*  ಬಿರುಗಾಳಿ ಸಹಿತ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ*  ಕಾರು, ಆಟೋ, ದ್ವಿಚಕ್ರ ವಾಹನಗಳು ಜಖಂ*  ಅಕಾಲಿಕ ಮಳೆಗೆ ಆತಂಕಗೊಂಡ ಜನತೆ  

ಹುಬ್ಬಳ್ಳಿ(ಮೇ.05): ನಗರದಲ್ಲಿ ನಿನ್ನೆ(ಬುಧವಾರ) ಸಂಜೆ ಬಿರುಗಾಳಿ ಸಹಿತ ಅಬ್ಬರಿಸಿದ ಮಳೆರಾಯನ(Rain) ಆರ್ಭಟಕ್ಕೆ ಒಂದು ಜೀವ ಬಲಿಯಾಗಿದ್ದು(Death), ಜನಜೀವನ ಅಕ್ಷರಶಃ ತತ್ತರಿಸಿದೆ. ಹುಬ್ಬಳ್ಳಿಯ(Hubballi) ದೇಸಾಯಿ ಕ್ರಾಸ್‌ ಬಳಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದಿದ್ದರಿಂದ ಆಟೋದಲ್ಲಿ ಪ್ರಯಾಣಿಸುತ್ತಿದ್ದ ರೂಬಿನ್ ಮೊರಿಸ್ (33) ಎಂಬ ಪ್ರಯಾಣಿಕ ಸಾವನ್ನಪ್ಪಿದ್ದು ಮತ್ತೋರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

Add Asianetnews Kannada as a Preferred SourcegooglePreferred

ಪೇಂಟರ್ ವೃತ್ತಿ ಮಾಡಿಕೊಂಡಿದ್ದ ರೂಬಿನ್ ಹುಬ್ಬಳ್ಳಿ ಸೋನಿಯಾ ಗಾಂಧಿ ನಗರದ ನಿವಾಸಿಯಾಗಿದ್ದ. ಸಂಜೆ ಕೆಲಸ‌ಮುಗಿಸಿಕೊಂಡ ಮನೆಗೆ ತೆರಳುವಾಗ ಅವಘಡ ಸಂಭವಿಸಿದೆ. ಇನ್ನು ಹುಬ್ಬಳ್ಳಿಯ ಗುಡಸೆಡ್ ರೋಡ್ ರಸ್ತೆ, ವಿದ್ಯಾನಗರ, ದೇಶಪಾಂಡೆ ನಗರ, ಗ್ಲಾಸ್ ಹೌಸ್ ಸೇರಿದಂತೆ ನಗರದ ಹಲವೆಡೆ ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿದ್ದು, ಮರಬಿದ್ದ ಪರಿಣಾಮ, ಎರಡು ಕಾರು, ಒಂದು ಆಟೋ, ನಾಲ್ಕು ಬೈಕ್ ಸಂಪೂರ್ಣ ಜಖಂಗೊಂಡಿವೆ.

ಕರ್ನಾಟಕದ 11 ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲು ಬಡಿದು ಐವರು ಸಾವು

ಧಾರಾಕಾರವಾಗಿ ಸುರಿದ ಮಳೆಯಿಂದ ದೇಶಪಾಂಡೆ ನಗರದ ರೋಟರಿ ಸ್ಕೂಲ್ ಗೇಟ್ ಬಳಿಯಲ್ಲಿ ಬೃಹತ್ ಗಾತ್ರದ ಮರವೊಂದು(Tree) ಉರುಳಿ ಬಿದ್ದಿದೆ. ಮರದ ಕೆಳಗೆ‌ನಿಂತದ್ದ ಆಟೋ ಸಂಪೂರ್ಣ ಜಖಂಗೊಂಡಿದೆ. ಮತ್ತೊಂದೆಡೆ ಮರ ಬಿದ್ದಿದ್ದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಇನ್ನು ಗುಡಶೆಡ್ ರಸ್ತೆಯಲ್ಲಿ ಬೃಹತ್ ಮರ ಉರುಳಿಬಿದ್ದು ಎರಡು ಕಾರು, ನಾಲ್ಕು ದ್ವಿಚಕ್ರ ವಾಜನ ಸಂಪೂರ್ಣ ಜಖಂ ಗೊಂಡಿವೆ. 

ಮತ್ತೊಂದೆಡೆ ಗ್ಲಾಸ್‌ಹೌಸ್‌ನಲ್ಲೂ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಕಾಂಪೌಂಡ್ ಗೋಡೆ ಜಖಂ ಗೊಂಡಿತ್ತು. ಧಾರಾಕಾರ ಮಳೆಗೆ ಮನೆಯ ಛಾವಣಿ ಕುಸಿದಿದ್ದು, ಮೂರು ಮನೆಗಳಲ್ಲಿ ನೀರು ನುಗ್ಗಿ ಅನಾಹುತ ಸಂಭವಿಸಿದೆ. ನಗರದ ಹಲವೆಡೆ ವಿದ್ಯುತ್(Electricity) ಸಂಪರ್ಕ ಕಡಿತಗೊಂಡಿತ್ತು. ಅಲ್ಲದೇ ಅಕಾಲಿಕ ಮಳೆಗೆ ಜನರು ಆತಂಕಗೊಂಡಿದ್ದರು.