*  ಹನುಮಮಾಲಾ ಧಾರಣೆಯ ಕಾರ್ಯಕ್ರಮದ ವೇಳೆಗೆ ಕಾಂಗ್ರೆಸ್‌ ನಾಯಕರು ಆಗಮಿಸುವ ನಿರೀಕ್ಷೆ*  ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ*  ಬಿಜೆಪಿಯವರು ಅಂಜನಾದ್ರಿಯನ್ನು ತಮ್ಮದೇ ಸ್ವತ್ತು ಎನ್ನುವಂತೆ ಮಾಡುತ್ತಿದ್ದಾರೆ 

ಕೊಪ್ಪಳ(ಜೂ.29):  ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಡಿಸೆಂಬರ್‌ನಲ್ಲಿ ಅಂಜನಾದ್ರಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇರುತ್ತಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.

Add Asianetnews Kannada as a Preferred SourcegooglePreferred

ಡಿಸೆಂಬರ್‌ನಲ್ಲಿ ನಡೆಯುವ ಹನುಮಮಾಲಾ ಧಾರಣೆಯ ಕಾರ್ಯಕ್ರಮದ ವೇಳೆಗೆ ಕಾಂಗ್ರೆಸ್‌ ನಾಯಕರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಈ ಕುರಿತು ಪಕ್ಷದಲ್ಲಿ ಚರ್ಚೆಯಾಗಿದ್ದು, ಬರುವುದು ಪಕ್ಕಾ ಎಂದರು.

ಗಂಗಾವತಿ: ವಿವಾದದ ಸುಳಿಯಲ್ಲಿ ಪುಣ್ಯ ಕ್ಷೇತ್ರ ನವವೃಂದಾವನಗಡ್ಡೆ..!

ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ:

ಅಯೋಧ್ಯೆಯ ರಾಮಮಂದಿರ ವಿವಾದ ಇತ್ಯರ್ಥವಾಗಿರುವುದರಿಂದ ಈಗ ಬಿಜೆಪಿಯವರು ದಕ್ಷಿಣದಲ್ಲಿರುವ ಅಂಜನಾದ್ರಿಯನ್ನು ಕೈಗೆತ್ತಿಕೊಂಡಿದ್ದಾರೆ. ಬಿಜೆಪಿಯವರು ಅಂಜನಾದ್ರಿಯನ್ನು ತಮ್ಮದೇ ಸ್ವತ್ತು ಎನ್ನುವಂತೆ ಮಾಡುತ್ತಿದ್ದಾರೆ. ಆದರೆ ಅಂಜನಾದ್ರಿ ಅಭಿವೃದ್ಧಿ ಕುರಿತು ಬಿಜೆಪಿಯವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಕೇವಲ ಮತ ರಾಜಕಾರಣ ಮಾಡುವುದಕ್ಕಾಗಿ ಅಂಜನಾದ್ರಿಯನ್ನು ಜೀವಂತವಾಗಿಡುತ್ತಿದ್ದಾರೆ. ಅಂಜನಾದ್ರಿಗೆ ಕಳೆದೆರಡು ವರ್ಷಗಳ ಹಿಂದೆಯೇ .20 ಕೋಟಿ ಘೋಷಣೆಯಾಗಿದೆ. ಈ ವರ್ಷ .100 ಕೋಟಿ ಘೋಷಿಸಿದ್ದರೂ ನಯಾಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬರೋಬ್ಬರಿ .500 ಕೋಟಿಯನ್ನು ಮೊದಲ ವರ್ಷವೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.