ಗುಜರಾತಿನ ಅಮುಲ್‌ ಸಂಸ್ಥೆಯನ್ನು ಕೆಎಂಎಫ್‌ನ ನಂದಿನಿ ಸಂಸ್ಥೆಯೊಂದಿಗೆ ವಿಲೀನ ಮಾಡುವುದರಿಂದ ರೈತಾಪಿ ಕುಟುಂಬ ಆರ್ಥಿಕ ಸಂಕಷ್ಟಅನುಭವಿಸಲಿದ್ದು, ರಾಜ್ಯ ಸರ್ಕಾರ ಕೈಗೊಂಡಿರುವ ಈ ವಿಲೀನ ಪ್ರಕ್ರಿಯೆಯನ್ನು ಕೂಡಲೆ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ತಿಳಿಸಿದರು.

ತಿಪಟೂರು : ಗುಜರಾತಿನ ಅಮುಲ್‌ ಸಂಸ್ಥೆಯನ್ನು ಕೆಎಂಎಫ್‌ನ ನಂದಿನಿ ಸಂಸ್ಥೆಯೊಂದಿಗೆ ವಿಲೀನ ಮಾಡುವುದರಿಂದ ರೈತಾಪಿ ಕುಟುಂಬ ಆರ್ಥಿಕ ಸಂಕಷ್ಟಅನುಭವಿಸಲಿದ್ದು, ರಾಜ್ಯ ಸರ್ಕಾರ ಕೈಗೊಂಡಿರುವ ಈ ವಿಲೀನ ಪ್ರಕ್ರಿಯೆಯನ್ನು ಕೂಡಲೆ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ತಿಳಿಸಿದರು.

ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಹಾಲಿನ ಉತ್ಪನ್ನಗಳನ್ನು ಬೇರೆ ರಾಜ್ಯದಲ್ಲಿ ಮಾರಲು ಅವಕಾಶ ಕೊಡಿ. ಆದರೆ ನಮ್ಮ ರಾಜ್ಯದಲ್ಲಿ ಅಮುಲ್‌ನಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಟ್ಟಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಇಲ್ಲಿನ ರೈತರು, ಕೃಷಿ ಕಾರ್ಮಿಕರು ಹಾಲು ಉತ್ಪಾದನೆ ಮಾಡಿ ಡೈರಿಗಳಿಗೆ ಹಾಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಬೇರೆ ರಾಜ್ಯದ ಹಾಲನ್ನು ತಂದು ಇಲ್ಲಿ ಮಾರಾಟ ಮಾಡಿದರೆ ನಮ್ಮ ಹಾಲಿನ ದರ ಕಡಿಮೆಯಾಗಲಿದ್ದು, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಲಿದ್ದಾರೆ. ಈಗಾಗಲೆ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಜೀವನ ನಡೆಸಲಾಗದಂತಹ ದುಸ್ಥಿತಿಯಲ್ಲಿದ್ದು, ಸರ್ಕಾರ ಇಂತಹ ಸಮಯದಲ್ಲಿ ಈ ನಿರ್ಧಾರ ಕೈಗೊಂಡಿರುವುದು ರಾಜಕೀಯ ಪ್ರೇರಿತವಾಗಿದೆ. ಅಮುಲ್‌ ಪ್ರವೇಶದಿಂದ ನಂದಿನಿಯ ಹಾಲಿನ ಬೇಡಿಕೆ ಇನ್ನೂ ಕುಸಿದು ಕೆಎಂಎಫ್‌ ಹಾಲಿನ ಸಂಗ್ರಹ ಕಡಿಮೆಯಾಗಲಿದೆ. ಆದ್ದರಿಂದ ನಮ್ಮ ಕರ್ನಾಟಕದ ಹೆಮ್ಮೆ ನಂದಿನಿ ಸಂಸ್ಥೆಯನ್ನು ಗುಜರಾತ್‌ನ ಅಮುಲ್‌ ಸಂಸ್ಥೆಯೊಂದಿಗೆ ವಿಲೀನಗೊಳಿಸಬಾರದೆಂದು ಆಗ್ರಹಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ, ಕೆಎಂಎಫ್‌ ಗುರುತಿನಿ ನಂದಿನಿ ಹಾಲಿಗೆ ರಾಜ್ಯದಲ್ಲಿಯೇ ಬೇಡಿಕೆ ಇದ್ದು, ರೈತರ ಪಾಲಿನ ಸಂಜೀವಿನಿಯಾಗಿದೆ. ಆದರೆ ಸರ್ಕಾರ ನಂದಿನಿಯೊಂದಿಗೆ ಗುಜರಾತಿನ ಅಮುಲ್‌ನ್ನು ವಿಲೀನ ಮಾಡಲು ಹೊರಟಿದ್ದು, ಇದು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ. ನಮ್ಮ ನಂದಿನಿ ನಮಗೆ ಬೇಕು. ಅಮುಲ್‌ ಕಂಪನಿ ಗುಜರಾತಿನಲ್ಲಿಯೇ ಇರಲಿ. ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಈ ನಿರ್ಧಾರವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಿ ವಿರೋಧ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘಟನೆಯ ಸಿದ್ದಯ್ಯ ಬಳುವನೇರಲು, ಸುಧಾಕರ್‌, ಮಲ್ಲಿಕಾರ್ಜುನಯ್ಯ, ಯೋಗಾನಂದಸ್ವಾಮಿ ಭೈರಾಪುರ ಮತ್ತಿತರರಿದ್ದರು.

ನೆರೆ ರಾಜ್ಯಗಳಲ್ಲಿ ನಂದಿನಿಗೆ ವಿರೋಧ

ತಿರುವನಂತಪುರ (ಏಪ್ರಿಲ್ 15, 2023): ಗುಜರಾತ್‌ ಮೂಲದ ಅಮುಲ್‌ ಸಂಸ್ಥೆಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿರುವ ಹೊತ್ತಿನಲ್ಲೇ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ತನ್ನ ನಂದಿನ ಉತ್ಪನ್ನವನ್ನು ಕೇರಳದಲ್ಲಿ ಮಾರಾಟ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯ ಹಾಲು ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕೆಎಂಎಫ್‌ (KMF) ಕೆಲ ತಿಂಗಳ ಹಿಂದೆ ಮಲಪ್ಪುರಂ (Malappuram) ಜಿಲ್ಲೆಯ ಮಂಜೇರಿ ಮತ್ತು ಕೊಚ್ಚಿಯ ವ್ಯಿಟ್ಟಿಲ್ಲದಲ್ಲಿ ಎರಡು ಹಾಲು, ಡೈರಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆದಿದೆ. ಜೊತೆಗೆ ಇನ್ನೂ 100 ಫ್ರಾಂಚೈಸಿಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಇದನ್ನು ಓದಿ: ಅಮುಲ್‌ ಆದಾಯ 66 ಸಾವಿರ ಕೋಟಿ ರೂ. ಗೆ ಹೆಚ್ಚಳ: ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟ ಸಂದೇಶ ನೀಡಿದ ಎಂಡಿ..!

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಿಲ್ಮಾ (Milma) ಹೆಸರಲ್ಲಿ ಕೇರಳದಲ್ಲಿ (Kerala) ಹಾಲು ಮಾರಾಟ ಮಾಡುವ ‘ಕೇರಳ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟ’(ಕೆಸಿಎಂಎಂಎಫ್‌) (Kerala Co -operative Milk Marketing Federation) ಅಧ್ಯಕ್ಷ ಕೆ.ಎಸ್‌.ಮಣಿ, ‘ಅನಾರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ ಎಂಬ ಕಾರಣಕ್ಕಾಗಿಯೇ ಒಂದು ರಾಜ್ಯದ ಹಾಲು ಸಹಕಾರಿ ಒಕ್ಕೂಟಗಳು ಇನ್ನೊಂದು ರಾಜ್ಯಕ್ಕೆ ಪ್ರವೇಶ ಮಾಡಬಾರದು ಎಂಬ ಅಲಿಖಿತ ನಿಯಮವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿಯೇ ನಮ್ಮ ಬಳಿ ಹೆಚ್ಚುವರಿ ಹಾಲು ಇದ್ದರೂ ನಾವು ನೆರೆ ರಾಜ್ಯವನ್ನು ಪ್ರವೇಶ ಮಾಡಿರಲಿಲ್ಲ. ಹೀಗಿರುವಾಗ ಕೇರಳದಲ್ಲಿ ತನ್ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಎಂಫ್‌ನ ನಿರ್ಧಾರ ಅನೈತಿಕ ಮತ್ತು ಸಹಕಾರ ತತ್ವಗಳಿಗೆ ವಿರುದ್ಧವಾದುದು’ ಎಂದು ಕಿಡಿಕಾರಿದ್ದಾರೆ.

ಜೊತೆಗೆ ‘ಇತರೆ ರಾಜ್ಯಗಳು ಕೇರಳದಲ್ಲಿ ಮಾರಾಟ ಮಾಡುವುದು ಸ್ಥಳೀಯರಿಗೆ ತಾಜಾ ಹಾಲಿನ ಅವಕಾಶವನ್ನು ನಿರಾಕರಿಸುತ್ತದೆ. ಈ ಕುರಿತು ಕೆಎಂಎಫ್‌ ಮುಖ್ಯಸ್ಥರಿಗೆ ನಾನು ಈಗಾಗಲೇ ಪತ್ರ ಬರೆದಿರುವೆನಾದರೂ ಅದಕ್ಕೆ ಉತ್ತರ ಬಂದಿಲ್ಲ’ ಎಂದು ಮಣಿ ಹೇಳಿದ್ದಾರೆ. ಇದೇ ವೇಳೆ, ‘ರಾಜ್ಯದಲ್ಲಿ ಹಲವು ಸಮಯಗಳಿಂದ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಮುಲ್‌ಗೆ ನಾವು ವಿರೋಧವೇನೂ ಮಾಡಿಲ್ಲ’ ಎಂದೂ ಮಣಿ ಹೇಳಿದ್ದಾರೆ.