ಇನ್ಮುಂದೆ ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಕ್ಕೆ ಐದೇ ತಾಸು?
ಅಧ್ಯಯನ ನಡೆಸಲು ಅಂಗಡಿ ಸೂಚನೆ|ಮಂಗಳೂರು- ಬೆಂಗಳೂರು, ಬೀದರ್- ಕಲಬುರ್ಗಿ, ಬೀದರ್- ಬೆಂಗಳೂರು ರೈಲು ಪ್ರಾರಂಭಿಸಲು ಬೇಡಿಕೆ| ಶೀಘ್ರದಲ್ಲೇ ಈ ಮಾರ್ಗದಲ್ಲಿ ಹೊಸ ರೈಲು ಪ್ರಾರಂಭಿಸಲು ಕ್ರಮ|
ಹುಬ್ಬಳ್ಳಿ(ಡಿ.18): ಹುಬ್ಬಳ್ಳಿಯಿಂದ ಬೆಂಗಳೂರಿಗೆ 5 ಗಂಟೆಯಲ್ಲಿ ರೈಲಿನಲ್ಲಿ ಸಂಚರಿಸಲು ಸಾಧ್ಯವೇ ಎಂಬುದನ್ನು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಧಿಕಾರಿಗಳು ಅಧ್ಯಯನ, ಪರಿಶೀಲನೆ ನಡೆಸಿದ ಬಳಿಕ ಆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ರೈಲ್ವೆ ಇಲಾಖೆಯ ನೇಮಕಾತಿ ಮಂಡಳಿ(ಆರ್ಆರ್ಬಿ) ಉಪ ಕಾರ್ಯಾಲಯವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಜೋಡಿ ಮಾರ್ಗವಿಲ್ಲ. ಇರುವ ಸೌಲಭ್ಯದಲ್ಲೇ ಈ ರೈಲನ್ನು ಓಡಿಸಲು ಸಾಧ್ಯವೇ ಎಂದು ಪರಿಶೀಲಿಸುತ್ತಿದ್ದೇವೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ವೇಳೆ ಮಂಗಳೂರು- ಬೆಂಗಳೂರು, ಬೀದರ್- ಕಲಬುರ್ಗಿ, ಬೀದರ್- ಬೆಂಗಳೂರು ರೈಲು ಪ್ರಾರಂಭಿಸಬೇಕೆಂಬ ಬೇಡಿಕೆ ಬಹುದಿನಗಳದ್ದು. ಆದಷ್ಟು ಶೀಘ್ರದಲ್ಲೇ ಈ ಮಾರ್ಗದಲ್ಲಿ ಹೊಸ ರೈಲು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕದಲ್ಲಿ ದಾವಣಗೆರೆ - ತುಮಕೂರು ಹಾಗೂ ಬಾಗಲಕೋಟೆ- ಕುಡಚಿ ಮಾರ್ಗದಲ್ಲಿ ಜೋಡಿಮಾರ್ಗದ ನಿರ್ಮಾಣಕ್ಕೆ ಭೂಸ್ವಾಧೀನದ ಸಮಸ್ಯೆಯಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಬಹುದು ಎಂದರು. ಇನ್ನು ಕಿತ್ತೂರಲ್ಲಿ ಎಕ್ಸ್ಪೋರ್ಟ್ ಝೋನ್ ಮಾಡುವ ಯೋಜನೆಯಿದ್ದು ರೈಲ್ವೆಗೆ ಬೇಕಾಗುವ ಬಿಡಿಭಾಗಗಳ ಉತ್ಪಾದನೆಗೆ ಮುಂದೆ ಬರುವ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.