Asianet Suvarna News Asianet Suvarna News

ಕೆ. ಆರ್. ಪೇಟೆ ಉಪಚುನಾವಣೆ ಬಂದೋಬಸ್ತಿಗೆ ಪ್ಯಾರಾ ಮಿಲಿಟರಿ

ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರವು ಅತಿ ಸೂಕ್ಷ್ಮ ಕ್ಷೇತ್ರ ಎಂದು ಗುರುತಿಸಿರುವ ಕಾರಣಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರದ ಪ್ಯಾರಾ ಮಿಲಿಟರಿ ಪೋರ್ಸ್‌ ತರಿಸಿಕೊಳ್ಳಲು ಮನವಿ ಮಾಡಲಾಗಿದೆ ಎಂದು ಡಿಸಿ ಡಾ ವೆಂಕಟೇಶ್‌ ಮಂಗಳವಾರ ತಿಳಿಸಿದ್ದಾರೆ. 

Paramilitary security in kr pet during byelection
Author
Bangalore, First Published Nov 20, 2019, 1:48 PM IST

ಮಂಡ್ಯ(ನ.20): ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರವು ಅತಿ ಸೂಕ್ಷ್ಮ ಕ್ಷೇತ್ರ ಎಂದು ಗುರುತಿಸಿರುವ ಕಾರಣಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರದ ಪ್ಯಾರಾ ಮಿಲಿಟರಿ ಪೋರ್ಸ್‌ ತರಿಸಿಕೊಳ್ಳಲು ಮನವಿ ಮಾಡಲಾಗಿದೆ ಎಂದು ಡಿಸಿ ಡಾ ವೆಂಕಟೇಶ್‌ ಮಂಗಳವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಜಿಲ್ಲೆಗೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜಿಸುವಂತೆ ದಕ್ಷಿಣ ವಲಯ ಐಪಿಪಿ ಅವರಿಗೂ ಮನವಿ ಮಾಡಲಾಗುತ್ತಿದೆ. ಚುನಾವಣೆ ನಡೆಯದ ಬೇರೆ ಜಿಲ್ಲೆಗಳಿಂದಲೂ ಪೊಲೀಸರನ್ನು ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಕರೆಸಿಕೊಳ್ಳುವ ಬಗ್ಗೆಯೂ ಚಿಂತನೆ ಮಾಡಲಾಗಿದೆ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸಿಇಒ ಕೆ.ಯಾಲಕ್ಕಿಗೌಡ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಜಿಲ್ಲಾ ವಾರ್ತಾಧಿಕಾರಿ ಹರೀಶ್‌ ಉಪಸ್ಥಿತರಿದ್ದರು.

ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ

ವಿಶೇಷ ಮೊಬೈಲ್‌ ತಂಡ ರಚನೆ

ಚುನಾವಣಾ ಅಕ್ರಮಗಳು ಮತ್ತು ರೌಡಿ ಚಟುವಟಿಕೆಗಳ ನಿಗ್ರಹಕ್ಕಾಗಿ ಕೆ.ಆರ್‌.ಪೇಟೆ ಟೌನ್‌ ಹಾಗೂ ಹೋಬಳಿಗಳ ವ್ಯಾಪ್ತಿಯಲ್ಲಿ 15 ಸಂಚಾರಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ತಮ್ಮ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಲಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಶಾಂತಿ ಕಾಪಾಡಿಕೊಳ್ಳಲು ಕಾರ‍್ಯ ನಿರ್ವಹಿಸಲಿವೆ.

ಅಬಕಾರಿ ದಾಳಿಗೆ ಸಿದ್ಧತೆ

ಮದ್ಯ ಮಾರಾಟ, ಶೇಖರಣೆ ಮತ್ತು ಸಾಗಾಣಿಕೆಯನ್ನು ನಿಷೇಧಿಸಿದರೂ ಗ್ರಾಮೀಣ ಭಾಗದ ಪೆಟ್ಟಿಗೆ ಅಂಗಡಿಗಳು ಹಾಗೂ ಡಾಬಾಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ ಲೈಸೆನ್ಸ್‌ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಡಾಬಾಗಳು, ಪೆಟ್ಟಿಗೆ ಅಂಗಡಿಗಳ ಮೇಲೆ ದಾಳಿ ನಡೆಸಲು ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ಯಾಂಪೇನ್‌ ಮಾದರಿಯಲ್ಲಿ ಪ್ರತಿ ಹೋಬಳಿಯಲ್ಲಿ 5-10 ಕಡೆಗಳಲ್ಲಿ ದಾಳಿ ನಡೆಸುವಂತೆ ನಿರ್ದೇಶಿಸಲಾಗಿದೆ.

ಮುಂಜಾಗೃತ ಕ್ರಮಗಳು

ಕ್ಷೇತ್ರದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವ್ಯಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಸಿಆರ್‌ಪಿಸಿ 107 ಪ್ರಕಾರ 1779 ಜನರ ವಿರುದ್ಧ 1091 ಪ್ರಕರಣಗಳನ್ನು ದಾಖಲಿಸಲಾಗಿದೆ. 1254 ಜನರಿಂದ ಬಾಂಡ್‌ ಓವರ್‌ ಪಡೆಯಲಾಗಿದೆ. ಇನ್ನೂ 525 ಜನರಿಂದ ಬಾಂಡ್‌ಓವರ್‌ ಪಡೆಯಲಾಗುವುದು. ಹಾಗೆಯೇ ಸಿಆರ್‌ಪಿಸಿ 110ರ ಪ್ರಕಾರ 1436 ಜನರ ವಿರುದ್ಧ 1375 ಪ್ರಕರಣಗಳು ದಾಖಲಾಗಿವೆ. 1382 ಮಂದಿಯಿಂದ ಬಾಂಡ್‌ ಓವರ್‌ ಪಡೆಯಲಾಗಿದೆ. 54 ಮಂದಿಯಿಂದಷ್ಟೇ ಬಾಂಡ್‌ ಓವರ್‌ ಪಡೆಯಬೇಕಿದೆ.

ದಾಖಲೆ ಇಲ್ಲದ 9.26 ಲಕ್ಷ ರು. ವಶ

ಜಿಲ್ಲೆಯಲ್ಲಿ ಈಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. 11 ಚೆಕ್‌ಪೋಸ್ಟ್‌, 18 ಸಂಚಾರಿ ದಳ, 3 ವೀಡಿಯೋ ಜಾಗೃತಿ ತಂಡ, 2 ವೀಡಿಯೋ ವಿಚಕ್ಷಣಾ ತಂಡಗಳು ಕಾರ‍್ಯ ನಿರ್ವಹಿಸುತ್ತಿವೆ. ಆದರೂ ಸಹ ನೀತಿ ಸಂಹಿತೆ ಉಲ್ಲಂಘನೆ ಘಟನೆಗಳು ನಡೆದಿವೆ. ನ.18ರವರೆಗೆ ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ 9,26,630 ರು.ನಗದು, 68,239 ರು. ಮೌಲ್ಯದ 206.446ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಂಡು, 49 ಪ್ರಕರಣಗಳನ್ನು ದಾಖಲಿಸಲಾಗಿದೆ.

ಚುನಾವಣಾ ವೀಕ್ಷಕರ ನೇಮಕ

ಕೆ.ಆರ್‌.ಪೇಟೆ ಉಪ ಚುನಾವಣೆಗೆ ಚುನಾವಣಾ ವೀಕ್ಷಕರ ನೇಮಕರಾಗಿ ಐಎಎಸ್‌ ಅಧಿಕಾರಿ ಊರ್ಮಿಳ ಸುರೇಂದ್ರ ಶುಕ್ಲಾ ಅವರನ್ನು ಚುನಾವಣಾ ಆಯೋಗ ನೇಮಿಸಿದೆ. ಪಾಂಡವಪುರ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಇರುತ್ತಾರೆ. ಚುನಾವಣಾ ಅಕ್ರಮಗಳು, ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ವೀಕ್ಷಕರಿಗೆ ಸಾರ್ವಜನಿಕರು ದೂರು ನೀಡಬಹುದು. ದೂರವಾಣಿ (9535977736) ಮೂಲಕವೂ ಸಂಪರ್ಕಿಸಬಹುದು. ಇವರಿಗೆ ಸಹಾಯಕರಾಗಿ ಕನ್ನಡಬಲ್ಲ ಲಿಂಗರಾಜು (9449189170) ಎಂಬ ಅಧಿಕಾರಿ ಕಾರ‍್ಯ ನಿರ್ವಹಿಸುವರು.

2,08,630 ಮತದಾರರು

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ 1,05,959 ಪುರುಷರು, 1,02,666 ಮಹಿಳೆಯರು ಹಾಗೂ 5 ಮಂದಿ ಮಂಗಳಮುಖಿಯರು ಸೇರಿದಂತೆ 2,08,630 ಮತದಾರರಿದ್ದಾರೆ. 89 ಸೇವಾ ಮತದಾರರಿದ್ದಾರೆ. 258 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತಲಾ 310 ಕಂಟ್ರೋಲ್‌ ಯೂನಿಟ್‌ ಮತ್ತು ಬ್ಯಾಲೆಟ್‌ ಯೂನಿಟ್‌ ಹಾಗೂ 336 ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತದೆ.

2 ನಾಮಪತ್ರಗಳು ತಿರಸ್ಕೃತ

ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ 8 ಅಭ್ಯರ್ಥಿಗಳಿಂದ 15 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 13 ನಾಮಪತ್ರಗಳು ಕ್ರಮಬದ್ಧವಾಗಿವೆ. ‘ಎ’ ಮತ್ತು ‘​ಬಿ’ ಫಾರಂ ಸಲ್ಲಿಸದ ಕಾರಣದಿಂದ 2 ನಾಮಪತ್ರಗಳು ತಿರಸ್ಕೃತಗೊಂಡಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಎಲ್‌.ದೇವರಾಜು ಹಾಗೂ ಪಕ್ಷೇತರ ಅಭ್ಯರ್ಥಿ ದೇವೇಗೌಡ ಅವರು ಸಲ್ಲಿಸಿದ್ದ ಎರಡು ನಾಮಪತ್ರಗಳಲ್ಲಿ ಒಂದು ತಿರಸ್ಕೃತಗೊಂಡಿವೆ. 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ನಾಲ್ವರ ಬಂಧನ

ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಸೋಮವಾರ ಬಿಜೆಪಿ ಕಾರ‍್ಯಕರ್ತರ ಮೆರವಣಿಗೆ ವೇಳೆ ಕೆಲವರು ಚಪ್ಪಲಿ ಎಸೆದ ಘಟನೆ ನಡೆದಿದೆ. ಇದರಿಂದ ಕ್ಷೇತ್ರದಲ್ಲಿ ವಾತಾವರಣ ಬದಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 143, 341, 232, 253, 504ರ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಐಜಿಪಿ ಕೆ.ಆರ್‌.ಪೇಟೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಸರ್ಕಾರದ ರಕ್ಷಣೆಗೆ ಸ್ನೇಹಿತರು ಬರ್ತಾರೆಂಬ ವಿಶ್ವಾಸವಿದೆ: ಮಾಧುಸ್ವಾಮಿ

ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios