ಶಿಕ್ಷಣದಿಂದ ಮಾತ್ರ ಬಡತನ ನಿಮೂರ್ಲನೆ ಸಾಧ್ಯ: ಉದಯ್
ಶಿಕ್ಷಣದಿಂದ ಮಾತ್ರ ಬಡತನ ನಿಮೂರ್ಲನೆ ಸಾಧ್ಯವಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ಓದಿನ ಕಡೆ ಗಮನಕೊಡುವ ಮೂಲಕ ಉತ್ತಮ ಪ್ರಜೆಗಳಾಗಿ ಸಾಮಾಜಿಕ ಪಿಡುಗಳು ವಿರುದ್ಧ ಹೋರಾಡಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕೆಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ. ಉದಯ್ ತಿಳಿಸಿದರು.
![Poverty can be eradicated only through education: Uday snr Poverty can be eradicated only through education: Uday snr](https://static-ai.asianetnews.com/images/01hm8a118n73mgpx39bnsqc31d/15-tpt1-369_363x203xt.jpg)
ತಿಪಟೂರು : ಶಿಕ್ಷಣದಿಂದ ಮಾತ್ರ ಬಡತನ ನಿಮೂರ್ಲನೆ ಸಾಧ್ಯವಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ಓದಿನ ಕಡೆ ಗಮನಕೊಡುವ ಮೂಲಕ ಉತ್ತಮ ಪ್ರಜೆಗಳಾಗಿ ಸಾಮಾಜಿಕ ಪಿಡುಗಳು ವಿರುದ್ಧ ಹೋರಾಡಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕೆಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ. ಉದಯ್ ತಿಳಿಸಿದರು.
ನಗರದ ಹಳೇಪಾಳ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಟ್ಯೂಶನ್ ಕ್ಲಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಅಮೂಲ್ಯವಾಗಿದ್ದು ನಿಮ್ಮ ಭವಿಷ್ಯವನ್ನು ಬದಲಿಸುವ ಪ್ರಮುಖ ಘಟ್ಟವಾಗಿದೆ. ಈ ಸಮಯದಲ್ಲಿ ಅಶಿಸ್ತು, ಬೇಜವಾಬ್ದಾರಿ ಬಿಟ್ಟು ಓದಿನತ್ತ ಗಮನಹರಿಸಿದರೆ ನೀವು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದು. ನಿಮ್ಮ ಅನುಕೂಲಕ್ಕಾಗಿಯೇ ಸಂಪನ್ಮೂಲ ವ್ಯಕ್ತಿಗಳಿಂದ ಟ್ಯೂಶನ್ ಕ್ಲಾಸ್ ನಡೆಸಲಾಗುತ್ತಿದೆ. ಧರ್ಮಸ್ಥಳ ಸಂಸ್ಥೆಯು ಸಮಾಜದ ಏಳಿಗೆಗಾಗಿ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದು ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ ಶಾಲೆಗಳಿಗೆ ಬೆಂಚು, ಡೆಸ್ಕ್, ಶೌಚಾಲಯ ನಿರ್ಮಾಣಕ್ಕೆ ಧನಸಹಾಯ, ಶಿಕ್ಷಕರ ಕೊರತೆ ಇರುವ ಕಡೆ ಜ್ಞಾನದೀಪ ಶಿಕ್ಷಕರ ನೇಮಕ ಈ ರೀತಿ ಅನೇಕ ಸೌಲಭ್ಯಗಳನ್ನು ಒದಗಿಸಿ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಪೂಜ್ಯರು ಕಟಿಬದ್ದರಾಗಿದ್ದು ಈ ಕಾರ್ಯಕ್ರಮದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದರು.
ಮುಖ್ಯ ಶಿಕ್ಷಕಿ ಎಸ್.ಎಸ್. ತೇಜಸ್ವಿ ಮಾತನಾಡಿ, ಧರ್ಮಸ್ಥಳವು ಚತುರ್ಧನಗಳಿಗೆ ಹೆಸರುವಾಸಿಯಾಗಿದ್ದು, ಕರ್ನಾಟಕದ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿದ್ದು ಕೇವಲ ಧಾರ್ಮಿಕತೆಗೆ ಸೀಮಿತವಾಗದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಶ್ರಮಿಸುತ್ತಾ ಸಮಾಜದ ಸರ್ವರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಟ್ಯೂಶನ್ ಕ್ಲಾಸ್ ತರಗತಿ ಪ್ರಯೋಜನಕಾರಿಯಾಗಿದ್ದು ನಮ್ಮ ಶಾಲೆಯಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ಭಾರತಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.