ತಾಲೂಕಿನ ಗುಡ್ಡದಲಿಂಗನಹಳ್ಳಿ ಗ್ರಾಮಸ್ಥರು ಧರಣಿ ಸ್ಥಳದಲ್ಲಿಯೇ ಅಡುಗೆ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಿ ಭದ್ರ ನೀರಾವರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ತಾಲೂಕು ಕಚೇರಿ ಮುಂಭಾಗ 27 ದಿನಗಳಿಂದ ಧರಣಿ ನಡೆಯುತ್ತಿದ್ದು ಗ್ರಾಮಸ್ಥರು ಅಲ್ಲಿಯೇ ಅಡುಗೆ ತಯಾರಿಸುವ ಮೂಲಕ ಪ್ರತಿಭಟಿಸಿದರು.

ದಾವಣಗೆರೆ(ಜು.16): ಜಗಳೂರು ತಾಲೂಕಿನ ಗುಡ್ಡದಲಿಂಗನಹಳ್ಳಿ ಗ್ರಾಮಸ್ಥರು ಧರಣಿ ಸ್ಥಳದಲ್ಲಿಯೇ ಅಡುಗೆ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಿ ಭದ್ರ ನೀರಾವರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ನಗರದ ತಾಲೂಕು ಕಚೇರಿ ಮುಂಭಾಗ ಕಳೆದ 27 ದಿನಗಳಿಂದ ನಡೆಯುತ್ತಿರುವ ಧರಣಿಗೆ ಸೋಮವಾರ ಗ್ರಾಮಸ್ಥರು ಅಲ್ಲಿಯೇ ಅಡುಗೆ ತಯಾರಿಸುವ ಮೂಲಕ ಪ್ರತಿಭಟಿಸಿದರು.

ಈ ವೇಳೆ ಮುಖಂಡ ನಾಗರಾಜ್‌ ಮಾತನಾಡಿ, ನಮ್ಮ ಪಾಲಿನ ನೀರು ನಮಗೆ ದೊರೆಯುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಪ್ರತಿ ನಿತ್ಯ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು. ಕುಡಿಯಲು ನೀರು ಸಿಗದಂತ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿಯೂ ತಾಲೂಕಿನ 70ಕ್ಕೂ ಹೆಚ್ಚು ಗ್ರಾಮಗಳು ಟ್ಯಾಂಕರ್‌ ನೀರನ್ನೆ ಅವಲಂಬಿಸುವಂತಾಗಿದೆ. ಸಾವಿರಾರು ಅಡಿಗಳಷ್ಟುಆಳ ಬೋರ್‌ವೆಲ್‌ ಕೊರೆದರೂ ನೀರು ದೊರೆಯುತ್ತಿಲ್ಲ ಎಂದು ತಾಲೂಕಿನ ಪರಿಸ್ಥಿತಿ ಬಿಡಿಸಿಟ್ಟರು.

ಕಳೆದ ಹಲವಾರು ವರ್ಷಗಳಿಂದ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ಒಣಗಿ ಹೋಗಿವೆ. ಮಳೆರಾಯ ಕಳೆದ ನಾಲ್ಕು ವರ್ಷಗಳಿಂದ ಮುನಿಸಿಕೊಂಡಿದ್ದು ರೈತರು ಬಿತ್ತನೆ ಮಾಡಿದ ಪೈರು ಕೈಗೆ ಸಿಗದಂತ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಸಮಸ್ಯೆಯಿಂದ ರೈತರು ಜನತೆ ಬಳಲುತ್ತಿದ್ದರೂ ಜನಪ್ರತಿನಿಧಿಗಳು, ಸರ್ಕಾರ ನಮ್ಮ ಸಮಸ್ಯೆ ಬಗ್ಗೆ ಕಿವಿಗೊಡುತ್ತಿಲ್ಲ ಎಂದು ದೂರಿದರು.

ಹೋರಾಟ ಸಮಿತಿಯ ರಾಜಪ್ಪ, ಧನ್ಯಕುಮಾರ, ಲಿಂಗರಾಜ್‌, ಮೈಲಾರಿ ಅನಂತ್‌, ಮಹಾಲಿಂಗಪ್ಪ ಇದ್ದರು.