ಮಳೆಯಿಂದ ರೈತರು, ಕೂಲಿ ಕಾರ್ಮಿಕರು, ಬೆಳೆಗಾರರು ಹೈರಾಣು 2022ರಲ್ಲೂ ವರ್ಷ ಪೂರ್ತಿ ಮಳೆ ಸುರಿದಿತ್ತು ಈ ವರ್ಷವೂ ಜನವರಿಯಲ್ಲೇ ಮಳೆ ಕಂಡು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಜ.24) : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಒಂದು ಗಂಟೆಗಳ ಕಾಲ ಮಲೆನಾಡಿನ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು ಹೈರಾಣುಯಾದ್ರು. 

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಮತ್ತಿಕಟ್ಟೆ, ನಿಡುವಾಳೆ, ಗುತ್ತಿ, ಭೈರಾಪುರ, ಕಂದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಅಬ್ಬರದಿಂದ ಭವಿಷ್ಯದ ಬಗ್ಗೆ ಕಾಫಿಬೆಳೆಗಾರಲ್ಲಿ ಆತಂಕ ಮೂಡಿಸಿದೆ. 

Assembly election: ಚುನಾವಣೆ ಘೋಷಣೆಗೂ ಮುನ್ನವೇ ಮಲೆನಾಡಿನಲ್ಲಿ ಬಹಿಷ್ಕಾರದ ಬಿಸಿ!

ಜನವರಿಯಲ್ಲಿ ಮಳೆ ಕಂಡು ಮಲೆನಾಡಿಗರು ಕಂಗಾಲು

ಇಂದು ಬೆಳಗ್ಗೆಯಿಂದ ಮಲೆನಾಡಿನ ಬಹುತೇಕ ಕಡೆ ಮೋಡಕವಿದ ವಾತಾವರಣ ಸೃಷ್ಟಿಯಾಗಿತ್ತು. ಮಲೆನಾಡಿನ ಭಾಗದಲ್ಲಿ ಒಂದು ಗಂಟೆಗಳ ಕಾಲ ಸುರಿದ ಮಳೆ ಧಾರಾಕಾರವಾಗಿ ಸುರಿದಿದೆ. ಅಕಾಲಿಕವಾಗಿ ಬದಲಾದ ವಾತಾವರಣ ರೈತರ ಕಣ್ಣಲ್ಲಿ ನೀರು ತರಿಸಿದೆ. ಮಲೆನಾಡು ಈಗ ಬಹುತೇಕ ಕಡೆ ಕಾಫಿ ಕೊಯ್ಲು, ಅಡಿಕೆ ಕೊಯ್ಲು, ಭತ್ತದ ಕಟಾವು ಕೆಲಸ ನಡೆಯುತ್ತಿದೆ. ಫಸಲನ್ನು ಕೊಯ್ದು ರೈತರು ಕಣದಲ್ಲಿ ಹರಡಿದ್ದಾರೆ. ಈಗ ಮಳೆ ಬಂದರೆ ಕಣದಲ್ಲಿ ಇರುವ ಕಾಫಿ ಹಾಳಾಗುವುದರ ಜೊತೆಗೆ ತೋಟದಲ್ಲಿ ಕೊಯ್ಲು ಮಾಡಲು ಬಾಕಿಯಿರುವ ರಸಭರಿತವಾಗಿ ಹಣ್ಣಾಗಿರುವ ಕಾಫಿ ನೆಲ ಸೇರುತ್ತದೆ.

ಇಂದು ಮಧ್ಯಾಹ್ನ ಕಾಫಿನಾಡಿನ ಬಹುತೇಕ ಕಡೆ ಮಳೆಯಾಗಿದೆ. ಅದರಲ್ಲೂ ಜನವರಿಯಲ್ಲಿ ಮಳೆ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ. ಮಳೆಯಿಂದ ರೈತರು, ಕೂಲಿ ಕಾರ್ಮಿಕರು, ಬೆಳೆಗಾರರು ಹೈರಾಣು ಆಗಿದ್ದು 2022ರಲ್ಲೂ ವರ್ಷ ಪೂರ್ತಿ ಮಳೆ ಸುರಿದಿತ್ತು. ಈ ವರ್ಷವೂ ಜನವರಿಯಲ್ಲೇ ಮಳೆ ಕಂಡು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದು ರೈತಾಪಿ ವರ್ಗದಲ್ಲಿ ಆತಂಕ ಆವರಿಸಿದೆ. 

Chikkaballapur Utsav: ಬರದ ನಾಡನ್ನು ಮಲೆನಾಡು ಮಾಡಿದ ಸುಧಾಕರ್‌: ಸಚಿವ ಸೋಮಣ್ಣ

ಕೃಷಿ ಚಟುವಟಿಕೆ ಮಲೆನಾಡಿನಲ್ಲಿ ಇನ್ನು ಬಾಕಿ : 

ಈಗ ಮಳೆಯಾಗುವುದರಿಂದ ಕಾಫಿ ಅಕಾಲಿಕವಾಗಿ ಹೂ ಆಗುತ್ತದೆ. ಇದರಿಂದ ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಭೂಮಿಯ ತೇವಾಂಶ ಹೆಚ್ಚಾಗಿ ಮುಂದಿನ ಫಸಲಿನ ಹೂವು ಅರಳುವ ಪ್ರಮಾಣವೂ ಕಡಿಮೆಯಾಗುವ ಆತಂಕ ಎದುರಾಗಿದೆ. ಇನ್ನು ಕೂಡ ಅನೇಕ ಕಡೆ ಅಡಿಕೆ ಕೊಯ್ಲು ಬಾಕಿ ಇದೆ. ಕೊಯ್ಲು ಮಾಡಿ ಒಣಗಿಸಲು ಹಾಕಿರುವ ಅಡಿಕೆ ಮಳೆಯಿಂದಾಗಿ ಹಾಳಾಗುತ್ತದೆ. ಸಾಕಷ್ಟು ರೈತರು ಭತ್ತದ ಕೊಯ್ಲು ಮಾಡಿ ಪೈರನ್ನು ಕಣದಲ್ಲಿ ಒಟ್ಟು ಹಾಕಿದ್ದಾರೆ.ಒಟ್ಟಾರೆ ಅಕಾಲಿಕ ಮಳೆ ರೈತರನ್ನು ಕಂಗಾಲಾಗಿಸಿದೆ. ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.