ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿಯುತ್ತಿರುವ ಕಾರಣ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಪ್ರಾಣಿ, ಪಕ್ಷಿಗಳ ಸಂತತಿ ಕೂಡಾ ಕಡಿಮೆಯಾಗಿ ಪರಿಸರ ಅಸಮತೋಲನವಾಗಿದೆ. ಹೀಗಾಗಿ ಕಡೂರಿನಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕಡೂರು(ಜೂ.18): ಪಟ್ಟಣದ ಪ್ರವಾಸಿ ಮಂದಿರದ ರಸ್ತೆಯ ಹನ್ನೆರಡನೇ ವಾರ್ಡಿನಲ್ಲಿ ಪುರಸಭಾ ಸದಸ್ಯೆ ಕಮಲಾ ವೆಂಕಟೇಶ್‌ ನೇತೃತ್ವದಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕದಂಬ ವೃತ್ತದ ಬಳಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಹಿರಿಯ ಪುರಸಭಾ ಸದಸ್ಯ ಭಂಡಾರಿ ಶ್ರೀನಿವಾಸ್‌ ಚಾಲನೆ ನೀಡಿ ಮಾತನಾಡಿದರು. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿಯುತ್ತಿರುವ ಕಾರಣ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಪ್ರಾಣಿ, ಪಕ್ಷಿಗಳ ಸಂತತಿ ಕೂಡಾ ಕಡಿಮೆಯಾಗಿ ಪರಿಸರ ಅಸಮತೋಲನವಾಗಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದರು.

ಕಳೆದ ವರ್ಷ ಪುರಸಭೆಯಿಂದ ಆಯ್ಕೆಯಾದ ವಾರ್ಡ್‌ಗಳಲ್ಲೂ ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿತ್ತು. ಆ ಗಿಡಗಳ ಜವಬ್ದಾರಿಯನ್ನು ಮನೆಯ ಮಾಲೀಕರಿಗೆ ನೀಡಿದ್ದರ ಫಲವಾಗಿ ನೆಟ್ಟ ಸಸಿಗಳು ಉತ್ತಮವಾಗಿ ಬೆಳೆದಿದ್ದು, ಈ ಸಾಲಿನಲ್ಲಿ ಉಳಿದ ಸ್ಥಳಗಳಲ್ಲೂ ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸಲು ಆದ್ಯತೆ ನೀಡಲಾಗಿದೆ ಎಂದರು.

ಕದಂಬ ಯುವಕ ಸಂಘದ ಸ್ಥಾಪಕ ಸಮಿತಿ ಅಧ್ಯಕ್ಷ ಕದಂಬ ವೆಂಕಟೇಶ್‌ ಮಾತನಾಡಿ, ಕಳೆದ ವರ್ಷವೂ ಸಾವಿರಾರು ಗಿಡಗಳನ್ನು ನೆಡಲಾಗಿತ್ತು. ಈ ಭಾರಿ ವಾರ್ಡ್‌ನ ಒಳರಸ್ತೆಗಳಲ್ಲಿ ಉಳಿದ ಸ್ಥಳಗಳಲ್ಲಿ ಒಂದು ಸಾವಿರ ಬಾದಾಮಿ, ಹೊಂಗೆ, ನೇರಳೆ, ಬೇವು, ಸಂಪಿಗೆ ಹಾಗೂ ವಿವಿಧ ತಳಿಗಳ ಸಸಿಗಳನ್ನು ನೆಡುತ್ತಿದ್ದು, ಸಸಿಗಳನ್ನು ಪೋಷಿಸುವ ಜವಬ್ದಾರಿಯನ್ನು ಪಕ್ಕದ ಮನೆಗಳ ಮತ್ತು ಅಂಗಡಿಗಳ ಮಾಲೀಕರಿಗೆ ವಹಿಸಲಾಗಿದೆ ಎಂದರು.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆ..!

ಪುರಸಭಾ ಸದಸ್ಯರಾದ ಕಮಲಾ ವೆಂಕಟೇಶ್‌, ಮರುಗುದ್ದಿ ಮನು, ಜ್ಯೋತಿ ಆನಂದ್‌, ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್‌.ಮಂಜುನಾಥ್‌, ಆರೋಗ್ಯ ನಿರೀಕ್ಷಕ ಹರೀಶ್‌, ಫಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಎಚ್‌.ರಂಗನಾಥ್‌, ಚೇತನ್‌ ಕೆಂಪರಾಜ್‌, ಕಾಂತರಾಜ್‌, ಯುವಕ ಸಂಘದ ಪದಾಧಿಕಾರಿ ಕಿರಣ್‌ ಕಲ್ಲಯ್ಯ ಮತ್ತಿತರಿದ್ದರು.

ಕಂದಾಯ ಭೂಮಿ ಅತಿಕ್ರಮಣ: ದೂರು

ಬಾಳೆಹೊನ್ನೂರು: ಬಿ.ಕಣಬೂರು ಗ್ರಾಮದ ಸರ್ವೆ ನಂ.137ರಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬೆಲೆ ಬಾಳುವ ಕಂದಾಯ ಭೂಮಿಯನ್ನು ಅತಿಕ್ರಮಿಸಿಕೊಂಡು ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ವಿತರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಎನ್‌.ಆರ್‌.ಪುರ ತಹಸೀಲ್ದಾರರಿಗೆ ದೂರ ನೀಡಲಾಗಿದೆ ಎಂದು ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಜಾನ್‌ ವಿಲೆ್ೊ್ರಡ್‌, ಸುನೀಲ್‌ ಡಿಸೋಜ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಬಡ ಕುಟುಂಬದ ಕೂಲಿ ಕಾರ್ಮಿಕರು ನಿವೇಶನ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ನಿವೇಶನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಕ್ರಮಕೈಗೊಳ್ಳಬೇಕು. ಅಕ್ರಮವಾಗಿ ಕಂದಾಯ ಭೂಮಿ ಒತ್ತುವರಿ ಮಾಡಿ ಶುಂಠಿ ಬೆಳೆಯುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಮುದುಗುಣಿ ಗ್ರಾಮದ ಸರ್ವೆ ನಂ.68ರಲ್ಲಿ ವ್ಯಕ್ತಿಯೊಬ್ಬರು ಅರಣ್ಯ ಒತ್ತುವರಿ ಮಾಡಿದ್ದು, ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಕ್ರಮಕೈಗೊಳ್ಳುತ್ತಿಲ್ಲ. ಈ ಕುರಿತು ಕೊಪ್ಪ ಡಿಎಫ್‌ಓ ಅವರಿಗೆ ದೂರು ನೀಡಲಾಗಿದೆ. ಭದ್ರಾನದಿ ದಂಡೆಯಲ್ಲಿ ಕೆಲವು ದುಷ್ಕರ್ಮಿಗಳು ನಿರಂತರವಾಗಿ ಅಕ್ರಮ ಮರಳು ಸಾಗಣಿಕೆ ಮಾಡುತ್ತಿದ್ದು, ಇದರಿಂದ ಸರ್ಕಾರಕ್ಕೆ ಭಾರಿ ನಷ್ಟವಾಗುತ್ತಿದೆ. ಅಕ್ರಮ ಮರಳು ಸಾಗಣಿಕೆಗೆ ಸಹ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.