*  ಅ. 7ರಿಂದ ರಾಜ್ಯಾದ್ಯಂತ ಹೋರಾಟ: ಪ್ರಮೋದ್ ಮುತಾಲಿಕ್*  ಮಸೀದಿ, ಚರ್ಚ್ ಹೀಗೆ ಅನೇಕ ಪ್ರದೇಶಗಳನ್ನು ನಿಶಬ್ಧ ವಲಯಗಳು ಎಂದು ಘೋಷಣೆ*  ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಶಬ್ಧ ಮಾಲಿನ್ಯ ಆಗಬಾರದೆಂದು ನ್ಯಾಯಾಲಯ ಆದೇಶ  

ಬೀದರ್(ಅ.02): ಮುಸ್ಲಿಮರ ಪ್ರಾರ್ಥನೆ, ಭಕ್ತಿಗೆ ನಮ್ಮ ಆಕ್ಷೇಪ ಇಲ್ಲ. ಆದರೆ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ ಮಸೀದಿಗಳಲ್ಲಿ ಶಬ್ಧ ಮಾಲಿನ್ಯ ನಿಲ್ಲಿಸುವಂತೆ ಸುಪ್ರೀಂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಗ್ರಹಿಸಿ ಅ. 7ರಿಂದ ರಾಜ್ಯಾದ್ಯಂತ ಹೋರಾಟ ಪ್ರಾರಂಭಿಸಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Mutalik) ತಿಳಿಸಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಾಲಯ, ಮಸೀದಿ(Mosques), ಚರ್ಚ್(Church)ಹೀಗೆ ಅನೇಕ ಪ್ರದೇಶಗಳನ್ನು ನಿಶಬ್ಧ ವಲಯಗಳು ಎಂದು ಘೋಷಿಸಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಶಬ್ಧ ಮಾಲಿನ್ಯ ಆಗಬಾರದೆಂದು ನ್ಯಾಯಾಲಯ ಆದೇಶ ನೀಡಿದ್ದರೂ ಜಾರಿಗೆ ಸರ್ಕಾರ ಮುಂದಾಗಿಲ್ಲ. ಬೆಳಿಗ್ಗೆ 5ರಿಂದ ದಿನಕ್ಕೆ ಮಸೀದಿಗಳಲ್ಲಿ ಮೈಕ್ ಬಳಸಿ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಅ.7ರೊಳಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಮೊದಲ ಹಂತವಾಗಿ ಹೋರಾಟ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ನಂತರ ಹಂತ, ಹಂತವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಅಸ್ಪೃಶ್ಯತೆ ಆಚರಣೆ ಮಾಡೋರನ್ನ ಗಲ್ಲಿಗೇರಿಸಿ: ಮುತಾಲಿಕ್‌

ಕಾನೂನು ಜಾರಿ ಮಾಡಿ: ರಾಜ್ಯಾದ್ಯಂತ ಮತಾಂತರ ಘಟನೆಗಳು ನೋಡುತ್ತಿದ್ದೇವೆ. ಬೀದರ್‌ನಲ್ಲಿ(Bidar) ನಿರಂತರವಾಗಿ ಮತಾಂತರ ನಡೆಯುತ್ತಿದೆ. ಇಲ್ಲಿಯ 2 ಸಮುದಾಯವನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡಲಾಗುತ್ತಿದೆ. ಮತಾಂತರ ತಡೆಗೆ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಕಾನೂನು ಜಾರಿಗೆ ತರಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಬೀದರ್‌ನಲ್ಲಿ ಬಹಳಷ್ಟು ಜನ ಆಮಿಷಕ್ಕೆ ಒಳಗಾಗಿ ಮತಾಂತರಗೊಂಡಿದ್ದಾರೆ ಎಂದರು. ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಇದ್ದರು.