ಅಥಣಿ: ಕೊರೋನಾ ಭಯದಿಂದ ಬಾರದ ಜನ, ತಳ್ಳು ಗಾಡಿಯಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ!
ಅನಾರೋಗ್ಯದಿಂದ ವ್ಯಕ್ತಿಯ ಸಾವು| ತಳ್ಳುಗಾಡಿಯಲ್ಲಿ ಸ್ಮಶಾನದವರೆಗೆ ಶವ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ ಮೃತನ ಪತ್ನಿ| ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ನಡೆದ ಘಟನೆ|
ಅಥಣಿ(ಜು.18): ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಯಾರೂ ಬಾರದ ಹಿನ್ನೆಲೆಯಲ್ಲಿ ಆಕೆಯ ಪತ್ನಿಯೇ ತಳ್ಳುಗಾಡಿಯಲ್ಲಿ ಸ್ಮಶಾನದವರೆಗೆ ಶವ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.
ಅಥಣಿ ಸರ್ಕಾರಿ ಆಸ್ಪತ್ರೆ ಎದುರು ಪಾದರಕ್ಷೆ ರಿಪೇರಿ ಕೆಲಸ ಮಾಡುತ್ತಿದ್ದ ಸದಾಶಿವ ಹಿರಟ್ಟಿ(55) ಮೃತಪಟ್ಟ ವ್ಯಕ್ತಿ.
ಕೊರೋನಾ ಕಾಟ: ಭೂಲೋಕದ ನರಕ ಆಗಿದ್ಯಾ ಬೆಳಗಾವಿಯ ಬಿಮ್ಸ್ ಆಸ್ಪತ್ರೆ?
ಗುರುವಾರ ಮಧ್ಯರಾತ್ರಿ ತೀರಾ ಅಸ್ವತ್ಥಗೊಂಡಿದ್ದ ಅವರು ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದರು. ಆದರೆ ವ್ಯಕ್ತಿ ಮೃತಪಟ್ಟು ತುಂಬಾ ಹೊತ್ತಾದರೂ ಯಾರೂ ಅಂತ್ಯಕ್ರಿಯೆಗೆ ಸಹಾಯ ಮಾಡಲಿಲ್ಲ. ಇದರಿಂದ ತೀವ್ರ ನೊಂದ ಆತನ ಪತ್ನಿ, ತಾನೊಬ್ಬಳೇ ತಳ್ಳು ಗಾಡಿಯಲ್ಲಿ ಒಂದೂವರೆ ಕಿ.ಮೀ.ವರೆಗೆ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.