ಒಂದಾಗುತ್ತಿದ್ದಾರೆ ನಿಖಿಲ್-ಪ್ರಜ್ವಲ್ : ಹೊಸ ಸುಳಿವು ನೀಡಿದ ಯೂತ್ ಲೀಡರ್
ಪ್ರಜ್ವಲ್ ರೇವಣ್ಣ ಹೊಸ ಸುಳಿವೊಂದನ್ನು ನೀಡಿದ್ದಾರೆ. ಇದೀಗ ಸಹೋದರರಿಬ್ಬರು ಒಂದಾಗಿ ಹೊಸ ಕಾರ್ಯ ಮಾಡಲು ಮುಂದಾಗಿದ್ದಾರೆ.
ಸುಬ್ರಹ್ಮಣ್ಯ (ಡಿ.02): ಜೆಡಿಎಸ್ ಬಲವರ್ಧನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಜನವರಿ 15ರ ನಂತರ ನಾನು ಮತ್ತು ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇವೆ. ಅಲ್ಲದೆ ಪಕ್ಷದ ಶಕ್ತಿ ವರ್ಧನೆಯ ನಿಟ್ಟಿನಲ್ಲಿ ಪಕ್ಷದಲ್ಲಿ ತಟಸ್ಥವಾಗಿರುವ ನಾಯಕರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಮಹಾಪೂಜೆ ಸೇವೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬರುವ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ತೋರಲಿದೆ.ಈ ನಿಟ್ಟಿನಲ್ಲಿ ಈಗಾಗಲೇ ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು.
ಬಾ ಗುರೂ ಮಾತನಾಡೋಣ: ಮುನಿಸು ಮರೆತು ಒಂದಾದ ಅಣ್ತಮ್ಮಾಸ್ ..
ಗ್ರಾ.ಪಂ. ಚುನಾವಣೆಯಲ್ಲಿ ಆಯಾಯ ಕ್ಷೇತ್ರದ ನಾಯಕರಿಗೆ, ಶಾಸಕರಿಗೆ ಮಾಗೂ ಮಾಜಿ ಶಾಸಕರಿಗೆ ಜವಾಬ್ದಾರಿ ನೀಡಲಾಗುವುದು. ಈ ಬಾರಿ ಜೆಡಿಎಸ್ ಮತ್ತೆ ತನ್ನ ಅಸ್ತಿತ್ವವನ್ನು ತೋರ್ಪಡಿಸಲಿದೆ. ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಹಂತ ಹಂತವಾಗಿ ಪಕ್ಷದ ಬಲವರ್ಧನೆಗೆ ಚಿಂತನೆ ನಡೆಸಲಾಗಿದೆ. ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವ ನಾಯಕರು ಇನ್ನಿಲ್ಲ. ಮುಂದೆ ಬರುವ ಗ್ರಾ.ಪಂ.ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ದುಡಿಯಲಿದ್ದೇವೆ ಎಂದು ಹೇಳಿದರು.
ಅದೇ ರೀತಿ ಬಿಸಿಲೆಯ ರಸ್ತೆಯ ಸ್ವಲ್ಪ ಭಾಗ ಕಾಂಕ್ರೀಟ್ ರಸ್ತೆ ಕಾಮಗಾರಿ ಬಾಕಿಯಾಗಿದೆ. ಮಳೆಯ ಕಾರಣದಿಂದ ಈ ಕಾಮಗಾರಿ ತಡವಾಯಿತು.ಈ ಬಗ್ಗೆ ಈಗಾಗಲೇ ಸಂಬಂಧಪಟ್ಟಲೋಕೋಪಯೋಗಿ ಅಭಿಯಂತರರಲ್ಲಿ ಮಾತನಾಡಿದ್ದೇನೆ. ಈಗ ಆ ರಸ್ತೆಯಲ್ಲಿ ತೆರಳಿ ರಸ್ತೆಯನ್ನು ವೀಕ್ಷಿಸುತ್ತೇನೆ. ಬಳಿಕ ಶೀಘ್ರವೇ ಈ ರಸ್ತೆಯ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಜ್ವಲ್ ರೇವಣ್ಣ ನುಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ದ.ಕ. ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ, ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಮೀರಾ ಸಾಹೇಬ್, ಸಂಘಟನಾ ಕಾರ್ಯದರ್ಶಿ ಇ.ಜಿ.ಜೋಸೆಫ್, ಸುಬ್ರಹ್ಮಣ್ಯ ಜೆಡಿಎಸ್ ಅಧ್ಯಕ್ಷ ಡಾ. ತಿಲಕ್ ಎ.ಎ, ಕಾರ್ಯದರ್ಶಿ ದಿನೇಶ್ ಎಂ.ಪಿ, ಜೆಡಿಎಸ್ ಮುಖಂಡರಾದ ಚಂದ್ರಶೇಖರ ಚೆನ್ನಕಜೆ, ಅಗ್ರಹಾರ ದುಗ್ಗಪ್ಪ, ಎಂ.ಸುಂದರ ಸುಂಕದಕಟ್ಟೆ, ಸಜಿತ್ ಕುಟ್ಟುಪ್ಪಾಡಿ ಇದ್ದರು.