ಕಬ್ಬನ್‌ ಪಾರ್ಕ್‌ಗೆ 4ನೇ ಶನಿವಾರ, ರಾಷ್ಟ್ರೀಯ ಹಬ್ಬದಂದು ವಾಹನ ಪ್ರವೇಶ ನಿಷೇಧ: ಭಾಸ್ಕರ್‌ರಾವ್‌| ತೋಟಗಾರಿಕೆ ಇಲಾಖೆಯ ಮನವಿಗೆ ಸ್ಪಂದಿಸಿದ ಪೊಲೀಸ್‌ ಆಯುಕ್ತರು|

ಬೆಂಗಳೂರು(ಜ.16): ನಗರದ ಕಬ್ಬನ್‌ ಪಾರ್ಕ್‌ನಲ್ಲಿ ಇನ್ನು ಮುಂದೇ ನಾಲ್ಕನೇ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಆದೇಶಿಸಿದ್ದಾರೆ.

Add Asianetnews Kannada as a Preferred SourcegooglePreferred

ಈಗಾಗಲೇ ಭಾನುವಾರ ಮತ್ತು ಎರಡನೇ ಶನಿವಾರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಈಗ ತೋಟಗಾರಿಕೆ ಇಲಾಖೆಯ ಮನವಿಯ ಮೇರೆಗೆ ನಾಲ್ಕನೇ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು (ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಹಾಗೂ ಗಣರಾಜ್ಯೋತ್ಸವ) ವಾಹನ ಪ್ರವೇಶಕ್ಕೆ ನಿಷೇಧ ಹೇರಿ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದರಿಂದ ಸರ್ಕಾರಿ ರಜೆ ದಿನವಾದ ಎರಡು ಮತ್ತು ನಾಲ್ಕನೇ ಶನಿವಾರದಂದು ಕಬ್ಬನ್‌ ಉದ್ಯಾನವನಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ನೆಮ್ಮದಿಯಿಂದ ಕಾಲ ಕಳೆಯಬಹುದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಬ್ಬನ್‌ ಉದ್ಯಾನಕ್ಕೆ ಪ್ರತಿ ದಿನ ಸಾವಿರಾರು ಜನ ಪ್ರವಾಸಿಗರು, ಸಾರ್ವಜನಿಕರು, ನಡಿಗೆದಾರರು, ಮಕ್ಕಳು ಮತ್ತು ವಯೋವೃದ್ಧರು ಭೇಟಿ ನೀಡುತ್ತಾರೆ. ಈ ಉದ್ಯಾನದ ಮೂಲಕ ಪ್ರತಿದಿನ ಲಕ್ಷಾಂತರ ವಾಹನಗಳು ಹಾದು ಹೋಗುವುದರಿಂದ ವಾಯು, ಶಬ್ದ ಮಾಲಿನ್ಯದಿಂದ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲು ಪ್ರತಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಉದ್ಯಾನಕ್ಕೆ ವಾಹನ ಪ್ರವೇಶಕ್ಕೆ ನಿಷೇಧಕ್ಕೆ ಇಲಾಖೆ ಮನವಿ ಮಾಡಿತ್ತು. ಇದೀಗ ಆದೇಶ ಹೊರಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ(ಕಬ್ಬನ್‌ ಪಾರ್ಕ್) ಜಿ.ಕುಸುಮಾ ಮಾಹಿತಿ ನೀಡಿದ್ದಾರೆ.

ರಾತ್ರಿ 10 ರಿಂದ ದ್ವಾರಗಳು ಸ್ಥಗಿತ:

ನಾಲ್ಕನೇ ಶನಿವಾರ ಮತ್ತು ಮೂರು ರಾಷ್ಟ್ರೀಯ ಹಬ್ಬಗಳ ದಿನದಂದು ಕಬ್ಬನ್‌ ಉದ್ಯಾನಕ್ಕೆ ವಾಹನ ಸಂಚಾರ ನಿಷೇಧಿಸುವ ಸಂಬಂಧ ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಆದೇಶದಂತೆ ಪ್ರತಿ ನಾಲ್ಕನೇ ಶನಿವಾರದ ಮುನ್ನಾ ದಿನ ರಾತ್ರಿ 10 ರಿಂದ ಸೋಮವಾರದ ಬೆಳಗ್ಗೆ 8ರವರೆಗೂ ಎಲ್ಲ ದ್ವಾರಗಳನ್ನು ಮುಚ್ಚಲಾಗುವುದು, ಜೊತೆಗೆ ರಾಷ್ಟ್ರೀಯ ಹಬ್ಬಗಳ ದಿನದ ಮುನ್ನಾ ದಿನ ರಾತ್ರಿ 10 ರಿಂದ ಎಲ್ಲ ದ್ವಾರಗಳನ್ನು ಮುಚ್ಚಲಾಗುತ್ತದೆ.

ಆದರೆ, ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನದಂದು ಪರೇಡ್‌ಗೆ ತೆರಳುವ ವಾಹನಗಳಿಗಾಗಿ ಬೆಳಗ್ಗೆ 8ರಿಂದ 10ರ ವರೆಗೆ ಮಾತ್ರ ಉದ್ಯಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಉಳಿದ ಸಮಯದಲ್ಲಿ ಎಲ್ಲ ದ್ವಾರಗಳನ್ನು ಮುಚ್ಚಲಾಗುವುದು ಎಂದರು.