* ಚಿರತೆ ಹಿಡಿಯಲು ಬೀಡು ಬಿಟ್ಟ ಅರಣ್ಯಾಧಿಕಾರಿಗಳು* ಚಿರತೆಯ ಹೆಜ್ಜೆ ಗುರುತು ಪತ್ತೆ* ಚಿರತೆಯದ್ದೋ ಅಲ್ಲವೋ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ 

ಬೆಳಗಾವಿ(ಜು.02): ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಗುರುವಾರ ಬೆಳಗ್ಗೆ ಬೆಳಗಾವಿ ನಗರದ ಸಿಪಿಎಡ್‌ ಮೈದಾನದ ಎದುರಿನ ಗಾಲ್ಫ್‌ ಕೋರ್ಸ್‌ ಬಳಿ ಪ್ರತ್ಯಕ್ಷವಾಗಿದ್ದು, ವಾಯು ವಿಹಾರಿಗಳು ಇದನ್ನು ಕಂಡು ಬೆಚ್ಚಿಬಿದ್ದ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗಾಲ್ಫ್‌ ಕೋರ್ಸ್‌ ಅನ್ನು ಎರಡು ತಿಂಗಳು ಕಾಲ ಬಂದ್‌ಮಾಡಲಾಗಿತ್ತು. ಗುರುವಾರದಿಂದ ವಾಯುವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೆರೆಯಲಾಗಿತ್ತು. ಹನುಮಾನ ನಗರದ ವಾಯು ವಿಹಾರಿಯೊಬ್ಬರಿಗೆ ಚಿರತೆ ಪ್ರತ್ಯಕ್ಷವಾಗಿದೆ. ಕೂಡಲೇ ಭಯಗೊಂಡ ಅಲ್ಲಿಂದ ಪರಾರಿಯಾದ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅಲ್ಲದೆ ಚಿರತೆ ಎಲ್ಲಿಂದ ಬಂತು ಯಾವ ಕಡೆ ಹೋಯಿತು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದ್ದು, ಸ್ಥಳದಲ್ಲಿಯೇ ಅರಣ್ಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಚಿರತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಅರಣ್ಯಾಧಿಕಾರಿಗಳು, ಭೂತರಾಮನಹಟ್ಟಿಯಲ್ಲಿನ ಝೂ ವೈದ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಚಿರತೆ ಕಂಡು ಬಂದಿಲ್ಲ. ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಅದು ಚಿರತೆಯದ್ದೋ ಅಲ್ಲವೋ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ.

ಕೂಡ್ಲಿಗಿ: ಚಿರತೆ ದಾಳಿ, ಎದ್ನೋ ಬಿದ್ನೋ ಅಂತ ತಪ್ಪಿಸಿಕೊಂಡು ಬಂದ ಬೈಕ್‌ ಸವಾರ..!

ಅರಣ್ಯದಲ್ಲಿರುವ ಚಿರತೆ ಅರಣ್ಯದಲ್ಲಿ ಇರುತ್ತಿತ್ತು. ಈಗ ಚಿರತೆ ಸಂಖ್ಯೆ ಹೆಚ್ಚಾಗಿವೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಅರಣ್ಯ ಪ್ರದೇಶ ಬಿಟ್ಟು ಹೊರ ಬರುತ್ತಿವೆ. ನಗರ ಪ್ರದೇಶಗಳಲ್ಲಿಯೂ ಬರಲು ಆರಂಭಿಸಿವೆ. ಕಾರಣ ಮನೆಯಲ್ಲಿರುವ ಊಟ, ರಸ್ತೆಯ ಗುಂಡಿಗಳಿಗೆ ಹಾಕುತ್ತಿರುವುದರಿಂದ ಅಲ್ಲಿ ನಾಯಿಗಳು ಬರುತ್ತವೆ. ಚಿರತೆಯ ಆಹಾರ ನಾಯಿ. ಹೀಗಾಗಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಚಿರತೆ ಬರುತ್ತಿವೆ. ಅರಣ್ಯ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಬಲೆ, ಆಹಾರ ಸಂಗ್ರಹಿಸಿ ನಾಡಿಗೆ ಬರುವ ಚಿರತೆಯನ್ನು ಸಂರಕ್ಷಣೆ ಮಾಡಿ ಮತ್ತೆ ಕಾಡಿಗೆ ಬಿಡುವ ಕಾರ್ಯ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಕಂಡು ಹಿಡಿಲು ಸುಮಾರು 25 ಅರಣ್ಯಾಧಿಕಾರಿಯ ತಂಡ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಚಿರತೆ ಸೆರೆ ಸಿಕ್ಕರೆ ಅದನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ತಿಳಿಸಿದ್ದಾರೆ.