ಪ್ರಧಾನಿ ಮೋದಿಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ, ಪಾಕಿಸ್ತಾನ ಹಾಗೂ ಸಿದ್ದರಾಮಯ್ಯ ಮಾತ್ರ ಅವರನ್ನು ದ್ವೇಷಿಸುತ್ತಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ರಾಜ್ಯ ಸಮ್ಮಿಶ್ರ ಸರಕಾರ ತನ್ನಿತಾನೇ ಬೀಳುತ್ತೆ, ಎಂದು ಭವಿಷ್ಯ ನುಡಿದಿದ್ದಾರೆ. 

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಒಪ್ಪಿದರೂ ಪಾಕಿಸ್ತಾನ ಹಾಗೂ ಸಿದ್ದರಾಮಯ್ಯ ಮಾತ್ರ ದ್ವೇಷಿಸುತ್ತಾರೆ, ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನ ಮೋದಿಯನ್ನು ಕೊಲೆಗಡುಕ ಎಂದರು. ಹಿಂದುಳಿದ ವರ್ಗಗಳ ದ್ವೇಷಿ ಅಂದರು. ಆದರೆ, ತಮ್ಮನ್ನು ತಾವು ಅಹಿಂದ ವರ್ಗಗಳ ಚಾಂಪಿಯನ್ ಎಂದುಕೊಳ್ಳುವ ಸಿದ್ದರಾಮಯ್ಯ ಒಬಿಸಿ ಶಾಶ್ವತ ಆಯೋಗಕ್ಕೆ ರಾಜ್ಯಸಭೆಯಲ್ಲಿ ಬೆಂಬಲ ಕೊಡಿಸಲಿಲ್ಲ, ಎಂದು ಆರೋಪಿಸಿದರು. 

'3 ತಿಂಗಳೋ- 6 ತಿಂಗಳೋ ರಾಜ್ಯ ಸಮ್ಮಿಶ್ರ ಸರ್ಕಾರ ಇರಲಿದೆ. ಅದನ್ನು ಬೀಳಿಸುವ ಯತ್ನಕ್ಕೆ ಬಿಜೆಪಿ ಕೈ ಹಾಕುವುದಿಲ್ಲ. ತನ್ನಿತಾನೇ ಕುಸಿಯುತ್ತೆ. ಸರ್ಕಾರ ಇದ್ದಷ್ಟು ದಿನ ಬಾಚಿಕೊಳ್ಳಬೇಕು ಎಂಬ ದಿಸೆಯಲ್ಲಿ ವಿಧಾನಸೌಧದಲ್ಲಿ ಡಿ ಗ್ರೂಪ್ ನೌಕರನಿಂದ ಐಎಎಸ್ ಅಧಿಕಾರಿ ತನಕ ಲೂಟಿಯೇ ನಡೆಯುತ್ತಿದ್ದು, ವರ್ಗಾವಣೆ ದಂಧೆ ಎಗ್ಗಿಲ್ಲದೇ ಸಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ನಾನು 3 ತಂಡಗಳಾಗಿ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದುದ್ದಕ್ಕೂ ಪ್ರವಾಸ ಮಾಡಲಿದ್ದು ಚಾಮರಾಜನಗರವೂ ಸೇರಿದಂತೆ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಜಲಪ್ರಿಯತೆ ಕುಸಿದಿಲ್ಲ:
ಪ್ರಧಾನಿ ಜನಪ್ರಿಯತೆ ಕ್ಷೀಣಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸಮೀಕ್ಷೆಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ, ಅವರಿಚ್ಛೆಗೆ ತಕ್ಕಂತೆ ಸಮೀಕ್ಷೆಗಳನ್ನು ಪ್ರಕಟಿಸುತ್ತಾರೆ. ಮೋದಿ ಅವರ ಕಾರ್ಯಕ್ರಮಗಳು ಮತ್ತು ಕೈಗೆತ್ತಿಕೊಂಡ ಕಾರ್ಯಕ್ರಮಗಳನ್ನು ಎಲ್ಲ ಧರ್ಮ ಮತ್ತು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿವೆ. ಅವರು ಮತ್ತೇ ಪ್ರಧಾನಿಯಾಗಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.