವಣಗೆರೆ 207, ಚಿಕ್ಕಬಳ್ಳಾಪುರ 181, ಮೈಸೂರು 600, ವಿಜಯನಗರ 60, ಬಳ್ಳಾರಿ 84, ಉತ್ತರ ಕನ್ನಡ 20, ಬೆಳಗಾವಿ 63, ವಿಜಯಪುರ ಜಿಲ್ಲೆ 464, ಬಾಗಲಕೋಟೆ ಜಿಲ್ಲೆ 340, ದಕ್ಷಿಣ ಕನ್ನಡ 206, ಉಡುಪಿ 9 , ಕೊಡಗು 269, ಚಿಕ್ಕಮಗಳೂರು 148, ಶಿವಮೊಗ್ಗ 106, ಹಾಸನ 200, ರಾಮನಗರ 180, ಚಿತ್ರದುರ್ಗ 63, ಮಂಡ್ಯ 154, ಕೋಲಾರದಲ್ಲಿ 9 ಮನೆಗಳಿಗೆ ಹಾನಿಯಾಗಿವೆ.