ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ. ಇಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ. 

ಉಡುಪಿ [ನ.28]:  ಅಯೊಧ್ಯೆಯ 2.77 ಎಕರೆ ಭೂಮಿಯನ್ನು ರಾಮಮಂದಿರ ನಿರ್ಮಣಕ್ಕೆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಒಪ್ಪುವುದಿಲ್ಲ ಎಂದು ಪುರಿ ಗೋವರ್ಧನ ಪೀಠದ ಶ್ರೀನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಉಡುಪಿಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ದ್ವೈತ ಮತದ ಪುರಿ ಶ್ರೀಗಳು ಸುಪ್ರೀಂ ಕೋರ್ಟಿಗಿಂತ ಪಾರ್ಲಿಮೆಂಟ್ ದೊಡ್ಡದು, ಸುಪ್ರೀಂ ತೀರ್ಪನ್ನು ತಿರಸ್ಕರಿಸಿ ಪಾರ್ಲಿಮೆಂಟ್ ಆಯೋಧ್ಯೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು, ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದರು. 

ಅಯೊಧ್ಯೆಯಲ್ಲಿಯೇ 5 ಎಕರೆ ಭೂಮಿಯನ್ನು ಮಸೀದಿ ನಿರ್ಮಾಣಕ್ಕಾಗಿ ನೀಡುವ ತೀರ್ಪನ್ನು ತಾವು ಒಪ್ಪುವುದಿಲ್ಲ. ಇಲ್ಲಿ ಮಸೀದಿ ನಿರ್ಮಾಣ ಮಾಡಬಾರದು ಎಂದರು. 

ಧಾರ್ಮಿಕ ವಿಷಯದಲ್ಲಿ ತೀರ್ಪು ಕೊಡುವುದಕ್ಕೆ ಸುಪ್ರೀಂ ಕೋರ್ಟಿಗೆ ಅಧಿಕಾರವೇ ಇಲ್ಲ. ಧಾರ್ಮಿಕ ವಿಷಯದಲ್ಲಿ ಸಂತರೇ ಸುಪ್ರೀಂ. ಸಂತರ ಮಾತನ್ನು ಸರ್ಕಾರ ಕೇಳಬೇಕೆ ಹೊರತು, ಸರ್ಕಾರ ಮಾತನ್ನು ಸಂತರು ಕೇಳುವುದಲ್ಲ ಎಂದು ನಿಶ್ಚಲಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. 

ಬಿಜೆಪಿ ಸೋತರೆ ಮತ್ತೆ ಚುನಾವಣೆಯೇ ಸೂಕ್ತ : ಪೇಜಾವರ ಶ್ರೀ...

ಮುಸ್ಲೀಮರು ಭಾರತದಲ್ಲಿ ಇನ್ನೊಂದು ಮೆಕ್ಕಾ ಮಾಡುವುದಕ್ಕೆ ಹೊರಟಿದ್ದಾರೆ. ಹಿಂದುಗಳ ಉದಾರತೆಯನ್ನು ಯಾರೂ ದುರ್ಬಲತೆ ಎಂದು ಭಾವಿಸಬಾರದು. ಅಯೋಧ್ಯೆಯಲ್ಲಿ ಮಾತ್ರವಲ್ಲ ದೇಶದ ಎಲ್ಲಿಯೂ ಬಾಬ್ರಿ ಹೆಸರಿನ ಮಸೀದಿ ಸ್ಥಾಪನೆಯಾಗಬಾರದು. ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ, ಗೋವಾ, ಮಹಾರಾಷ್ಟ್ರ, ಕಾಶ್ಮೀರದಲ್ಲಿ ನೋಡಿದ್ದೇವೆ ಎಂದು ಹರಿಹಾಯ್ದರು. 

ಇನ್ನು ಪುರಿ ಶ್ರೀಗಳ ಮಾತಿಗೆ ಪೇಜಾವರ ಶ್ರೀಗಳು ಸಮಾಧಾನದ ಮಾತುಗಳನ್ನು ಆಡಲು ಯತ್ನಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ.