ಮೈಸೂರು ವಿಶ್ವವಿದ್ಯಾನಿಲಯವು ಪರೀಕ್ಷಾ ಶುಲ್ಕ ಏರಿಕೆ ಮಾಡಿರುವುದನ್ನು ಖಂಡಿಸಿ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಅಕ್ಟೋಬರ್‌ನಿಂದ ಆರಂಭಗೊಳ್ಳುವ ಸೆಮಿಸ್ಟರ್‌ ಪರೀಕ್ಷೆ ಶುಲ್ಕ ಏರಿಕೆ ಮಾಡಿರುವುದರಿಂದ ನಮಗೆ ತೊಂದರೆಯಾಗುತ್ತಿದೆ.

ಬೇಲೂರು (ಆ.15): ಮೈಸೂರು ವಿಶ್ವವಿದ್ಯಾನಿಲಯವು ಪರೀಕ್ಷಾ ಶುಲ್ಕ ಏರಿಕೆ ಮಾಡಿರುವುದನ್ನು ಖಂಡಿಸಿ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಅಕ್ಟೋಬರ್‌ನಿಂದ ಆರಂಭಗೊಳ್ಳುವ ಸೆಮಿಸ್ಟರ್‌ ಪರೀಕ್ಷೆ ಶುಲ್ಕ ಏರಿಕೆ ಮಾಡಿರುವುದರಿಂದ ನಮಗೆ ತೊಂದರೆಯಾಗುತ್ತಿದೆ. ಕೂಡಲೇ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಿ ನಮಗೆ ಅನುಕೂಲ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 

Add Asianetnews Kannada as a Preferred SourcegooglePreferred

ಬಿಕಾಂ ವಿದ್ಯಾರ್ಥಿಗಳಾದ ಕವನ ಹಾಗೂ ಗೌತಮ್‌ ಮಾತನಾಡಿ, ಪರಿಶಿಷ್ಟಜಾತಿ ಪರಿಶಿಷ್ಟವರ್ಗಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡುತ್ತಿದ್ದರು. ಆದರೆ ಈಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಶುಲ್ಕವನ್ನು ವಿ​ಧಿಸುವುದಲ್ಲದೆ ನಮ್ಮ ಕಾಲೇಜಿನಲ್ಲಿ ಹೆಚ್ಚುವರಿಯಾಗಿ ಶುಲ್ಕ ಪಡೆಯುವ ಮೂಲಕ ನಮಗೆ ತೊಂದರೆಯಾಗುತ್ತಿದೆ. ಈಗಾಗಲೇ ನಾವು 5ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಬರೆದಾಗಿದೆ. ಆದರೆ ಅದರ ಶುಲ್ಕವನ್ನು ನೀಡಬೇಕು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ನಾವು ಬಡಕುಟುಂಬದ ಮಕ್ಕಳು ಮೈಸೂರು ವಿಶ್ವ ವಿದ್ಯಾನಿಲಯವು ನಿಗದಿತ ಶುಲ್ಕ ನೀಡಬೇಕು. ಇಲ್ಲವಾದರೆ ಪರೀಕ್ಷೆಗೆ ಕೂರಲು ನಮಗೆ ಅವಕಾಶ ಇಲ್ಲ. 

ಅಕ್ರಮ ಲೇಔಟ್‌ ನಿರ್ಮಾಣಕ್ಕೆ ಕಡಿವಾಣ ಹಾಕಿ: ಶಾಸಕ ಬಾಲಕೃಷ್ಣ

ನಮಗೆ ಇದೇ ತಿಂಗಳು 14ರಂದು ಶುಲ್ಕ ಕಟ್ಟಲು ಕೊನೆಯ ದಿನಾಂಕ ಎಂದು ಹೇಳಿದ್ದು, ಇದರಿಂದ ನಮಗೆ ಹೆಚ್ಚುವರಿ ಶುಲ್ಕ ಪಾವತಿಸಲು ಸಾಧ್ಯವಿಲ್ಲ. ಮನೆಯಿಂದಲೂ ತುರ್ತಾಗಿ ಹಣ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಕಣ್ಣೀರು ಹಾಕಿದರು. ಎಸ್‌ಸಿಎಸ್‌ಟಿ ವಿದ್ಯಾರ್ಥಿ ಪರಿಷತ್‌ ಅನಿಲ್‌ ಮಾತನಾಡಿ, ನಮಗೆ ಸರ್ಕಾರದಿಂದ ನೀಡುವಂತಹ ವಿದ್ಯಾರ್ಥಿ ವೇತನದಲ್ಲಿ ಈ ಶುಲ್ಕವನ್ನು ಕಟ್ಟಲು ಪ್ರಾಂಶುಪಾಲರು ತಿಳಿಸುತ್ತಿದ್ದಾರೆ. ಆದರೆ ಕೆಲವರಿಗೆ ಇಲ್ಲಿವರೆಗೂ ವಿದ್ಯಾರ್ಥಿ ವೇತನವೂ ಬಂದಿಲ್ಲ. ನಿಗದಿತ ವೇತನಕ್ಕಿಂತ ಕಡಿಮೆ ಬಂದಿದೆ. ಪರೀಕ್ಷಾ ಶುಲ್ಕ ಹೆಚ್ಚು ಮಾಡಿದ್ದರಿಂದ ನಮಗೆ ಕಟ್ಟಲು ಅಸಾಧ್ಯವಾಗಿದೆ. ಹೆಚ್ಚುವರಿ ಶುಲ್ಕ ನಮಗೆ ಕಟ್ಟಲಾಗುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಪ್ರತಿಭಾ, ಹೇಮಾವತಿ, ಪೂರ್ಣಿಮಾ, ಸಂಗೀತ, ವೀಣಾ, ದರ್ಶನ್‌ ಇತರರು ಪಾಲ್ಗೊಂಡಿದ್ದರು.

ರಾಜಕೀಯ, ಪ್ರಕೃತಿ ವಿಕೋಪದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿಮಠ ಶ್ರೀ

ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿಲ್ಲ: ನಮಗೆ ಪರೀಕ್ಷಾ ಮಂಡಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಯಾವ ಶುಲ್ಕ ವಿಧಿ​ಸುತ್ತದೆಯೋ ಅದನ್ನು ನಾವು ವಿದ್ಯಾರ್ಥಿಗಳಿಗೆ ತಿಳಿಸಿದ್ದೇವೆ. ಯಾವುದೇ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಪರೀಕ್ಷಾ ಶುಲ್ಕವನ್ನು ಯೂನಿವರ್ಸಿಟಿಗೆ ಕಟ್ಟಬೇಕಾಗಿರುತ್ತದೆ. ಅದು ವಿದ್ಯಾರ್ಥಿಗಳೇ ಪಾವತಿ ಮಾಡುತ್ತಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಹಣ ನೇರವಾಗಿ ಸಂದಾಯ ಆಗಿದ್ದು ಈ ಹಿಂದೆ ಪ್ರತಿಯೊಬ್ಬ ವಿದ್ಯಾರ್ಥಿಯ ವೇತನ ಕಾಲೇಜಿಗೆ ನೇರವಾಗಿ ಬರುತ್ತಿತ್ತು. ಆ ಸಮಯದಲ್ಲಿ ಅವರ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕ ಪಡೆದು ಉಳಿದ ಹಣ ಅವರ ಖಾತೆಗೆ ಜಮಾ ಆಗುತ್ತಿತ್ತು ಎಂದು ಪ್ರಾಂಶುಪಾಲ ಪುಟ್ಟರಾಜು ತಿಳಿಸಿದ್ದಾರೆ.