Asianet Suvarna News Asianet Suvarna News

ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ ಕಾಮಗಾರಿಗೆ ಬೇಕಿದೆ ವೇಗ

ಸುಸಜ್ಜಿತ ತಾಲೂಕು ಕ್ರೀಡಾಂಗಣ, ಹೊಸ ರೀತಿಯ ಬಸ್‌ ನಿಲ್ದಾಣ, ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ವೇಗ ನೀಡುವುದು ಶಾಸಕ ಹರೀಶ ಪೂಂಜ ಅವರಿಗೆ ಇರುವ ಆದ್ಯತೆಯ ಜವಾಬ್ದಾರಿಯಾಗಿದೆ

Punjalakate Charmadi highway work needs speed at mangaluru rav
Author
First Published Jun 4, 2023, 4:33 AM IST

ದೀಪಕ್‌ ಅಳದಂಗಡಿ

ಬೆಳ್ತಂಗಡಿ (ಜೂ.4) : ಸುಸಜ್ಜಿತ ತಾಲೂಕು ಕ್ರೀಡಾಂಗಣ, ಹೊಸ ರೀತಿಯ ಬಸ್‌ ನಿಲ್ದಾಣ, ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ವೇಗ ನೀಡುವುದು ಶಾಸಕ ಹರೀಶ ಪೂಂಜ ಅವರಿಗೆ ಇರುವ ಆದ್ಯತೆಯ ಜವಾಬ್ದಾರಿಯಾಗಿದೆ.

ಕಳೆದ 5 ವರ್ಷಗಳಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಗಳು ಕಾಂಕ್ರೀಟ್‌ ರಸ್ತೆಗಳಾಗಿ ಅಭಿವೃದ್ಧಿಗೊಂಡಿದೆಯಲ್ಲದೆ ನೀರಾವರಿ ವ್ಯವಸ್ಥೆಗೆ ಅನುಕೂಲವಾಗಿ ಮತ್ತು ಸಂಪರ್ಕ ಸೇತುವೆಯಾಗಿ ಅನೇಕ ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಂಡಿವೆ. ಇದೀಗ ಬಾಕಿ ಉಳಿದ ಬೆಳ್ತಂಗಡಿ ಬಸ್‌ ನಿಲ್ದಾಣ, ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವುದರ ಜೊತೆಗೆ ಅನೇಕ ದಶಕಗಳ ಬೇಡಿಕೆಯಾದ ಪುಂಜಾಲಕಟ್ಟೆ- ಚಾರ್ಮಾಡಿ ರಾ. ಹೆದ್ದಾರಿ ಕಾಮಗಾರಿಗೆ 718 ಕೋಟಿ ರು. ಮಂಜೂರುಗೊಂಡು ಕಾಮಗಾರಿ ಪ್ರಾರಂಭವಾಗಿದ್ದು ಈ ಕಾಮಗಾರಿಗೆ ವೇಗ ಹೆಚ್ಚಿಸುವ ಕೆಲಸ ಶಾಸಕ ಹರೀಶ್‌ ಪೂಂಜ ಅವರಿಂದ ಆಗಬೇಕಿದೆ.

 

ಸಿಎಂ ಸಿದ್ದರಾಮಯ್ಯ ವಿರುದ್ದ ಕೊಲೆ ಆರೋಪ, ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್ಐಆರ್!

ಬಸ್‌ ನಿಲ್ದಾಣಗಳ ನಿರ್ಮಾಣವಾಗಬೇಕು: ಎರಡನೇ ಬಾರಿಗೆ ಹರೀಶ್‌ ಪೂಂಜ ಅವರನ್ನು ಬೆಳ್ತಂಗಡಿ ತಾಲೂಕಿನ ಜನತೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ತಾಲೂಕಿನಲ್ಲಿ ಇತಿಹಾಸ ಪ್ರಸಿದ್ದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದಂತಹ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಮಣ್ಣಿನ ಹರಕೆಗೆ ಪ್ರಸಿದ್ಧಿ ಪಡೆದಿರುವ ಸುರ್ಯ ಕ್ಷೇತ್ರ, ಕನ್ಯಾಡಿ ಶ್ರೀರಾಮ ಕ್ಷೇತ್ರ, ಬೆಳಾಲು ಅರಿಕೋಡಿ ಕ್ಷೇತ್ರ, ಕಾಜೂರು ದರ್ಗಾ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಪ್ರತೀದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು ಇವರಿಗೆ ಬೆಳ್ತಂಗಡಿಯಲ್ಲಿ ಬಸ್‌ ಇನ್ನಿತರ ವಾಹನದಲ್ಲಿ ಬಂದು ನಿಲ್ಲಲು ಸೂಕ್ತ ಬಸ್‌ ತಂಗುದಾಣದ ಅಗತ್ಯವಿದ್ದು ಇದು ತುರ್ತು ನಿರ್ಮಾಣವಾಗಬೇಕಿದೆ.

ಸುಸಜ್ಜಿತ ಕ್ರೀಡಾಂಗಣ: ತಾಲೂಕಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿದ್ದು ಸಹಸ್ರಾರು ವಿದ್ಯಾರ್ಥಿಗಳು ಇಲ್ಲಿ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಕ್ರೀಡಾ ತರಬೇತಿಗಾಗಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸುವ ಕನಸನ್ನು ಕಟ್ಟಿಕೊಂಡಿರುವ ಶಾಸಕರು ಇದನ್ನು ಆದಷ್ಟುಬೇಗ ನಿರ್ಮಿಸಿ ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯವನ್ನು ರೂಪಿಸಬೇಕಾಗಿದೆ. ಪ್ರವಾಸೋದ್ಯಮಕ್ಕೆ ಕೈಗಾರಿಕಾ ವಲಯ ಸೃಷ್ಟಿಗೆ ಪ್ರಥಮ ಆದ್ಯತೆ ನೀಡಿದ ಭರವಸೆಯಂತೆ ಉಜಿರೆಯಲ್ಲಿ ಕೈಗಾರಿಕಾ ವಲಯ ನಿರ್ಮಿಸಲು ಮುಂದಾಗಬೇಕಿದೆ.

ಹದ್ದಾರಿ ಅಗಲೀಕರಣ: ಅನೇಕ ದಶಕಗಳ ಬೇಡಿಕೆಯಾಗಿ ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 718 ಕೋಟಿ ರು. ಅನುದಾನ ಬಿಡುಗಡೆಯಾಗಿ ಕಾಮಗಾರಿ ಮಂಜೂರಾಗಿದ್ದು ಮರಗಳ ತೆರವಿನ ಗುರುತುಕಾರ್ಯ ನಡೆದಿದ್ದು ಕೆಲವುಕಡೆ ಕಾಮಗಾರಿ ಪ್ರಾರಂಭವಾಗಿದೆ. ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಹಳೆಪೇಟೆ ಎಂಬಲ್ಲಿ ಬೇಸಿಗೆ, ಮಳೆಗಾಲದಲ್ಲಿ ನಿರಂತರ ಟ್ರಾಫಿಕ್‌ ಜಾಮ್‌ ಆಗುತ್ತಿದ್ದು ಇದರಿಂದಾಗಿ ಜನ ಕಷ್ಟಎದುರಿಸುತ್ತಿದ್ದಾರೆ. ಇದಕ್ಕೆ ಮುಕ್ತಿ ನೀಡಲು ಸಂಬಂಧಪಟ್ಟಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಈ ಕಾಮಗಾರಿಗೆ ವೇಗ ಮುಟ್ಟಿಸಬೇಕಾಗಿದೆ.

ತಾಲೂಕುಮಟ್ಟದ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ರೂಪುರೇಷ ಸಿದ್ಧಗೊಳಿಸಿದ್ದು ಇದನ್ನು ಆದಷ್ಟುಬೇಗ ನಿರ್ಮಾಣಗೊಳಿಸಬೇಕು ಎಂಬುದು ತಾಲೂಕಿನ ಸಮಾಜದ ಬೇಡಿಕೆಯಾಗಿದೆ. ಶಾಸಕರ ಕನಸಾಗಿರುವ ತಾಲೂಕಿನ ಯುವಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಬೃಹತ್‌ ಕೈಗಾರಿಕೆಯ ಸ್ಥಾಪನೆ ಹಾಗೂ ಇನ್ನೊಂದು ವಿಮಾನ ನಿಲ್ದಾಣದ ನಿರ್ಮಾಣ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇಶ ವಿದೇಶಗಳಿಂದ ಭಕ್ತರು ಬರುವುದರಿಂದ ವಿಮಾನ ನಿಲ್ದಾಣ ನಿರ್ಮಾಣ ಅಗತ್ಯವಾಗಿದೆ ಎನ್ನಬಹುದು.

 

ಸಿಎಂ ಆದ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ಹರೀಶ್ ಪೂಂಜಾ!

ಕಳೆದ 5 ವರ್ಷಗಳಲ್ಲಿ ತಾಲೂಕನ್ನು ನಿರೀಕ್ಷೆಗೂ ಮೀರಿ ರಾಜ್ಯಕ್ಕೆ ಮಾದರಿಯಾಗುವಂತೆ 3500 ಕೋಟಿಗೂ ಅಧಿಕ ಅನುದಾನವನ್ನು ತಂದು ತಾಲೂಕಿನ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಇದರಂತೆ ಜನ ನನ್ನ ಪ್ರೀತಿಯನ್ನು ಗಳಿಸಿ ಎರಡನೇ ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಸರ್ಕಾರದಿಂದ ಗರಿಷ್ಠ ಅನುದಾನವನ್ನು ಪಡೆಯಲು ಪ್ರಯತ್ನಿಸಿ ತಾಲೂಕಿನ ಅಭಿವೃದ್ಧಿಯನ್ನು ಮಾಡುವುದಲ್ಲದೆ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ

- ಹರೀಶ್‌ ಪೂಂಜ, ಶಾಸಕರು ಬೆಳ್ತಂಗಡಿ

Follow Us:
Download App:
  • android
  • ios