Asianet Suvarna News Asianet Suvarna News

ಕೊಪ್ಪಳ: ಕರಡಿ ದಾಳಿಗೆ ವ್ಯಕ್ತಿಗೆ ಗಾಯ,ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ

ಕರಡಿ ಬಂದಿರುವ ಸುಳಿವು ನೀಡಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕರಡಿ ಹೊಲಕ್ಕೆ ತೆರಳಿದ್ದ ರೈತನ ಮೇಲೆ ದಾಳಿ ಮಾಡಿದೆ.ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Person injured in bear attack outrage against forest officials at koppal district rav
Author
First Published Jun 4, 2023, 12:46 PM IST

ಕೊಪ್ಪಳ (ಜೂ.4) : ಕರಡಿ ಬಂದಿರುವ ಸುಳಿವು ನೀಡಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕರಡಿ ಹೊಲಕ್ಕೆ ತೆರಳಿದ್ದ ರೈತನ ಮೇಲೆ ದಾಳಿ ಮಾಡಿದೆ.ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ(Koppal) ತಾಲೂಕಿನ ಇರಕಲಗಡ ಹೋಬಳಿಯ ಗಂಗನಾಳ ಗ್ರಾಮ(Ganganal village)ದ ರೈತ ಮುಕ್ಕಲಪ್ಪ ನವಲಿ ಮೇಲೆ ಶನಿವಾರ ಕರಡಿ ದಾಳಿ ನಡೆಸಿದ್ದು ಗಾಯಗೊಂಡಿದ್ದಾನೆ.

ಗಂಗನಾಳ ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕಾರು ದಿನಗಳ ಹಿಂದೆಯೇ ಕರಡಿ ಕಾಣಿಸಿಕೊಂಡಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸದ ಹಿನ್ನೆಲೆ ಕರಡಿ ದಾಳಿ ಮಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಆಡಳಿತದಿಂದ ಜನ ಭ್ರಮಾನಿರಸ: ಶಾಸಕ ರಾಯರಡ್ಡಿ ಟೀಕೆ

ಕರಡಿ ದಾಳಿಗೆ ಗಾಯಗೊಂಡ ಮುಕ್ಕುಲಪ್ಪ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ ಮೇಲೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ ಅವರು ಏನು ಆಗಿಯೇ ಇಲ್ಲ ಎನ್ನುವಂತೆ ಹೊರಟಿದ್ದಾರೆ.ಇದರಿಂದ ಆಕ್ರೋಶಗೊಂಡ ಮುಕ್ಕುಲಪ್ಪ ಸಂಬಂಧಿಕರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಚಿಕಿತ್ಸೆಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಮೊದ ಮೊದಲು ಅಧಿಕಾರಿಗಳು ಹಾಗೆಲ್ಲ ಪರಿಹಾರ ನೀಡಲು ಅವಕಾಶ ಇಲ್ಲ. ಅರ್ಜಿ ಸಲ್ಲಿಸಿ,ನಂತರ ನೋಡುತ್ತೇವೆ ಎಂದಿದ್ದರಿಂದ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ತುರ್ತು ಪರಿಹಾರವಾಗಿ .3 ಸಾವಿರ ಮಾನವೀಯತೆ ಆಧಾರದಲ್ಲಿ ನೀಡಿದ್ದಾರೆ.

ಕರಡಿ ದಾಳಿ ಸುದ್ದಿಯನ್ನು ರೈತರು, ಮಾಜಿ ಎಂ.ಎಲ್ಸಿ ಕರಿಯಣ್ಣ ಸಂಗಟಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕರೆಗೆ ಸ್ಪಂದಿಸಿದ ಕರಿಯಣ್ಣ ಸಂಗಟಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದು,ಅವರ ಪುತ್ರ ಮಹಾಂತೇಶ್‌ ಸಂಗಟಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರೈತನ ಆರೋಗ್ಯ ವಿಚಾರಿಸಿದರು. ಕೆಆರ್‌ಪಿ ಯುವ ಮುಖಂಡ ಗೋವಿಂದರಾಜ ಬೂದಗುಂಪ ಇತರರು ಇದ್ದರು.

ಕೊಪ್ಪಳ: ವಿಮಾನ ಹಾರಿದ್ದು ಆಯಿತು, ಈಗ ಡ್ರೋನ್‌ಗಳ ಹಾರಾಟ!

ಕರಡಿ ದಾಳಿಯಂದ ರೈತರು ರೋಸಿ ಹೋಗಿದ್ದಾರೆ.ಇರಕಲ್‌ಗಡ ಭಾಗದಲ್ಲಿ ರೈತರು ಜೀವನ ಮಾಡುವುದೇ ದುಸ್ತರವಾಗಿದೆ. ಕರಡಿ ಬೆಳೆ ಹಾನಿ ಮಾಡಿದರು,ವ್ಯಕ್ತಿಗೆ ಗಾಯ ಮಾಡಿದರು ಪುಡಿಗಾಸು ಪರಿಹಾರ ನೀಡುತ್ತಾರೆ.ಆದರೆ,ಶಾಶ್ವತವಾಗಿ ಸಮಸ್ಯೆ ಬಗೆಹರಿಸುತ್ತಿಲ್ಲ.

ಮಹಾಂತೇಶ ಸಂಗಟಿ ಮುಖಂಡರು.

Follow Us:
Download App:
  • android
  • ios