*   2 ತಿಂಗಳಿಂದ ಸ್ಕ್ಯಾನಿಂಗ್‌ ಸೆಂಟರ್‌ ಸ್ಥಗಿತ*   ಅನಾರೋಗ್ಯದ ನಿಮಿತ್ತ ಎರಡು ತಿಂಗಳಿಂದ ರಜೆಯಲ್ಲಿರುವ ರೇಡಿಯಾಲಜಿಸ್ಟ್*   ಅಸಹಾಯಕತೆ ತೋಡಿಕೊಳ್ಳುತ್ತಿರುವ ಜಿಲ್ಲಾ ಶಸ್ತ್ರ ಚಿಕಿತ್ಸಕ ಹಾವನೂರ್ 

ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

Add Asianetnews Kannada as a Preferred SourcegooglePreferred

ಹಾವೇರಿ(ಏ.08):  ದುಡ್ಡಿಲ್ಲದ ಕಡು ಬಡವರು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ(Government Hospital) ಕಡೆ ಬರ್ತಾರೆ. ಬಿ‌ಪಿಎಲ್‌ ಕಾರ್ಡ್‌, ಆಯುಷ್ಮಾನ್ ಭಾರತ್ ಕಾರ್ಡ್‌(Ayushman Bharat Health Card) ಇದ್ರೆ ಎಲ್ಲಾ ಫ್ರೀ ಅನ್ನೋ ಮಾತನ್ನೇ ನಂಬಿಕೊಂಡು ಬರೋ ಬಡವರಿಗೆ ಸರ್ಕಾರಿ ಆಸ್ಪತ್ರೆಗಳು ನರಕ ತೋರಿಸಿ ಬಿಡುತ್ವೆ. 

ಹೌದು, ಸರಿಯಾದ ಚಿಕಿತ್ಸೆ(Treatment) ಸಿಗಲ್ಲ, ಡಾಕ್ಟರ್ ಇರಲ್ಲ. ಔಷಧಿ ಹೊರಗಡೆ ಖರೀದಿ ಮಾಡಬೇಕು. ಹೆಸರಿಗಷ್ಟೇ ಟ್ರೀಟಮೆಂಟು, ಮೆಡಿಸಿನ್ ಎಲ್ಲಾ ಫ್ರೀ ಅನ್ನೋ ತರ ಆಗಿದೆ ಬಡವರ ಬಾಳು. ಅಂದಹಾಗೆ ಹಾವೇರಿ ಜಿಲ್ಲಾಸ್ಪತ್ರೆಯ ಕಥೆಯೂ ವಿಭಿನ್ನವಾಗೇನಿಲ್ಲ. ಕೊರೋನಾ(Coronavirus) ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ನೂರಾರು ರೋಗಿಗಳು ಸಾವನ್ನಪ್ಪಿದ ಅಪಕೀರ್ತಿ ಈ ಹಾವೇರಿ ಜಿಲ್ಲಾಸ್ಪತ್ರೆ(Haveri District Hospital) ಮೇಲಿದೆ. ಈಗ ಮಗುವಿನ ನಿರೀಕ್ಷೆಯಲ್ಲಿ ಆಸ್ಪತ್ರೆಗೆ ಬರೋ ಬಡ ಗರ್ಭಿಣಿ(Pregnant) ಮಹಿಳೆಯ ಸ್ಥಿತಿ ಇಲ್ಲಿ ಶೋಚನೀಯ. ಕಾರಣ ಇಲ್ಲಿ ಕಳೆದೆರಡು ತಿಂಗಳಿಂದ ಸ್ಕ್ಯಾನಿಂಗ್(Scanning) ಸೆಂಟರ್ ಬಂದ್ ಆಗಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಸೆಂಟರ್‌ 2 ತಿಂಗಳಿಂದ ಸ್ಥಗಿತಗೊಂಡಿರುವ ಕಾರಣ ಗರ್ಭಿಣಿಯರು ತೀವ್ರ ಪರದಾಡುವಂತಾಗಿದೆ.

Haveri: ಪ್ರೈವೇಟ್‌ ಸ್ಕೂಲ್‌ಗೆ ಸಡ್ಡು ಹೊಡೆಯುತ್ತೆ ಈ ಸರ್ಕಾರಿ ಶಾಲೆ..!

ಕಳೆದ ಮೂರ್ನಾಲ್ಕು ವರ್ಷಗಳಿಂದ ಆಗಾಗ ಬಂದ್ ಆಗ್ತಿದ್ದ ಸ್ಕ್ಯಾನಿಂಗ್ ಸೆಂಟರ್ ಈಗ ಮತ್ತೆ 2 ತಿಂಗಳಿಂದ ಬಾಗಿಲು ಹಾಕಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಕೈಕ ರೇಡಿಯಾಲಜಿಸ್ಟ್ ಅನಾರೋಗ್ಯದ ನಿಮಿತ್ತ ಎರಡು ತಿಂಗಳಿಂದ ರಜೆ ಇದ್ದಾರೆ. ಮಗುವಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಒಟ್ಟು ಕನಿಷ್ಟ 5 ಬಾರಿಯಾದರೂ ಸ್ಕ್ಯಾನಿಂಗ್ ಮಾಡಲಾಗುತ್ತೆ. ಆದರೆ ಸ್ಕ್ಯಾನಿಂಗ್ ಘಟಕವೇ ಬಾಗಿಲು ಹಾಕಿರುವ ಕಾರಣ, ಬಡ ಹಾಗೂ ಮದ್ಯಮ ವರ್ಗದ ಗರ್ಭಿಣಿ ಮಹಿಳೆಯರು ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳ ಕಡೆ ಹೊಗ್ತಿದ್ದಾರೆ. ದುಬಾರಿ ಹಣ ಪಾವತಿ ಮಾಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.

Karnataka Politics: ಶಿಗ್ಗಾಂವಿ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

1500 ರಿಂದ 2000 ರೂಪಾಯಿ ಕೊಟ್ಟು ಸ್ಕ್ಯಾನಿಂಗ್ ಮಾಡಿಸಬೇಕಿದೆ‌. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಆಗಬೇಕಿದ್ದ ಸ್ಕ್ಯಾನಿಂಗ್‌ಗೆ ಬಡ ಗರ್ಭಿಣಿ ಹೆಣ್ಣುಮಕ್ಕಳು 1500 ರಿಂದ 2000 ರೂಪಾಯಿ ಖರ್ಚು ಮಾಡಬೇಕಿದೆ‌.

ಈ ಬಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಪಿ.ಆರ್ ಹಾವನೂರ್, ಗರ್ಭಿಣಿಯರಿಗೆ ತೊಂದರೆ ಆಗ್ತಿರೋದು ನಿಜ. ಆದರೆ ನಮ್ಮ ಜಿಲ್ಲಾಸ್ಪತ್ರೆಯಲ್ಲಿರೋದು ಒಬ್ರೇ ರೇಡಿಯಾಲಜಿಸ್ಟ್. ಅವರು ಅನಾರೋಗ್ಯದ ನಿಮಿತ್ತ ರಜೆ ಹಾಕಿದ್ದಾರೆ. ಇನ್ನೊಂದು ಹುದ್ದೆ ರೇಡಿಯಾಲಜಿಸ್ಟ್ ಇದ್ದಿದ್ರೆ ಖಂಡಿತ ಮ್ಯಾನೇಜ್ ಮಾಡಬಹುದಿತ್ತು. ಆದರೆ ಕೊಟ್ಟಿರೋದು ಒಂದೇ ಹುದ್ದೆ‌ ಎಂದು ಅಸಹಾಯಕತೆ ತೋಡಿಕೊಳ್ತಾರೆ. ಸದ್ಯ ಸ್ಕ್ಯಾನಿಂಗ್ ಸೆಂಟರ್ ಇಲ್ಲದೇ ಪರದಾಡ್ತಿರೋ ಗರ್ಭಿಣಿ ಮಹಿಳೆಯರ ಸಂಕಷ್ಟಕ್ಕೆ ಪರಿಹಾರ ಏನು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.