ಮಂಗಳೂರು: ಸೆಂಥಿಲ್ ಭೇಟಿಗೆ ಅಧಿಕಾರಿ, ಸಿಬ್ಬಂದಿ ದಂಡು..!
ರಾಜೀನಾಮೆ ನೀಡಿದ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಡಿಸಿ ಬಂಗಲೆಗೆ ಬಂದಿದ್ದಾರೆ. ಒಂದು ದಿನದ ಮಟ್ಟಿಗೆ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಅವರು ಭಾನುವಾರ ಪೂರ್ತಿ ಡಿಸಿ ಬಂಗಲೆಯಲ್ಲಿ ಇದ್ದರು. ಹಾಗಾಗಿ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ದಂಡೇ ಡಿಸಿ ಬಂಗಲೆಗೆ ಧಾವಿಸಿತ್ತು.
ಮಂಗಳೂರು(ಸೆ.09): ರಾಜೀನಾಮೆ ನೀಡಿದ ಬಳಿಕ ಯಾರಿಗೂ ಸಿಗದೆ ತೆರಳಿದ್ದ ಸಸಿಕಾಂತ್ ಸೆಂಥಿಲ್ ಅವರು ಭಾನುವಾರ ಪೂರ್ತಿ ಡಿಸಿ ಬಂಗಲೆಯಲ್ಲಿ ಇದ್ದರು. ಹಾಗಾಗಿ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ದಂಡೇ ಡಿಸಿ ಬಂಗಲೆಗೆ ಧಾವಿಸಿತ್ತು.
ನೆಚ್ಚಿನ ಡಿಸಿ ಜೊತೆ ಸೆಲ್ಫೀ:
ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ಸೆಂಥಿಲ್ ಜೊತೆಗೆ ಮಾತನಾಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿ, ರಾಜಿನಾಮೆ ವಾಪಸ್ಗೆ ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಸೆಂಥಿಲ್ ಒಪ್ಪಲಿಲ್ಲ. ಇನ್ನೂ ಕೆಲವರು ಸೆಂಥಿಲ್ ಜೊತೆಗೆ ಮಾತನಾಡಿ, ಶುಭ ಹಾರೈಸಿ ಸೆಲ್ಫಿ ತೆಗೆಸಿಕೊಂಡರು. ಸಂಜೆ ವೇಳೆ ಹೊರಗೆ ಅಡ್ಡಾಡಿದ ಸೆಂಥಿಲ್ ಅವರು ರಾತ್ರಿ ಕೂಡ ಸಹೋದ್ಯೋಗಿ ಅಧಿಕಾರಿ, ಮಿತ್ರರನ್ನು ಭೇಟಿ ಮಾಡಿದರು.
ಪಾಕಿಸ್ತಾನಕ್ಕೆ ಹೋಗಿ ಹೋರಾಟ ಮಾಡಿ, ಸೆಂಥಿಲ್ಗೆ ಹೆಗಡೆ ಟಾಂಗ್!
ಸೆಂಥಿಲ್ ಅವರು ಸೋಮವಾರ ಸರಂಜಾಮು ಜೊತೆ ಚೆನ್ನೈಗೆ ತೆರಳುವ ಸಂಭವ ಇದೆ. ಒಂದು ವಾರದ ಬಳಿಕ ಮತ್ತೆ ಕರ್ನಾಟಕಕ್ಕೆ ಆಗಮಿಸಿ ತನ್ನ ಮುಂದಿನ ಹೋರಾಟದ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಮಂಗಳೂರಿನ ಜೊತೆಗೆ ಸದಾ ನಂಟು ಇರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಡಿಸಿ ಕಚೇರಿಗೆ ಹಠಾತ್ ಭೇಟಿ:
ಸೆ.3ರಿಂದ ರಜೆಯಲ್ಲಿ ತೆರಳಿದ್ದ ಸೆಂಥಿಲ್ ಅವರು ಸೆ.2ರಂದು ಕೊನೆದಿನ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಶುಕ್ರವಾರ ಡಿಸಿ ಬಂಗಲೆಗೆ ಬಂದು ಅಲ್ಲಿಂದಲೇ ರಾಜಿನಾಮೆ ಬಗ್ಗೆ ಬಹಿರಂಗಪಡಿಸಿದ್ದರು. ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.
ನನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸುವುದಿಲ್ಲ: ಸೆಂಥಿಲ್
ಶನಿವಾರ ಸಂಜೆ ಒಂದು ಗಂಟೆ ಕಾಲ ಡಿಸಿ ಕಚೇರಿಗೆ ತೆರಳಿ ನೂತನ ಜಿಲ್ಲಾಧಿಕಾರಿ ಜೊತೆಗೆ ಒಂದಷ್ಟುಮಾತುಕತೆ ನಡೆಸಿದರು. ನಂತರ ಕೋರ್ಟ್ ಹಾಲ್ನಲ್ಲಿ ಡಿಸಿ ಕಚೇರಿಯ ಸಿಬ್ಬಂದಿ ಜೊತೆಗೆ ಆತ್ಮೀಯವಾಗಿ ಬೆರೆತು ಮಾತನಾಡಿದರು. ತನ್ನ ಅವಧಿಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.