Asianet Suvarna News Asianet Suvarna News

ನರೇಂದ್ರ ಮೋದಿ ಬುದ್ಧಿವಂತ ಪ್ರಧಾನಿ: ಮಹದಾಯಿ ವಿವಾದ ಇತ್ಯರ್ಥ ಪಡಿಸಲಿ

ಗೋವಾ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಮೋದಿ ಸಭೆ ನಡೆಸುವಂತೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಆಗ್ರಹ| ಉತ್ತರ ಕರ್ನಾಟಕ ಮಠಾಧೀಶರು, ಕನ್ನಡಪರ, ರೈತಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಹಕ್ಕೊತ್ತಾಯ|

PM Narendra Modi Should be Settle for Mahadayi Dispute
Author
Bengaluru, First Published Jan 11, 2020, 10:55 AM IST

ಬೆಳಗಾವಿ(ಜ.11): ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಾದ ಮಹದಾಯಿ ನೀರಿನ ಸಮಸ್ಯೆ ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸುವ ಸಂಬಂಧ ಗೋವಾ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸುವಂತೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ನಡೆದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಮಠಾಧೀಶರು, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ರೈತ ಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಒಕ್ಕೊರಲಿನಿಂದ ಹಕ್ಕೊತ್ತಾಯ ಮಂಡಿಸಲಾಯಿತು. 

ಬೆಳಗಾವಿ ನಗರದ ನಾಗನೂರು ರುದ್ರಾಕ್ಷಿಮಠದ ಸಭಾಭವನದಲ್ಲಿ ನಡೆದ ಮಹದಾಯಿ ಯೋಜನೆ ಅನುಷ್ಠಾನ ವಿಳಂಬ ಹಾಗೂ ಗಡಿ ವಿವಾದ ಕುರಿತ ಉತ್ತರ ಕರ್ನಾಟಕ ಮಠಾಧೀಶರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಹದಾಯಿ ಸಮಸ್ಯೆ ಹಾಗೂ ಗಡಿ ವಿವಾದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆಯು ಒಮ್ಮತದಿಂದ ನಿರ್ಣಯ ಅಂಗೀಕರಿಸಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ 13 ತಾಲೂಕುಗಳಿಗೆ ಸಂಬಂಧಿಸಿದ ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಸಾಧ್ಯವಾಗದಿರುವುದಕ್ಕೆ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆಯೇ ಕಾರಣ. 2018ರ ಆಗಸ್ಟ್ 14ರಂದೇ ನ್ಯಾ.ಜೆ.ಎಂ.ಪಾಂಚಾಲ ನೇತೃತ್ವದ ನ್ಯಾಯಮಂಡಳಿ ತನ್ನ ತೀರ್ಪು ಪ್ರಕಟಿಸಿದೆ. ಈ ತೀರ್ಪು ಹೊರಬಂದು 17 ತಿಂಗಳಾದರೂ ಕೇಂದ್ರ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಈ ಮಧ್ಯೆ ಪಾಂಚಾಲ ನ್ಯಾಯಮಂಡಳಿ ತೀರ್ಪಿನ ವಿರುದ್ಧ ಸಂಬಂಧಿಸಿದ ರಾಜ್ಯಗಳು ಸುಪ್ರೀಂಕೋಟ್ ನರ್ಲ್ಲಿ ಮೇಲ್ಮನವಿ ಸಲ್ಲಿಸಿವೆ. 

ನ್ಯಾಯಾಂಗದಲ್ಲಿಯೇ ಈ ವಿವಾದ ಇತ್ಯರ್ಥವಾಗಬೇಕಾದರೆ ವಿಳಂಬವಾ ಗುವ ಸಾಧ್ಯತೆಯಿದೆ. ಹಾಗಾಗಿ, ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಲು ಪ್ರಧಾನಿ ಮೋದಿ ಅವರು ಮುಂದಾಗಬೇಕು ಎಂದೂ ಇಲ್ಲಿ ಆಗ್ರಹಿಸಲಾಯಿತು. 

ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮಹದಾಯಿ ನೀರಿನ ವಿವಾದ ಬಗೆಹರಿಸುವ ಸಲುವಾಗಿ ರಾಜ್ಯದ 28 ಸಂಸದರು ಹಾಗೂ ರಾಜ್ಯಸಭೆ ಸದಸ್ಯರು ಕೂಡಲೇ ಕೇಂದ್ರಕ್ಕೆ ಸರ್ವಪಕ್ಷ ಮತ್ತು ಮಹದಾಯಿ ಹೋರಾಟಗಾರರ ನಿಯೋಗ ದೆಹಲಿಗೆ ತೆಗೆದುಕೊಂಡು ಹೋಗಬೇಕು. ಅಗತ್ಯಬಿದ್ದರೆ ಕೇಂದ್ರ ಸಂಪುಟದಲ್ಲಿರುವ ಕರ್ನಾಟಕದ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಕ್ಕೂ ಸಿದ್ಧರಾಗಬೇಕು ಎಂದು ಸಭೆ ಒತ್ತಾಯಿಸಿತು. 

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಆದರೆ, ರಾಜಕೀಯ ಸ್ವಾರ್ಥಕ್ಕಾಗಿ ಮಹಾರಾಷ್ಟ್ರ ಗಡಿ ವಿವಾದ ಕ್ಯಾತೆ ತೆಗೆದು ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. 

ಸಭೆ ಕರೆಯಲು ಆಗ್ರಹ:

ಮಹಾರಾಷ್ಟ್ರ ಗಡಿ ಕ್ಯಾತೆ ತೆಗೆಯುತ್ತಿರುವುದನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಗಡಿಭಾಗದ ಕನ್ನಡಿಗರನ್ನು ಹಾಗೂ ಕನ್ನಡ ಸಂಘಟನೆಗಳನ್ನು ಬಲಗೊಳಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು. ಗಡಿ ಸಂರಕ್ಷಣಾ ಆಯೋಗ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಗಡಿ ಬಗ್ಗೆ ಕಳಕಳಿ, ಕಾಳಜಿ ಉಳ್ಳವರನ್ನು ನೇಮಕ ಮಾಡಿ, ಈ ಎರಡೂ ಸಂಸ್ಥೆಗಳನ್ನು ಸುವರ್ಣವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. 

ಬೆಳಗಾವಿಯ ಒಂದಂಗುಲ ನೆಲವನ್ನೂ ಬಿಟ್ಟು ಕೊಡುವುದಿಲ್ಲವೆಂಬ ಹೇಳಿಕೆ ಕೊಡುವುದನ್ನು ಬಿಟ್ಟು ರಾಜ್ಯ ಸರ್ಕಾರದ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಬೇರೆ ಏನೂ ಮಾಡಿಲ್ಲ. ಕೈಗೊಳ್ಳಬೇಕಾದ ನಿರ್ದಿಷ್ಟ ಮತ್ತು ದೃಢವಾದ ಕ್ರಮಗಳನ್ನು ಚರ್ಚಿಸಲು ಮುಖ್ಯಮಂತ್ರಿಗಳು ಹೋರಾಟಗಾರರ ಮತ್ತು ಈ ಭಾಗದ ಜನಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯನ್ನು ಸುವರ್ಣವಿಧಾನಸೌಧದಲ್ಲಿ ಕರೆಯಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. 

ಮೋದಿ ಬುದ್ಧಿವಂತ ಪ್ರಧಾನಿ: 

ಸಭೆಯ ನೇತೃತ್ವ ವಹಿಸಿದ್ದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬುದ್ಧಿವಂತರಿದ್ದಾರೆ. ಸಮಸ್ಯೆ ಪರಿಹಾರ ಮಾಡಲು ಪ್ರಧಾನಿ ಮೋದಿ ಮನಸು ಮಾಡುತ್ತಿಲ್ಲ. ಗೋವಾ, ಕರ್ನಾಟಕ ಮುಖ್ಯಮಂತ್ರಿ ಅವರನ್ನು ಕರೆಸಿ ಮನವರಿಕೆ ಮಾಡಬೇಕು. ಪೌರತ್ವ ಕಾಯ್ದೆಯನ್ನು ಯಾರೂ ಕೇಳಿರಲಿಲ್ಲ. ಅದನ್ನು ಜಾರಿಗೆ ತಂದರು. ಯಾವುದು ಅವಶ್ಯಕತೆ ಇದೆಯೋ ಆ ಕಾನೂನು ಜಾರಿಗೆ ತರಬೇಕು. ಮಹದಾಯಿ ಸಮ ಸ್ಯೆ ವಿಚಾರದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹೃದಯವಂತಿಕೆ ತೋರಿಸಬೇಕು. 

ಬುದ್ಧಿಜೀವಿಗಳಿಂದ ಸಮಸ್ಯೆಗಳು ಉಲ್ಬಣಗಳಾಗುತ್ತವೆ. ಹೃದಯವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು. ನಮ್ಮ ಪ್ರಧಾನಿ ಅಯೋಧ್ಯೆ ವಿವಾದ ಬಗೆಹರಿಸಿದ್ದಾರೆ. ಕಾಶ್ಮೀರದಲ್ಲಿನ ಕಲಂ 370 ರದ್ದುಪಡಿಸಿದ್ದಾರೆ. ಅದೇ ರೀತಿ ಮನಸು ಮಾಡಿ ಮಹದಾಯಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಬೇಕು. ರಾಜ್ಯದ 28 ಸಂಸದರ ಮೇಲೆ ಗೋವಾದ ಇಬ್ಬರು ಸಂಸದರು ಪ್ರಭುತ್ವ ಸಾಧಿಸಿದ್ದಾರೆ ಎಂದರು. 

ಗಡಿ ಸಮಸ್ಯೆ ನಮಗೆ ಜ್ವಲಂತ ಸಮಸ್ಯೆಯಾಗಿದೆ. ನರಗುಂದದಲ್ಲಿ ಸರಣಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೆ, ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಇನ್ನೂ ಕಣ್ಣೆತ್ತಿ ನೋಡಿಲ್ಲ. ನಮ್ಮ ಸರ್ಕಾರ, ರಾಜಕೀಯ ಪಕ್ಷಗಳಿಂದ ಆರೋಪ, ಪ್ರತ್ಯಾರೋಪ ತೊಡಗಿವೆ. ಜನಪ್ರತಿನಿಧಿಗಳ ಜನಪರ ಕಾಳಜಿ, ಚು ನಾವಣಾ ಭಾಷಣ ಪ್ರಶ್ನಾರ್ಹವಾಗಿದೆ ಎಂದರು. ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಗಡಿ ಕ್ಯಾತೆ ಕುರಿತು ಮಹಾರಾಷ್ಟ್ರ ಜನರೇ ರಾಜಕೀಯ ಗಿಮಿಕ್ ಅನ್ನುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಆದರೆ, ಸಾಲ ಮನ್ನಾ ಮಾಡುವ ಶಕ್ತಿ ಇಲ್ಲದ್ದರಿಂದ ಗಡಿ ವಿವಾದ ಪ್ರಸ್ತಾಪಿಸಿ ಜನರನ್ನು ಭಾವನಾತ್ಮಕ ವಿಚಾರ ತರಲು ಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರ ಸುಮ್ಮನೆ ಕೂರಬಾರದು. ಗಡಿ ಸಂರಕ್ಷಣಾ ಆಯೋಗಕ್ಕೆ ಈ ಭಾಗದ ಸಮಸ್ಯೆ ಅರಿವಿರುವ ವ್ಯಕ್ತಿಗಳ ನೇಮಿಸಬೇಕು. ಈ ಕಚೇರಿ ಸುವರ್ಣವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಎಲ್ಲ ಪ್ರಾಧಿಕಾರ, ಅಕಾಡೆಮಿಗಳು ಟಿಎ, ಡಿಎ ಸಲ್ಲಿಸಲು ಮಾತ್ರ ಸೀಮಿತವಾಗಿವೆ. ಯಾವ ಪುರುಷಾ ರ್ಥಕ್ಕಾಗಿ ಸುವರ್ಣ ಸೌಧ ಕಟ್ಟಿದ್ದಾರೆ ಎಂದು ಪ್ರ್ರಶ್ನಿಸಿದರು. 

ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕ ಸುಮಾರು 20 ಮಠಾಧೀಶರು ಸಭೆಯಲ್ಲಿ ಪಾಲ್ಗೊಂಡಿದ್ದರು. ರೈತ ಮುಖಂಡರಾದ ವಿಜಯ ಕುಲಕರ್ಣಿ, ಸಿದ ಗೌಡ ಮೋದಗಿ, ಲಿಂಗರಾಜ ಪಾಟೀಲ, ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ಸಿದ್ದನಗೌಡ ಪಾಟೀಲ, ಮಹಾದೇವ ತಳವಾರ, ದೀಪಕ ಗುಡಗನ ಟ್ಟಿ, ಶ್ರೀನಿವಾಸ ತಾಳೂಕರ ಇತರರು ಇದ್ದರು. 

ಪ್ರಕಟಣೆಗೆ ಸ್ಪಂದಿಸಿದ ಹೋರಾಟಗಾರರು: 

ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅವರು ಈ ಸಭೆಯ ಕುರಿತು ಕೇವಲ ಪ್ರಕಟಣೆಯನ್ನಷ್ಟೇ ಹೊರಡಿಸಿದ್ದರು. ಯಾರಿಗೂ ವೈಯಕ್ತಿಕವಾಗಿ ಸಂಪರ್ಕಿಸಿ, ಸಭೆಗೆ ಆಹ್ವಾನಿಸರಲಿಲ್ಲ. ರಾಜಕಾರಣಿಗಳಿಗೆ ಸಭೆಗೆ ಆಹ್ವಾನ ವನ್ನು ನೀಡಿರಲಿಲ್ಲ. ಪತ್ರಿಕೆಯಲ್ಲಿನ ಸುದ್ದಿ ನೋಡಿ ಕನ್ನಡಪರ ಹಾಗೂ ರೈತ ಪರ ಸಂಘಟನೆಗಳ ಮುಖಂಡರು ಸಭೆಗೆ ಆಗಮಿಸಿದ್ದರು. ರಾಜಕಾರಣಿಗಳನ್ನು ಸಭೆಯಿಂದ ದೂರವಿಟ್ಟಿದ್ದು ವಿಶೇಷವಾಗಿತ್ತು.

* ಪ್ರಧಾನಿ ಮೋದಿ ಎರಡೂ ರಾಜ್ಯಗಳ ಸಿಎಂ ಅವರ ಸಭೆ ಕರೆಯಲಿ ಎಂದು ಒತ್ತಾಯ 
* ಪ್ರಧಾನಿಯವರು ಸಮಸ್ಯೆ ಇತ್ಯರ್ಥಕ್ಕೆ ಹೃದಯವಂತಿಕೆ ತೋರಿಸಲಿ: ತೋಂಟದ ಶ್ರೀ 
* ಮಹದಾಯಿ ಕುರಿತ ತೀರ್ಪು ಪ್ರಕಟವಾಗಿ 17 ತಿಂಗಳಾದರೂ ಅಧಿಸೂಚನೆ ಹೊರಡಿಸಿಲ್ಲ 
* ರಾಜ್ಯದ ಸಂಸದರಿಗೆ ರಾಜ್ಯದ ಸಮಸ್ಯೆ ಬಗೆಹರಿಸುವ ಇಚ್ಛಾ ಶಕ್ತಿ ಕೊರತೆ ಎಂದು ತರಾಟೆಗೆ ತೆಗೆದುಕೊಂಡರು

Follow Us:
Download App:
  • android
  • ios