ಧಾರಾಕಾರ ಮಳೆ ಸುರಿಯುತ್ತಿದ್ದು ಇದರಿಂದ ಜನಜೀವನ ಕಂಗಾಲಾಗಿದೆ. ರೈತು ಬಳೆದ ಬೆಳೆಗಳೂ ಕೂಡ ಕೈಗೆ ಬರುತ್ತಿಲ್ಲ

ಕಲಬುರಗಿ (ಅ.16): ತೊಗರಿ ಕಣಜ ಕಲಬುರಗಿಯಲ್ಲಿ ದಾಲ್‌ ಮಿಲ್‌ ಮಾಲಿಕರ ಪಾಲಿಗೆ ಧಾರಾಕರ ಮಳೆ ಶಾಪವಾಗಿ ಪರಿಣಮಿಸಿದ್ದು, ಸುಮಾರು 6 ಕೋಟಿ ರು. ಮೌಲ್ಯ ಬೇಳೆ, ತೋಗರಿ ಕಾಳುಗಳು ಸಂಪೂರ್ಣವಾಗಿ ನಾಶವಾಗಿದೆ.

Add Asianetnews Kannada as a Preferred SourcegooglePreferred

ಕಳೆದ 3 ದಿನದಿಂದ ಸುರಿದ ಜಡಿಮಳೆಯಿಂದಾಗಿ ಇಲ್ಲಿನ ಗಂಜ್‌ ಪ್ರದೇಶ ಹಾಗೂ ನಂದೂರ- ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿರುವ ದಾಲ್‌ ಮಿಲ್‌ಗಳಲ್ಲಿ ನೀರು ನುಗ್ಗಿದ್ದರಿಂದ ಅಲ್ಲಿ ದಾಸ್ತಾನು ಮಾಡಲಾಗಿದ್ದ ಸಾವಿರಾರು ಕ್ವಿಂಟಿಲ್‌ ತೊಗರಿ ಬೇಳೆ, ಕಚ್ಚಾ ತೊಗರಿ ಎಲ್ಲವೂ ಸಂಪೂರ್ಣ ನೀರಲ್ಲಿ ಮುಳುಗಿ ಹೋಗಿದೆ.

'ನೆರೆ ಹಾನಿಗೆ ತಕ್ಷಣ ವಿಶೇಷ ಅನುದಾನ' ...

ಅನೇಕ ಬೇಳೆ ಕಾರ್ಖಾನೆಗಳಲ್ಲಿ ಸಂಸ್ಕರಣೆಗೆಂದು ಸಿದ್ಧಪಡಿಸಿ ಸಂಗ್ರಹಿಸಲಾಗಿದ್ದ ನೂರಾರು ಟನ್‌ ಬೇಳೆಯೂ ನೀರಲ್ಲಿ ಮುಳುಗಿ ಹೋಗಿದೆ. ಮಳೆಯಿಂದಾಗಿ ಕಲಬುರಗಿಯ ದಾಲ್‌ಮಿಲ್‌ಗಳಲ್ಲಿ ಶೇಖರಿಸಲಾಗಿದ್ದ, ಸಂಸ್ಕರಣೆಗೆ ಇಟ್ಟಿದ್ದಂತಹ 6 ಕೋಟಿ ರು. ಮೌಲ್ಯದ ಬೇಳೆ, ತೊಗರಿ ಕಾಳು ಎಲ್ಲವೂ ಹಾಳಾಗಿದೆ ಎಂದು ಹೈಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಮರನಾಥ ಪಾಟೀಲ್‌ ಆತಂಕ ಹೊರಹಾಕಿದ್ದಾರೆ. ಹಾನಿಯ ಅಂದಾಜು ಲೆಕ್ಕ ಹಾಕಲಾಗುತ್ತಿದ್ದು, ಅದು ಇನ್ನೂ ಹೆಚ್ಚುವ ಸಾಧ್ಯತೆಗಳವೆ ಎಂದೂ ಮಾಹಿತಿ ನೀಡಿದ್ದಾರೆ.