ಮುಸ್ಲಿಂ ಅಭಿವೃದ್ಧಿಗೆ ₹600 ಕೋಟಿ ಅನುದಾನ ನೀಡುವುದು ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ತಂತ್ರ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು (ಮೇ.23): ಆಳಂದದ ಕೇಸ್ ವಾಪಾಸ್ ಪಡೆಯುವುದು, ಶಾಲಾ ಕಾಲೇಜುಗಳಲ್ಲಿ ಹಿಜಾಬ್ಗೆ ಅವಕಾಶ ನೀಡಿರುವುದು ಮತ್ತು ಮುಸ್ಲಿಂ ಅಭಿವೃದ್ಧಿಗೆ ₹600 ಕೋಟಿ ಅನುದಾನ ನೀಡುವುದು ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ತಂತ್ರ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಉಪ ಚುನಾವಣೆ ಬಳಿಕ ಮುಸ್ಲಿಂ ಮುಖಂಡರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ತಣ್ಣಗಾಗಿಸುವ ಸಲುವಾಗಿ ರಾಜ್ಯ ಸರ್ಕಾರ ಮುಸ್ಲಿಂ ಓಲೈಕೆ ಮಾಡುತ್ತಿದೆ ಎಂದರು. ಶ್ರೀರಾಮ ಸೇನೆ ಸಂಘಟನೆಯಿಂದ ಕಲಬುರಗಿ ಆಳಂದ ಕೇಸ್ ವಾಪಾಸ್ ಪಡೆದಿರುವ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲ ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸರ್ಕಾರ ತೀರ್ಮಾನ ರದ್ದುಪಡಿಸುವಂತೆ ಕೋರುತ್ತೇವೆ ಎಂದು ತಿಳಿಸಿದರು.
ರಾಘವ ಚೈತ್ಯನ್ಯ ಪ್ರತಿಷ್ಠಾಪನೆ ಮಾಡಿದ್ದ ಈಶ್ವರ ಲಿಂಗವಿದ್ದು, ಅದನ್ನು ಮುಸ್ಲಿಮರು ಅತಿಕ್ರಮಣ ಮಾಡಿ ದರ್ಗಾ ಮಾಡಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಲಿಂಗದ ಮೇಲೆ ಮುಸ್ಲಿಮರು ಮಲಮೂತ್ರ ಮಾಡಿದ್ದರು. ಆಗ ಹಿಂದೂಗಳು ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಸಂಘರ್ಷ ಉಂಟಾಯಿತು. ಮುಸ್ಲಿಂ ಗೂಂಡಾಗಳು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಲ್ಲಿಂದ ಓಡಿಸಿದ್ದರು.
ಆಗ ಮುಸ್ಲಿಂ ಗೂಂಡಾಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ರಾಜ್ಯ ಸರ್ಕಾರ ಆ ಕೇಸ್ ವಾಪಾಸ್ ಪಡೆಯುವ ತೀರ್ಮಾನ ಮಾಡಿದೆ. ಈ ಮೂಲಕ ಪೊಲೀಸರ ಮನೋಬಲ ಕುಗ್ಗಿಸುವ ಕೆಲಸ ಸರ್ಕಾರ ಮಾಡಿದೆ. ಹೀಗಾಗಿ, ನ್ಯಾಯಾಲಯದ ಮೋರೆ ಹೋಗುತ್ತೇವೆ. ಸರ್ಕಾರದ ಕ್ರಮ ರದ್ದು ಪಡಿಸುವಂತೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕೇಸರಿ ಶಾಲು ಹಂಚುತ್ತೇವೆ
ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ವಿರುದ್ಧ ಜೂನ್ 1 ರಂದು ಶಾಲಾ ಕಾಲೇಜು ಆರಂಭ ಆಗುವ ದಿನ ಕೇಸರಿ ಶಾಲು ಹಂಚಿಕೆ ಮಾಡುತ್ತೇವೆ ಎಂದು ಶ್ರೀರಾಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹೈಕೋರ್ಟ್ ಹಿಜಾಬ್ ಧಾರ್ಮಿಕ ಭಾಗ ಅಲ್ಲ. ಕುರಾನ್ನಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಜತೆಗೆ, ಹಿಜಾಬ್ ಅನ್ನು ಎಲ್ಲಿ ಬೇಕಾದರೂ ಧರಿಸಬಹುದು. ಆದರೆ, ಶಾಲಾ-ಕಾಲೇಜು ಆವರಣದಲ್ಲಿ ಹಿಜಾಬ್ ತೆಗೆದು ಅಲ್ಲಿಯ ನಿಯಮ ಪ್ರಕಾರ ಸಮವಸ್ತ್ರ ಧರಿಸಬೇಕು ಎಂದು ಹೇಳಿತ್ತು.
ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಈ ವರೆಗೆ ಯಾವುದೇ ಆದೇಶ ನೀಡಿಲ್ಲ. ಈ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹಾಶಯ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡುವ ತೀರ್ಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮವಸ್ತ್ರದಲ್ಲಿ ಬೇಧ-ಭಾವ, ಮೇಲು-ಕೀಳು, ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್, ಉಚ್ಛ-ನೀಚ ಯಾವುದೂ ಇಲ್ಲ, ಸಮವಸ್ತ್ರ ಪದದ ಅರ್ಥ ಮಧು ಬಂಗಾರಪ್ಪಗೆ ಅರ್ಥವಾಗಿಲ್ಲವೇ, ಹಿಜಾಬ್ ಅವಕಾಶ ನೀಡುವ ಮೂಲಕ ಸಮಾಜದಲ್ಲಿ ವಿಷ ಬೀಜ ಬಿತ್ತ ಲಾಗುತ್ತಿದೆ. ಶಿವದಾರ-ಜನಿವಾರ-ರುದ್ರಾಕ್ಷಿ ಹಾಕಬಹುದು ಎಂದು ಹೇಳುತ್ತಿರಾ, ಅದನ್ನು ಹೇಳುವುದಕ್ಕೆ ನೀವು ಯಾರು ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.


