Asianet Suvarna News Asianet Suvarna News

ಪ್ರಮುಖ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಆಯೋಜಿಸಿ; ವೈಶಾಲಿ

ಗದಗ ಜಿಲ್ಲೆಯ ಜಿಲ್ಲಾಡಳಿತ ಸೇರಿದಂತೆ ಪ್ರಮುಖ ದೇವಸ್ಥಾನ, ಕ್ರೀಡಾಂಗಣ, ಹಾಗೂ ವಿವಿಧೆಡೆ ಅ. 28 ರಂದು ಬೆಳಗ್ಗೆ 11ಕ್ಕೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅಧಿಕಾರಿಗಳಿಗೆ ಸೂಚಿಸಿದರು.

Organize Koti Kantha Gaana at important places; Vaishali
Author
First Published Oct 22, 2022, 1:06 PM IST | Last Updated Oct 22, 2022, 1:06 PM IST

ಗದಗ (ಅ.22) : ಗದಗ ಜಿಲ್ಲೆಯ ಜಿಲ್ಲಾಡಳಿತ ಸೇರಿದಂತೆ ಪ್ರಮುಖ ದೇವಸ್ಥಾನ, ಕ್ರೀಡಾಂಗಣ, ಹಾಗೂ ವಿವಿಧೆಡೆ ಅ. 28 ರಂದು ಬೆಳಗ್ಗೆ 11ಕ್ಕೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಶುಕ್ರವಾರದಂದು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದ ಎಲ್ಲ ಶಾಲೆಗಳಲ್ಲಿ 28ಕ್ಕೆ ‘ಕೋಟಿ ಕಂಠ ಗಾಯನ’

ಸಭೆಗೂ ಮುನ್ನ ಕನ್ನಡ ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಸುನೀಲ್‌ ಕುಮಾರ್‌ ಸೇರಿದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ ಅವರೊಂದಿಗೆ ವಿಡಿಯೋ ಸಂವಾದ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದಂತೆ ಜಿಲ್ಲೆಯಲ್ಲಿ ಕಾರ್ಯಕ್ರಮ ಯಶಸ್ವಿಗೆ ಮುಂದಾಗೋಣ ಎಂದರು.

ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆಯೊಂದಿಗೆ ಆಯ್ದ ಇತರೆ 5 ಗೀತೆಗಳನ್ನು ಎಲ್ಲರೂ ಸಾಮೂಹಿಕವಾಗಿ ಹಾಡಬೇಕು. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿದವರು ಬಿಳಿ ಸಮವಸ್ತ್ರಗಳನ್ನು ಧರಿಸಿ ನಿಗದಿತ ಸ್ಥಳಗಳಲ್ಲಿ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಸಾರ್ವಜನಿಕರು ಪಾಲ್ಗೊಳ್ಳೊವಿಕೆಯ ಮೂಲಕ ಕಾರ್ಯಕ್ರಮ ಯಶಸ್ವಿಗೆ ತಿಳಿಸಿದರು.

ಅ. 28 ರಂದು ಬೆಳಗ್ಗೆ 11 ಗಂಟೆಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ಕೋಟಿ ಕಂಠ ಗಾಯನಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳಿಗಾಗಿ 4 ನಿಮಿಷ ನಿಗದಿಪಡಿಸಿದೆ. ಅದರಂತೆ ನಾಡಗೀತೆಗೆ 2.30 ನಿಮಿಷ, ಆಯ್ದ 5 ಗೀತೆಗಳನ್ನು ಹಾಡಲು 20 ರಿಂದ 25 ನಿಮಿಷ ನಿಗದಿಪಡಿಸಿದ್ದು ಕೊನೆಯಲ್ಲಿ ವಂದನಾರ್ಪಣೆ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು.

ಕನ್ನಡ ಸಂಸ್ಕೃತಿ ಇಲಾಖೆಯಿಂದ ನೀಡಲಾದ ನಿಗದಿತ ವೆಬ್‌ಸೈಟ್‌ನಲ್ಲಿ ಜನಸಾಮಾನ್ಯರು, ಸಂಘ- ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಕನ್ನಡಾಭಿಮಾನ ಮೆರೆಯಲು ಕನ್ನಡನಾಡಿನ ಜನತೆಗೆ ಇದೊಂದು ಸುವರ್ಣಾವಕಾಶವಾಗಿದ್ದು ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವೆಂದರು. ಪೌರಕಾರ್ಮಿಕರು, ಅಟೋ ಚಾಲಕರು, ಕನ್ನಡಾಭಿಮಾನಿ ಸಂಘಟನೆಗಳು ಸೇರಿದಂತೆ ಎಲ್ಲ ಸಂಘ- ಸಂಸ್ಥೆಗಳು ಸಹ ನೋಂದಣಿ ಮಾಡಿಕೊಂಡು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಜಿಪಂ ಸಿಇಓ ಡಾ. ಸುಶೀಲಾ ಬಿ ಮಾತನಾಡಿ, ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮೊದಲಿಗೆ ಕುವೆಂಪು ಅವರ ನಾಡ ಗೀತೆಯಾದ ಜೈ ಭಾರತ ಜನನಿಯ ತನುಜಾತೆ, ನಂತರ ಜಿಲ್ಲೆಯರೇ ಆದ ಹುಯಿಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ಚೆಲುವ ಕನ್ನಡ ನಾಡು, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ. ಡಿ.ಎಸ್‌. ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾಚೇತನ, ಡಾ. ಹಂಸಲೇಖಾ ಅವರ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಹಾಡಲು ಗೀತೆಗಳನ್ನು ನಿಗದಿಪಡಿಸಲಾಗಿದೆ. ಎಲ್ಲ ಸಂಬಂಧಿತ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಲು ಸೂಚಿಸಿದರು.

ಕೋಟಿ ಕಂಠ ಗಾಯನದಲ್ಲಿ ಉಡುಪಿ ಜಿಲ್ಲೆಯಿಂದ 5 ಲಕ್ಷ ಮಂದಿ ಭಾಗಿ

ಡಿಡಿಪಿಐ ಬಸವಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್‌, ಕಾರ್ಮಿಕ ಇಲಾಖೆ ಅಧಿಕಾರಿ ಸುಧಾ ಗರಗ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಮಾರುತಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲಕುಮಾರ್‌ ಜಾಬಗೌಡ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios