ಪಾಸ್‌ಪೋರ್ಟ್ ಪರಿಶೀಲನೆಗೆ ಹಣ ಪಡೆದ ಬಗ್ಗೆ ನಾಗರಿಕರು ಸಲ್ಲಿಸಿದ ದೂರು ಆಧರಿಸಿ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರನ್ನು ಆಗ್ನೇಯ ವಿಭಾಗದ ಡಿಸಿಪಿ ಡಾ ಸಿ.ಕೆ.ಬಾಬಾ ಅಮಾನತುಗೊಳಿಸಿದ್ದಾರೆ.

ಬೆಂಗಳೂರು (ಜು.23): ಪಾಸ್‌ಪೋರ್ಟ್ ಪರಿಶೀಲನೆಗೆ ಹಣ ಪಡೆದ ಬಗ್ಗೆ ನಾಗರಿಕರು ಸಲ್ಲಿಸಿದ ದೂರು ಆಧರಿಸಿ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರನ್ನು ಆಗ್ನೇಯ ವಿಭಾಗದ ಡಿಸಿಪಿ ಡಾ ಸಿ.ಕೆ.ಬಾಬಾ ಅಮಾನತುಗೊಳಿಸಿದ್ದಾರೆ. ಪರಪ್ಪನ ಅಗ್ರಹಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಶಿವಕುಮಾರ್‌ ಅಮಾನತುಗೊಂಡಿದ್ದು, ಎರಡು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರಿಂದ ಪಾಸ್‌ಪೋರ್ಟ್ ಪರಿಶೀಲನೆಗೆ 500 ರೂ ಶಿವಕುಮಾರ್‌ ಪಡೆದಿದ್ದರು. ಈ ಬಗ್ಗೆ ಪೊಲೀಸರ ಕಾರ್ಯನಿರ್ವಹಣೆ ಕುರಿತು ಕ್ಯೂಆರ್‌ ಕೋಡ್‌ ಮೂಲಕ ಅಭಿಪ್ರಾಯ ಸಂಗ್ರಹಿಸಲು ರೂಪಿಸಿರುವ ‘ಲೋಕಸ್ಪಂದನ’ದಲ್ಲಿ ಕ್ಯೂರ್‌ ಕೋಡ್‌ ಬಳಸಿ ನಾಗರಿಕರು ದೂರು ಸಲ್ಲಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಬಾಬಾ ಅವರು, ಹಣ ಪಡೆದ ಹೆಡ್‌ ಕಾನ್‌ಸ್ಟೇಬಲ್‌ ಅವರನ್ನು ಶುಕ್ರವಾರ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Add Asianetnews Kannada as a Preferred SourcegooglePreferred

ಹುನ್ನೂರು ವರ್ತಕನ ಹತ್ಯೆಗೆ ಸಂಚು, ಐವರು ಸುಪಾರಿ ಹಂತಕರ ಬಂಧ‌ನ

ನಗರ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲಿ ಪೊಲೀಸರ ಕಾರ್ಯನಿರ್ವಹಣೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ‘ಲೋಕಸ್ಪಂದನ’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಠಾಣೆಗಳ ಪ್ರವೇಶ ದ್ವಾರದ ಗೋಡೆಯಲ್ಲಿ ಕ್ಯೂರ್‌ ಕೋಡ್‌ ಬಳಸಿ ಸಾರ್ವಜನಿಕರು ಅಭಿಪ್ರಾಯ ದಾಖಲಿಸಬಹುದು. ಈ ವಿನೂತನ ವ್ಯವಸ್ಥೆಯನ್ನು ಮೊದಲು ತಮ್ಮ ವಿಭಾಗದಲ್ಲೇ ಡಿಸಿಪಿ ಸಿ.ಕೆ.ಬಾಬಾ ಅನುಷ್ಠಾನಕ್ಕೆ ತಂದಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಳಿಕ ನಗರ ವ್ಯಾಪ್ತಿಗೆ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ವಿಸ್ತರಿಸಿದ್ದರು.

ಇನ್ನು ಪೊಲೀಸರ ಕಾರ್ಯನಿರ್ವಹಣೆಯನ್ನು ಸಾರ್ವಜನಿಕರು ನೀಡುವ ‘ಸ್ಟಾರ್‌’ ಆಧರಿಸಿ ಉತ್ತಮ ಹಾಗೂ ಕಳಪೆ ಎಂದು ಗುರುತಿಸಲಾಗುತ್ತದೆ. ಅಂತೆಯೇ 5 ಸ್ಟಾರ್‌ ಬಂದರೆ ಅತ್ಯುತ್ತಮ, 1 ಸ್ಟಾರ್‌ ಬಂದರೆ ಕಳಪೆ ಎಂದು ಹೇಳಲಾಗುತ್ತದೆ. ಹಾಗಾಗಿ ಪಾಸ್‌ಪೋರ್ಟ್ ಪರಿಶೀಲನೆ ವಿಚಾರವಾಗಿ .500 ಪಡೆದಿದ್ದ ಶಿವಕುಮಾರ್‌ ಕಾರ್ಯನಿರ್ವಹಣೆ ಬಗ್ಗೆ ಲೋಕಸ್ಪಂದನದಲ್ಲಿ ಪರಪ್ಪನ ಅಗ್ರಹಾರದ ನಿವಾಸಿ 1 ಸ್ಟಾರ್‌ ನೀಡಿದ್ದರು. ಈ ಅಭಿಪ್ರಾಯವು ಹೆಡ್‌ ಕಾನ್‌ಸ್ಟೇಬಲ್‌ ತಲೆದಂಡಕ್ಕೆ ಕಾರಣವಾಗಿದೆ.

ಮಣಿಪಾಲದಲ್ಲಿ ವೈಶ್ಯಾವಾಟಿಕೆ ಆರೋಪಿಗಳ ಬಂಧನ ಮಹಿಳೆಯರ ರಕ್ಷಣೆ

‘ಲೋಕಸ್ಪಂದನ’ಕ್ಕೆ ರಮೇಶ್‌ ಮೆಚ್ಚುಗೆ: ಪೊಲೀಸ್‌ ಠಾಣೆಗಳ ಭೇಟಿ ನೀಡಿದಾಗ ಅನುಭವವ ಕುರಿತು ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸುವ ‘ಲೋಕಸ್ಪಂದನ’ ವ್ಯವಸ್ಥೆ ಬಗ್ಗೆ ಶನಿವಾರ ಟ್ವಿಟ್ಟರ್ನಲ್ಲಿ ಹಿರಿಯ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನನ್ನ ಮುಂದಿನ ಚಲನಚಿತ್ರವೊಂದರ ಪಾತ್ರದ ವಿಚಾರವಾಗಿ ಮಾಹಿತಿ ಪಡೆಯಲು ಕೋರಮಂಗಲ ಠಾಣೆಗೆ ಭೇಟಿ ನೀಡಿದ್ದೆ. ಆ ಠಾಣೆಯಲ್ಲಿ ಲೋಕಸ್ಪಂದನ ವ್ಯವಸ್ಥೆ ತಿಳಿದಾಗ ಖುಷಿಯಾಯಿತು. ಠಾಣೆಗೆ ಬರುವ ಸಾರ್ವಜನಿಕರಿಂದ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆ ಉತ್ತಮವಾಗಿದೆ ಎಂದು ರಮೇಶ್‌ ಶ್ಲಾಘಿಸಿದ್ದಾರೆ.

‘ಲೋಕ ಸ್ಪಂದನ. ನೀವು ಪೊಲೀಸ್‌ ಠಾಣೆಗೆ ಬರಲು ಭಯ ಪಡುತ್ತೀರಾ? ನಿಮ್ಮ ಬೇಟಿಯ ಉದ್ದೇಶ ಇತ್ಯರ್ಥ ಆಗಲು ಪೊಲೀಸಿನವರು ಬೇರೆ ಏನಾದರೂ ಅಪೇಕ್ಷಿಸಿದ್ದಾರಾ? ಹಿರಿಯ ಪೊಲೀಸ್‌ ಅಧಿಕಾರಿಗಳು ನಿಮ್ಮ ಅಭಿಪ್ರಾಯಕ್ಕೆ, ಉತ್ತರಕ್ಕೆ ಕಾಯುತ್ತಿದ್ದಾರೆ. ಸ್ಕ್ಯಾ‌ನ್‌ ಮಾಡಿ.. ಸ್ಪಂದಿಸಿ’ ಎಂದು ರಮೇಶ್‌ ಟ್ವೀಟ್‌ ಮಾಡಿದ್ದಾರೆ.