'ಬೆಲೆ ನೀಡದ್ದಕ್ಕೆ ಕೈ ಸೇರಿದೆ' : 25 ವರ್ಷದ ಜೆಡಿಎಸ್ ನಂಟು ಬಿಟ್ಟ HDD ಸಂಬಂಧಿ
25 ವರ್ಷಗಳಿಗೂ ಹೆಚ್ಚು ಕಾಲ ನಾನು ಜೆಡಿಎಸ್ ಪಕ್ಷದಲ್ಲಿದ್ದೆ. ಎಚ್.ಡಿ. ದೇವೇಗೌಡರು ಸಹ ನಮಗೆ ಸಂಬಂಧಿಕರೇ. ಆದರೆ ಜೆಡಿಎಸ್ ಪಕ್ಷದವರು ತತ್ವ , ಸಿದ್ಧಾಂತ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ನೀಡದ್ದರಿಂದ ಪಕ್ಷ ತೊರೆದೆ ಎಂದು ಮುಖಂಡರೋರ್ವರು ಹೇಳಿದ್ದಾರೆ.
ಪಿರಿಯಾಪಟ್ಟಣ (ಫೆ.01): ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತವಿಲ್ಲ. ಕೇವಲ ಸ್ವಾರ್ಥ ಮತ್ತು ಅವಕಾಶವಾದಿ ರಾಜಕಾರಣ ಮಾತ್ರ ಗೊತ್ತಿದೆ ಎಂದು ಮಾಜಿ ಶಾಸಕ ಕೆ. ವೆಂಕಟೇಶ್ ಆರೋಪಿಸಿದರು.
ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 25 ವರ್ಷಗಳಿಗೂ ಹೆಚ್ಚು ಕಾಲ ನಾನು ಜೆಡಿಎಸ್ ಪಕ್ಷದಲ್ಲಿದ್ದೆ. ಎಚ್.ಡಿ. ದೇವೇಗೌಡರು ಸಹ ನಮಗೆ ಸಂಬಂಧಿಕರೇ. ಆದರೆ ಜೆಡಿಎಸ್ ಪಕ್ಷದವರು ತತ್ವ , ಸಿದ್ಧಾಂತ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ನೀಡದೆ, ಕೇವಲ ಅಧಿಕಾರ ಮತ್ತು ಸ್ವಾರ್ಥ ರಾಜಕಾರಣ ಮಾಡಿದ ಕಾರಣ ಜೆಡಿಎಸ್ನಿಂದ ಹೊರ ನಡೆದನೆ ಹೊರತು, ಅವರು ನನಗೆ ಮಂತ್ರಿಗಿರಿ ಅಥವಾ ಅಧಿಕಾರ ಕೊಟ್ಟಿಲ್ಲ ಎಂದಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ ಸೇರುವಾಗ ಮುಖಂಡರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಜೆಡಿಎಸ್ನಲ್ಲಿಯೇ ಉಳಿದವರಿಗೆಲ್ಲ ಶಾಸಕರ ವರ್ತನೆಯಿಂದ ಬೇಸತ್ತು ತಡವಾಗಿಯಾದರೂ ಅರಿವಾಗಿ ಮತ್ತೆ ನನ್ನೊಂದಿಗೆ ಸೇರಿ ಮರಳಿ ಗೂಡಿಗೆ ಬಂದಿರುವುದು ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದರು.
'2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ'
ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಪ್ರತಿ ಹಳ್ಳಿಗಳಲ್ಲಿ ಸರ್ವೇ ನಡೆಯಲಿ. ಯಾರ ಅವಧಿಯಲ್ಲಿ ಎಷ್ಟುಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಕಾಮಗಾರಿಗಳು ನಡೆದಿವೆ ಎಂದು ಮತದಾರರಿಗೆ ತಿಳಿಯಲಿದೆ. ಅಗ್ನಿಶಾಮಕ ಠಾಣೆ, ಸಾರಿಗೆ ಘಟಕ, ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆ, ಪಟ್ಟಣದಲ್ಲಿ ವಿವಿಧ ಜನಾಂಗಗಳ ಸಮುದಾಯ ಭವನ ಮಂಜೂರು, ಪಾಲಿಟೆಕ್ನಿಕ್ ಮಂಜೂರು, ಮಿನಿ ವಿಧಾನಸೌಧ, ಪುರಸಭಾ ಕಟ್ಟಡ, ಉಗ್ರಾಣ ನಿರ್ಮಾಣ ಸೇರಿದಂತೆ ಶಾಶ್ವತವಾಗಿ ಉಳಿಯುವ ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದು, ಈಗಿನ ಶಾಸಕರು ಹಾರೆ ಗುದ್ದಲಿ ಹಿಡಿದು ಕೇವಲ ಕಿತ್ತುಹೋದ ರಸ್ತೆಗಳಿಗೆ ಪ್ಯಾಚ್ ಹಾಕಲು ಚಾಲನೆ ನೀಡಿ ಅಭಿವದ್ಧಿ ಮಾಡಿದ್ದೇನೆ ಎಂದರೆ ಜನ ಒಪ್ಪುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.
ನನ್ನ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಜನರಿಗೆ ತಿಳಿಸದೆ ಹೋದ ಕಾರಣ ಕಳೆದ ಚುನಾವಣೆಯಲ್ಲಿ ಸೋಲಾಯಿತು. ಗೆದ್ದ ಶಾಸಕರ ನಡೆಯಿಂದ ಬೇಸತ್ತಿರುವ ತಾಲೂಕಿನ ಜನತೆ ಮುಂಬರುವ ದಿನಗಳಲ್ಲಿ ಅವರ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜೆಡಿಎಸ್ಗೆ ಪ್ರಭಾವಿ ಮುಖಂಡರ ಸಾಮೂಹಿಕ ರಾಜೀನಾಮೆ..? ದಳಪತಿಗಳಿಗೆ ಕಂಟಕ .
ಚಿಟ್ಟೆನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷ ಬಿ.ಎಸ್ ರಾಮಚಂದ್ರ ಮಾತನಾಡಿ, ಕಾರ್ಯಕರ್ತರ ನಡುವಿನ ಸಣ್ಣಪುಟ್ಟಗೊಂದಲಗಳಿಂದ ಕಳೆದ ಚುನಾವಣೆಯಲ್ಲಿ ಸೋಲಾಗಿದ್ದು ಈಚಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷ ತೊರೆದು ನೂರಾರು ಮಂದಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ಬದಲಾವಣೆಯ ದಿಕ್ಸೂಚಿಯಾಗಿದೆ ಎಂದರು.
ಇದೇ ವೇಳೆ ಮುಖಂಡರಾದ ಪುಟ್ಟರಾಜು, ರಾಮೇಗೌಡ, ಸಣ್ಣಸ್ವಾಮಿ, ಸೋಮೇಗೌಡ ಮಾತನಾಡಿದರು. ಭುವನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಣಸೂರು, ಜೋಗನಹಳ್ಳಿ, ಬೆಕ್ಕರೆ, ಕೂರಗಲ್ಲು, ಸಾಲುಗೊಪ್ಪಲು, ಈಚೂರು ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ಮಂದಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.