ನನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸುವುದಿಲ್ಲ: ಸೆಂಥಿಲ್
ತನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸುವುದಿಲ್ಲ ಎಂದು ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು, ಇದ್ಯಾವುದರ ಬಗ್ಗೆಯೂ ಉತ್ತರಿಸುವುದಿಲ್ಲ ಎಂದಿದ್ದಾರೆ.
ಮಂಗಳೂರು(ಸೆ.09): ‘ನನ್ನ ಹೋರಾಟದ ಮುಂದಿನ ಹಾದಿಯನ್ನು ಯೋಚಿಸಿ ನಿರ್ಧರಿಸುತ್ತೇನೆ. ಇನ್ನು ಒಂದು ವಾರ ಕಾಲ ಈ ಬಗ್ಗೆ ಸಾಕಷ್ಟುಯೋಜನೆ ಮಾಡಿ ಹೆಜ್ಜೆ ಇಡಲು ನಿರ್ಧರಿಸಿದ್ದೇನೆ ಎಂದು ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ನಾನು ನಂಬಿದ ತತ್ವ ಸಿದ್ಧಾಂತಗಳಿಗೆ ಧಕ್ಕೆಯಾಗುವುದನ್ನು ಎಂದಿಗೂ ಸಹಿಸುವುದಿಲ್ಲ. ಅದನ್ನು ನನ್ನ ಮನಸ್ಸು ಒಪ್ಪುವುದೂ ಇಲ್ಲ. ಮನಸ್ಸಿಗೆ ವಿರುದ್ಧವಾಗಿ ನಾನು ಕರ್ತವ್ಯ ನಿರ್ವಹಿಸಲು ಸಿದ್ಧನಿಲ್ಲ. ಅದಕ್ಕಾಗಿಯೇ ನಾನು ರಾಜಿನಾಮೆ ನೀಡಿ ಹೊರಬಂದಿದ್ದೇನೆ ಎಂದು ತನ್ನ ರಾಜಿನಾಮೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ದೇಶ ಈಗಿರುವ ಪರಿಸ್ಥಿತಿಯಲ್ಲಿ ಕೆಲಸ ಮಾಡೋಕೆ ಮನಸು ಒಪ್ಪುತ್ತಿಲ್ಲ:
ರಾಜಿನಾಮೆ ನೀಡದಂತೆ ನನಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತನಾಡಿದ್ದಾರೆ. ಆದರೆ ನನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದೇನೆ. ಅವರೆಲ್ಲ ನನ್ನ ಮೇಲಿನ ಪ್ರೀತಿಯಿಂದ ರಾಜಿನಾಮೆ ವಾಪಸ್ಗೆ ಆಗ್ರಹಿಸಿದ್ದಾರೆ. ಆದರೆ ದೇಶದ ಇಂತಹ ಪರಿಸ್ಥಿತಿಯಲ್ಲಿ ನನಗೆ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದ್ದೇನೆ ಎಂದರು.
ಆರೋಪಕ್ಕೆ ಉತ್ತರಿಸುವುದಿಲ್ಲ:
ನನ್ನ ವಿರುದ್ಧ ಯಾರೇ ಆರೋಪ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನೇರ ಹಾಗೂ ಪ್ರಮಾಣಿಕನಾಗಿದ್ದೇನೆ. ಹಾಗಾಗಿ ನನ್ನ ಮೇಲೆ ಆರೋಪ ಬಂದರೂ ನಾನು ಅದಕ್ಕೆ ಉತ್ತರ ನೀಡಲು ಹೋಗುವುದಿಲ್ಲ. ನಾನು ಆರೋಪಗಳಿಗೆ ಚಿಂತನೆ ನಡೆಸದೆ, ನನ್ನ ಕೆಲಸವನ್ನು ಮುಂದುವರಿಸುವ ಜಾಯಮಾನ ನನ್ನದು. ಮುಂದೆಯೂ ಇದನ್ನೇ ಮಾಡುತ್ತೇನೆ. ನನಗೆ ನನ್ನ ಹಿತೈಷಿಗಳು, ಜನತೆಯ ಬೆಂಬಲ ಇದೆ. ನನ್ನ ಮುಂದಿನ ಹೋರಾಟಕ್ಕೂ ಎಲ್ಲರು ಕೈಜೋಡಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು ಸೆಂಥಿಲ್.
ಪಾಕಿಸ್ತಾನಕ್ಕೆ ಹೋಗಿ ಹೋರಾಟ ಮಾಡಿ, ಸೆಂಥಿಲ್ಗೆ ಹೆಗಡೆ ಟಾಂಗ್!
ಮರಳುಗಾರಿಕೆ ವಿರುದ್ಧ ಕಠಿಣ ಕ್ರಮ: ಸಹಿಸದರವರಿಂದ ಆರೋಪ:
ನಾನು ಜಿಲ್ಲಾಧಿಕಾರಿಯಾಗಿ ಅಕ್ರಮ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇನೆ. ಇದನ್ನೇ ಸಹಿಸದವರು ನನ್ನ ಮೇಲೆ ಆರೋಪ ಮಾಡುತ್ತಿರುತ್ತಾರೆ. ಇದರಿಂದ ನನಗೇನು ಚಿಂತೆ ಇಲ್ಲ. ಇದಲ್ಲದೆ ನಾನು ಅಕ್ರಮ ಆಸ್ತಿ ಸಂಪಾದನೆ, ಸಂಪತ್ತು ಹೊಂದಿದ್ದೇನೆ ಎಂದು ಆರೋಪಿಸಬಹುದು. ಇದಕ್ಕೆಲ್ಲ ನಾನು ಉತ್ತರಿಸಲು ಹೋಗುವುದಿಲ್ಲ. ನಾನು ಹೇಗಿದ್ದೇನೆ ಎನ್ನುವುದು ಜನತೆಗೆ ತಿಳಿದಿದೆ ಎಂದರು.
ಭಾರೀ ಅವ್ಯವಹಾರದಲ್ಲಿ ರಾಜೀನಾಮೆ ಕೊಟ್ಟ ಸೆಂಥಿಲ್?