ನೀರು ಪೂರೈಕೆ ಜವಾಬ್ದಾರಿ ಹೊತ್ತ ಗುತ್ತಿಗೆದಾರನ ನಿರ್ಲಕ್ಷ್ಯ| ಸಿಬ್ಬಂದಿ, ರೋಗಿಗಳ ಪರದಾಟ| ಆರೋಪ ತಳ್ಳಿ ಹಾಕಿದ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ|

ಹುಬ್ಬಳ್ಳಿ(ಜ.25): ಉತ್ತರ ಕರ್ನಾಟಕದ ಬಡವರ ಆರೋಗ್ಯಧಾಮ ಇಲ್ಲಿನ ಕಿಮ್ಸ್‌ನಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದೇ ಹಾಹಾಕಾರ ಶುರುವಾಗಿದೆ. ರೋಗಿಗಳು, ಸಂಬಂಧಿಕರು, ಸಿಬ್ಬಂದಿ ಕುಡಿಯುವ ನೀರಿಗೆ ಪರದಾಡಿದ್ದಾರೆ. 

Add Asianetnews Kannada as a Preferred SourcegooglePreferred

ಕಿಮ್ಸ್‌ನಲ್ಲಿ ಓವರ್‌ಹೆಡ್ ಟ್ಯಾಂಕ್ ಇದೆ. ಅದಕ್ಕೆ ಮಲಪ್ರಭಾ ನದಿ ನೀರನ್ನು ಏರಿಸಿ ಅಲ್ಲಿಂದಲೇ ಎಲ್ಲ ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತದೆ. ಇನ್ನು ಶುದ್ಧ ಕುಡಿಯುವ ನೀರಿನ ಘಟಕಗಳೂ ಇಲ್ಲಿವೆ. ಆದರೆ ನೀರು ಪೂರೈಕೆಯನ್ನೂ ಗುತ್ತಿಗೆ ವಹಿಸಲಾಗಿದೆ. ಇದರ ನಿರ್ವಹಣೆ ಮಾಡುವ ಸಿಬ್ಬಂದಿ ಮೂರು ದಿನ ಬಂದಿಯೇ ಇಲ್ಲವಂತೆ. ಈ ಕಾರಣದಿಂದ ಕುಡಿಯುವ ನೀರಿನ ಸಮಸ್ಯೆಯುಂಟಾಗಿದೆ. ಇನ್ನು ಗುತ್ತಿಗೆ ಪಡೆದಿರುವ ಏಜೆನ್ಸಿ ಕೂಡ ಸರಿಯಾಗಿ ಸ್ಪಂದಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇದೆಲ್ಲ ಕಿಮ್ಸ್‌ನ ಹಳೆಯ ಕಟ್ಟಡದಲ್ಲಿರುವ ವಾರ್ಡ್‌ಗಳಲ್ಲಿ ಕಂಡು ಬಂದಿರುವ ಸಮಸ್ಯೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಾರ್ಡ್‌ಗಳ ಬಾತ್ ರೂಂಗಳಲ್ಲಿ ನೀರು ಬಾರದೇ ರೋಗಿಗಳು, ಅವರ ಸಂಬಂಧಿಕರು ಪರದಾಡಿದ್ದಾರೆ. ಕೆಲ ರೋಗಿಗಳು ಹೊರಗಿನಿಂದ ನೀರು ತಂದು ತಮ್ಮ ಅಗತ್ಯತೆ ಪೂರೈಸಿಕೊಂಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ಕುರಿತಂತೆ ರೋಗಿಯ ಸಂಬಂಧಿ ರಮೇಶ ಎಂಬುವವರು, ಹೌದು ಕಳೆದ ಎರಡ್ಮೂರು ದಿನಗಳಿಂದ ಇಲ್ಲಿ ನೀರಿನ ಸರಬರಾಜು ಆಗಿಲ್ಲ. ನಾವು ನೀರನ್ನು ಖರೀದಿಸಿ ತಂದು ಬಳಸಿದ್ದೇವೆ ಎಂದರು. ಆದರೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ನೀರಿನ ಸಮಸ್ಯೆ ಆಗಿಲ್ಲ. ನೀರು ಸರಿಯಾಗಿ ಪೂರೈಕೆಯಾಗಿದೆ ಎಂದಿದ್ದಾರೆ. ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ರೋಗಿಗಳ ಹಾಗೂ ಅಲ್ಲಿನ ಸಿಬ್ಬಂದಿಗಳ ಆರೋಪ ತಾರಕಕ್ಕೇರಿದೆ. ನೀರು ಸರಬರಾಜು ಮಾಡುವ ಏಜೆನ್ಸಿ ಇನ್ನಾದರೂ ಸರಿಯಾಗಿ ನೀರು ಪೂರೈಕೆ ಮಾಡುವ ಮೂಲಕ ರೋಗಿಗಳ, ಸಿಬ್ಬಂಗಳ ಹಿತ ಕಾಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. 

ನೀರು ಸರಬರಾಜು ಕಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ 4 ರಿಂದ ಮತ್ತೆ ನೀರು ಸರಬರಾಜು ಯಥಾಪ್ರಕಾರ ಶುರುವಾಗಿದೆ. ಎಲ್ಲ ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ.