ಕುವೆಂಪು ಪದ್ಮ ವಿಭೂಷಣ ಪದಕ ಕದ್ದ ಚೋರರಿಗೆ 2 ವರ್ಷ ಜೈಲು
ಕುವೆಂಪು ಮನೆಯಲ್ಲಿ ಪದಕಗಳನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ತೀರ್ಥಹಳ್ಳಿ [ಜ.31]: ಕುಪ್ಪಳಿಯ ಕವಿಮನೆಯಿಂದ ರಾಷ್ಟ್ರಕವಿ ಕುವೆಂಪು ಅವರ ಪದ್ಮವಿಭೂಷಣ ಪದಕ ಸೇರಿ ಇತರೆ ಅಮೂಲ್ಯ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ 2 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ರು ದಂಡ ವಿಧಿಸಿದೆ.
ಪ್ರಕರಣದ ಮೊದಲ ಅಪರಾಧಿ ದಾವಣಗೆರೆಯ ರೇವಣಸಿದ್ದಪ್ಪ ವಿಚಾರಣಾ ಹಂತದಲ್ಲಿಯೇ ಮೃತ ಪಟ್ಟಿದ್ದ. ಕಳ್ಳತನಕ್ಕೆ ಪ್ರೇರಣೆ ನೀಡಿದ್ದ ಕವಿಮನೆಯ ಮಾರ್ಗದರ್ಶಕ ಅಂಜನಪ್ಪ ಹಾಗೂ ಕಳ್ಳತನದ ಮಾಲೆಂದು ತಿಳಿದಿದ್ದರೂ ಅದನ್ನು ಖರೀದಿಸಿದ್ದ ಸವಳಂಗದ ಪ್ರಕಾಶ್ಗೆ ನ್ಯಾಯಾಲಯ ತಲಾ 2 ವರ್ಷ ಕಾರಾಗೃಹ ವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.
ಹೆಜ್ಜೇನು ದಾಳಿಯಿಂದ ಮಕ್ಕಳು, ಶಿಕ್ಷಕರನ್ನು ರಕ್ಷಿಸಿದ ಬಾಲಕಿ!..
ದಂಡ ಕಟ್ಟಲು ವಿಫಲರಾದಲ್ಲಿಮತ್ತೆ ಆರು ತಿಂಗಳ ಸಜೆ ಅನುಭವಿಸುವಂತೆ ಆದೇಶಿಸಿದೆ. 2015ರ ನ.23ರಂದು ಕವಿಮನೆಗೆ ನುಗ್ಗಿದ ಆರೋಪಿಗಳು ಒಂದು ಸಾವಿರ ರು. ನಗದು ಹಾಗೂ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಪ್ರದಾನ ಮಾಡಿದ್ದ ಪದ್ಮವಿಭೂಷಣ ಪದಕ ಹಾಗೂ ಮೈಸೂರು ವಿಶ್ವವಿದ್ಯಾಲಯ ನೀಡಿದ್ದ 2 ಪದಕಗಳನ್ನು ಅಪಹರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಬಂಧಿತರಿಂದ ಇತರೆ ಪದಕಗಳನ್ನು ವಶ ಪಡಿಸಿಕೊಳ್ಳಲಾಗಿತ್ತಾದರೂ ಪದ್ಮವಿಭೂಷಣ ಪದಕ ಪತ್ತೆಯಾಗಿರಲಿಲ್ಲ. ಇಂದಿಗೂ ಪದ್ಮವಿಭೂಷಣ ಪದಕ ಮಾತ್ರ ಪತ್ತೆಯಾಗಿಲ್ಲ.