ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ನಾನಾ ಭಾಗಗಳಿಂದ ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್ಸುಗಳ ಸೇವೆಯನ್ನು ಸ್ಥಗಿತ 

ಬೆಳಗಾವಿ/ಬಾಗಲಕೋಟೆ(ನ.26): ಮಹಾರಾಷ್ಟ್ರದ ವಿವಿಧೆಡೆ ಕರ್ನಾಟಕದ ಬಸ್ಸುಗಳಿಗೆ ಮಸಿ ಬಳೆಯುವ ಪ್ರಯತ್ನ ನಡೆದಿರುವುದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ನಾನಾ ಭಾಗಗಳಿಂದ ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್ಸುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ನಾನಾ ಭಾಗಗಳಿಂದ ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್ಸುಗಳ ಸೇವೆಯನ್ನು ಕರ್ನಾಟಕ ಗಡಿಭಾಗದವರೆಗೆ ಮಾತ್ರ ಸಂಚರಿಸಿವೆ. ಗಡಿ ವಿವಾದದ ಹಿನ್ನೆಲೆಯಲ್ಲಿ ಕೆಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬಾಗಲಕೋಟೆ ಜಿಲ್ಲೆಯ ಸಾರಿಗೆ ಇಲಾಖೆಯ ಅಧಿಕಾರಿಗಳು, ನಾನಾ ಘಟಕಗಳಿಂದ ಮರಾರಾಷ್ಟ್ರದ ವಿವಿಧ ಭಾಗಗಳಿಗೆ ತೆರಳುತ್ತಿದ್ದ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ರಾಜ್ಯದ ಗಡಿಯೊಳಗೆ ಮಾತ್ರ ಸಂಚರಿಸುವಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಗಡಿ ವಿವಾದ: ಮರಾಠಿಗರ ಪುಂಡಾಟಕ್ಕೆ ಕನ್ನಡಿಗರ ಆಕ್ರೋಶ..!

ಈ ಕುರಿತು ಕನ್ನಡಪ್ರಭದೊಂದಿಗೆ ಬಾಗಲಕೋಟೆಯ ವಿಭಾಗೀಯ ಸಾರಿಗೆ ಸಂಚಾರಿ ಅಧಿಕಾರಿ ಪಿ.ವಿ. ಮೇತ್ರಿ ಮಾತನಾಡಿ, ಪ್ರತಿನಿತ್ಯ ಮಹಾರಾಷ್ಟ್ರದ ಸಾಂಗ್ಲಿ ಮೀರಜ್‌, ಕೊಲ್ಲಾಪುರ, ಇಚಲಕರಂಜಿ, ನಿಪ್ಪಾಣಿ ಸೇರಿದಂತೆ ಜಿಲ್ಲೆಯಿಂದ 44 ಬಸ್ಸುಗಳ ಸಂಚಾರ ಇರುತ್ತಿತ್ತು. ಇದೀಗ ಗಡಿ ವಿವಾದದ ಘಟನೆಯಿಂದ ನಮ್ಮ ಸಾರಿಗೆ ವಾಹನಗಳು ಗಡಿ ಭಾಗದ ಕಾಗವಾಡದವರೆಗೆ ಮಾತ್ರ ಸಂಚಾರವನ್ನು ಆರಂಭಿಸಿವೆ. ಅಲ್ಲದೆ, ಶುಕ್ರವಾರ ಮಹಾರಾಷ್ಟ್ರದ ಯಾವುದೇ ಭಾಗಗಳಿಗೆ ಬಸ್ಸುಗಳ ಓಡಾಟ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಮಿರಜ್ ಮಾರ್ಗವಾಗಿ ಸಂಚರಿಸುವ ಕರ್ನಾಟಕ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ಬಸ್‌ ಮೇಲೆ ಕಲ್ಲು ತೂರಾಟ ಹಿನ್ನೆಲೆಯಲ್ಲೊ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾಗವಾಡ ಗಡಿ ಮಾರ್ಗವಾಗಿ ಮಹಾರಾಷ್ಟ್ರ ಪ್ರವೇಶಿಸುವ ರಾಜ್ಯ ಸರ್ಕಾರಿ ಬಸ್‌ಗಳ ಸಂಚಾರ ಬಂದ್ ಮಾಡಲಾಗಿದೆ.