ಕಾಫಿ ಬೆಳೆಗಾರರ ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡದಿದ್ದರೆ ಸರ್ಕಾರ ವಿರುದ್ಧ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಎಚ್ಚರಿಸಿದೆ.

ಸೋಮವಾರಪೇಟೆ (ಜು.26) : ಕಾಫಿ ಬೆಳೆಗಾರರ ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡದಿದ್ದರೆ ಸರ್ಕಾರ ವಿರುದ್ಧ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಎಚ್ಚರಿಸಿದೆ. ಕಾಫಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಉಚಿತ ವಿದ್ಯುತ್‌ ನೀಡಲು ನಿರಾಕರಣೆ ಮಾಡುವ ಮೂಲಕ ಅನ್ಯಾಯ ಮಾಡಿದ್ದು, ಜಿಲ್ಲೆಯ ಶಾಸಕರಿಗೆ ಸ್ವಾಭಿಮಾನವಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರೈತ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಆಗ್ರಹಿಸಿದರು.

Add Asianetnews Kannada as a Preferred SourcegooglePreferred

ಅತೀ ಹೆಚ್ಚು ತೆರಿಗೆ(Tax)ಯನ್ನು ಕಾಫಿ(Coffee) ಬೆಳೆಗಾರರು ಕಟ್ಟುತ್ತಿದ್ದಾರೆ. ವಾಣಿಜ್ಯ ಬೆಳೆಗಳಾದ ತೆಂಗು, ಅಡಕೆ, ಹೊಗೆಸೊಪ್ಪು ಬೆಳೆಗಾರರಿಗೆ ಸರ್ಕಾರ ಉಚಿತ ವಿದ್ಯುತ್‌(Free electricity) ನೀಡುತ್ತಿದೆ. ಆದರೆ ಕಾಫಿಯನ್ನು ವಾಣಿಜ್ಯ ಬೆಳೆ ಎಂಬ ನೆಪವೊಡ್ಡಿ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಸತತ 6 ಗಂಟೆ ಕಾರ್ಯಾಚರಣೆ ಬಳಿಕ ಗ್ರಾಮಕ್ಕೆ ವಿದ್ಯುತ್‌ ಮರು ಸಂಪರ್ಕ

ರೈತ ಸಂಘದ ಹೋರಾಟ ಫಲವಾಗಿ ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai)ಯವರು ಉಚಿತ ವಿದ್ಯುತ್‌ ನೀಡುವ ಭರವಸೆ ನೀಡಿದ್ದರು. ಆದರೆ ಈಗ ಉಲ್ಟಾಹೊಡೆದು ಯಾವುದೋ ಷರತ್ತನ್ನು ವಿಧಿಸಿ, ವಿದ್ಯುತ್‌ ಬಿಲ್‌ ಕಟ್ಟಿನಂತರ ಖಾತೆ ಜಮಾ ಮಾಡುತ್ತೇವೆ ಎಂದು ಕಾಫಿ ಬೆಳೆಗಾರರ ಕಿವಿಗೆ ಹೂ ಮುಡಿಸುವ ಪ್ರಯತ್ನ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗ್ಯಾಸ್‌ ಸಬ್ಸಿಡಿ ಕೊಟ್ಟು ನಂತರ ಸಬ್ಸಿಡಿ ಕಸಿದುಕೊಂಡ ಸರ್ಕಾರದ ಮೋಸವನ್ನು ಜನರು ಕಂಡಿದ್ದಾರೆ. ಇನ್ನು ವಿದ್ಯುತ್‌ ಬಿಲ್‌ನ್ನು ಖಾತೆಗೆ ಎಂಬುದು ಬೋಗಸ್‌ ಘೋಷಣೆ ಎಂದು ವ್ಯಂಗ್ಯವಾಡಿದರು.

ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಕಾಫಿ ಬೆಳೆಗಾರರು ಉಚಿತ ವಿದ್ಯುತ್‌ ನೀಡುವ ತನಕ ಹೋರಾಟ ಮುಂದುವರಿಸುತ್ತೇವೆ. ಜುಲೈನಿಂದ ಬಾಕಿಯಿರುವ ಬಿಲ್‌ ವಸೂಲಾತಿ ಸೆಸ್‌್ಕ ತಂತ್ರ ರೂಪಿಸಿದೆ. ಕಾಫಿ ಬೆಳೆಗಾರರ ತೆರಿಗೆಯಿಂದ ಸರ್ಕಾರ ನಡೆಸುತ್ತಿರುವವರು ಬೆಳೆಗಾರರ ನ್ಯಾಯಬದ್ಧ ಬೇಡಿಕೆಯನ್ನು ಈಡೇರಿಸದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಕಾಫಿ ತೋಟದ ವಿದ್ಯುತ್‌ ಪಂಪ್‌ಸೆಟ್‌ಗಳ ಬಿಲ್‌ ಪಾವತಿಸದ ರೈತರಿಗೆ ಸೆಸ್‌್ಕ ಕಿರುಕುಳ ನೀಡಿದರೆ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ವಿದ್ಯುತ್‌ ಸಂಪರ್ಕ ಕಿರಿಕಿರಿಗೆ ಶೀಘ್ರ ಮುಕ್ತಿ: ಸಿಎಂ ಬೊಮ್ಮಾಯಿ ಭರವಸೆ

ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ನೀಡಲು, ಕೋವಿಡ್‌ನಿಂದ ಆರ್ಥಿಕ ಸಮಸ್ಯೆ ಇದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಶಾಸಕರ, ಮಂತ್ರಿಗಳ ಸಂಬಳ, ಭತ್ಯೆ ಹೆಚ್ಚು ಮಾಡಿಕೊಳ್ಳಲು ಕೋವಿಡ್‌ ಸಮಸ್ಯೆಯಿಲ್ಲವೆ? ಶೇ.40 ಕಮಿಷನ್‌ ತಿನ್ನುತ್ತಿರುವುದು ಯಾರು? ರಾಜ್ಯದ ಸಂಪತ್ತನ್ನು ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ವಾಹ ಮಾಡುತ್ತಿಲ್ಲವೆ. ಇವರುಗಳ ಕೊಳ್ಳೆ ಹೊಡೆಯಬಹುದು, ಆದರೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ನೀಡಲು ಬೊಕ್ಕಸ ಖಾಲಿಯಾಗಿದೆಯೇ? ಎಂದು ದಿನೇಶ್‌ ಕಾರವಾಗಿ ಪ್ರಶ್ನಿಸಿದರು.

ರೈತರನ್ನು ಕಾಪಾಡಬೇಕಾದದರೆ, ಕೇರಳ ಮಾದರಿಯಲ್ಲಿ, ಕರ್ನಾಟಕ ರಾಜ್ಯಕೂಡ ಕಸ್ತೂರಿರಂಗನ್‌ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಸಂಘದ ಸಂಚಾಲಕ ಜಿ.ಎಂ. ಹೂವಯ್ಯ ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲೆಯ ಮೀಸಲು ಅರಣ್ಯ ಸೂಕ್ಷ್ಮಪರಿಸರ ವಲಯಕ್ಕೆ ಸೇರ್ಪಡೆಗೊಂಡರೆ ಯಾರ ಅಭ್ಯಂತರವಿಲ್ಲ. ಹಸಿರು ಪ್ರದೇಶವನ್ನೆಲ್ಲ ಸೇರಿಸಿದರೆ, ರೈತರು ನಗರ ಪ್ರದೇಶಗಳಿಗೆ ಕೂಲಿಗಾಗಿ ಗುಳೇ ಹೋಗಬೇಕಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷಕ್ಕಿಂತ ಪ್ರಸಕ್ತ ಮಳೆಗಾಲದಲ್ಲಿ 27 ಇಂಚು ಮಳೆ ಜಾಸ್ತಿ ಆಗಿದೆ ಅರೇಬಿಕಾ, ರೋಬಸ್ಟಾಕಾಫಿ ಫಸಲು ಉದುರಿ ಹಾನಿಯಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಸೂಕ್ತ ಪರಿಹಾರ ನೀಡಬೇಕು ಎಂದು ಸಂಚಾಲಕ ಎಸ್‌.ಬಿ. ರಾಜಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಾಜಿ ಸೈನಿಕ ಸಿ.ಬಿ. ಪ್ರಸನ್ನ, ಶಾಂತಮಲ್ಲಪ್ಪ ಇದ್ದರು.