ಕೊರೋನಾಗೆ ಕೊಪ್ಪಳದಲ್ಲಿ ಮೊದಲ ಬಲಿ| ಮೃತವ್ಯಕ್ತಿ ವಾಸಿಸುತ್ತಿದ್ದ ದಿವಟರ್‌ ಸರ್ಕಲ್‌ ಪ್ರದೇಶ ಸಂಪೂರ್ಣ ಸೀಲ್‌ಡೌನ್‌| ಈ ವಿಷಯ ತಿಳಿಯುತ್ತಿದ್ದಂತೆ ನಗರದಾದ್ಯಂತ ಅಂಗಡಿ, ಮುಂಗಟ್ಟು ಸ್ವಯಂಪ್ರೇರಿತವಾಗಿ ಬಂದ್‌|

ಕೊಪ್ಪಳ(ಜು.03): ಜಿಲ್ಲೆಯಲ್ಲಿ ಕೋವಿಡ್‌-19ಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ. ಕೊಪ್ಪಳ ನಗರದಲ್ಲಿ ಪ್ರಥಮ ಬಲಿಯಾಗಿದ್ದು ಜನರು ಭಯಭೀತರಾಗಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ದಿವಟರ್‌ ಸರ್ಕಲ್‌ ಪ್ರದೇಶದ ನಿವಾಸಿ ಪಿ-16,430 (49) ಸೋಂಕಿತ ಮಹಿಳೆಗೆ (ಎಸ್‌ಎಆರ್‌ಐ) ಜೂ. 30ರಂದು ಕೋವಿಡ್‌-19 ದೃಢಪಟ್ಟಿತ್ತು. ಎರಡು ದಿನಗಳಿಂದ ಜಿಲ್ಲಾ ಕೇಂದ್ರದ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಶ ಕಿಶೋರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ಕೋವಿಡ್‌ನಿಂದ ಮಹಿಳೆಯೊರ್ವಳು ಮೃತಪಟ್ಟ ಬಳಿಕ ಇದು ಮತ್ತೊಂದು ಬಲಿಯಾಗಿದೆ. ಕೊಪ್ಪಳದಲ್ಲಿಯೇ ಸಾವು ಸಂಭವಿಸಿದ್ದರಿಂದ ಇಡೀ ನಗರವೇ ಆತಂಕಕ್ಕೆ ಒಳಗಾಗಿದೆ. ಮೃತವ್ಯಕ್ತಿ ವಾಸಿಸುತ್ತಿದ್ದ ದಿವಟರ್‌ ಸರ್ಕಲ್‌ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ನಗರದಾದ್ಯಂತ ಅಂಗಡಿ, ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದ್ದಾರೆ.

ಕೊಪ್ಪಳದಲ್ಲಿ ರಸ್ತೆ ಪಕ್ಕದಲ್ಲೇ ಸೋಂಕಿತೆಯ ಶವ ಸಂಸ್ಕಾರ..!

ತೀವ್ರ ವಿರೋಧ:

ಕೋವಿಡ್‌ನಿಂದ ವೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಕಿನ್ನಾಳ ರಸ್ತೆಯಲ್ಲಿನ ಖಬರಸ್ಥಾನದಲ್ಲಿ ಶವ ಸಂಸ್ಕಾರ ಮಾಡುತ್ತಾರೆ ಎಂದು ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶದ ಜನರು ಆಗಮಿಸಿ ಇಲ್ಲಿ ಅಂತ್ಯಕ್ರಿಯೆ ಮಾಡಬೇಡಿ. ಊರ ಹೊರಗೆ ಮಾಡಿ ಎಂದು ಒತ್ತಾಯಿಸಿದರು. ಆದರೆ, ಈ ವೇಳೆ ಮಳೆ ಬಂದಿದ್ದರಿಂದ ಸ್ಥಳೀಯರು ಮನೆಗೆ ತೆರಳಿದರು. ಬಳಿಕ ಮಾರ್ಗಸೂಚಿ ಅನ್ವಯ ಅಂತ್ಯಕ್ರಿಯೆ ಮಾಡಲಾಯಿತು.

ಕೋವಿಡ್‌ ಪಾಸಿಟಿವ್‌ನಿಂದ ವ್ಯಕ್ತಿ ಮೃತಪಟ್ಟಿದ್ದರೂ ಆತನಿಗೆ ವಿವಿಧ ಕಾಯಿಲೆಗಳು ಇದ್ದವು ಎನ್ನುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಹೃದಯ ಕಾಯಿಲೆ, ಲಿವರ್‌ ಫೇಲ್‌ ಸೇರಿದಂತೆ ಮೊದಲಾದ ಸಮಸ್ಯೆಯಿಂದ ಬಳಲುತ್ತಿದ್ದ. ಉಸಿರಾಟದ ಸಮಸ್ಯೆ ವಿಪರೀತವಾಗಿತ್ತು. ಈ ವೇಳೆಯಲ್ಲಿ ಕೋವಿಡ್‌ ಟೆಸ್ಟ್‌ ಮಾಡಿದಾಗ ಆತನಿಗೆ ಪಾಸಿಟಿವ್‌ ಬಂದಿದೆ.