ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದರೂ ಕನ್ನಡ ಮಾತನಾಡಲು ಅಸಹ್ಯ ಪಟ್ಟುಕೊಳ್ಳುವ, ಕನ್ನಡ ಕಲಿಯಲು ಹಿಂಜರಿಯುತ್ತಿರುವವರ ನಡುವೆ ವಿಮಾನದಲ್ಲಿ ಕನ್ನಡೇತರ ಪೈಲೆಟ್ ಒಬ್ಬರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಬೇರೆ ರಾಜ್ಯಗಳ ಜನರು ಬೆಂಗಳೂರಿಗೆ ಬಂದರೆ, ಕರ್ನಾಟಕದಲ್ಲಿ ಜನರಾಡುವ ಭಾಷೆ ಯಾವುದು ಎಂದು ಅರಿತುಕೊಳ್ಳುವುದೇ ಕಷ್ಟ ಎನ್ನುವ ಸ್ಥಿತಿ ಇಲ್ಲಿದೆ. ಕರುನಾಡಿನ ಮಣ್ಣಲ್ಲೇ ಹುಟ್ಟಿ, ಬೆಳೆದು, ಇಲ್ಲಿಯ ಅನ್ನವನ್ನೇ ತಿನ್ನುತ್ತಿದ್ದರೂ 'ಕನಡ್ ಗೊತಿಲ್' ಎಂದು ಸ್ಟೈಲ್ ಆಗಿ ಹೇಳುವವರಿಗೆ ಡಿಮಾಂಡ್ ಹೆಚ್ಚಾಗಿದೆ. ಕನ್ನಡ ಗೊತ್ತಿಲ್ಲ ಎನ್ನುವುದನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುವ ಊರು ಎಂದರೆ ಅದು ಬೆಂಗಳೂರು. ತಮ್ಮ ಮಕ್ಕಳಿಗೆ ಇಂಗ್ಲಿಷ್ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಹಗಲಿರುಳೂ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಕನ್ನಡದವರೇ ಆದ ಹಲವು ಅಪ್ಪ-ಅಮ್ಮಂದಿರು ಕೂಡ ತಮ್ಮ ಮಕ್ಕಳಿಗೆ ಕನ್ನಡ ಬರುವುದಿಲ್ಲ ಎಂದು ಅಕ್ಕ ಪಕ್ಕದವರ ಜೊತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಂಗ್ಲಿಷ್ ಬರದಿದ್ದರೆ ಅವರಿಗೆ ನಾಚಿಕೆ, ಕನ್ನಡ ಬರದಿದ್ದರೆ ಅದುವೇ ಹೆಮ್ಮೆ!
ಇನ್ನು ಇಂದಿನ ಹಲವು ಹೆಣ್ಣುಮಕ್ಕಳ ಬಗ್ಗೆ ಹೇಳುವುದೇ ಬೇಡ ಬಿಡಿ. ನೇರವಾಗಿ ಇಂಗ್ಲಿಷ್ ನಾಡಿನಿಂದಲೇ ಇಳಿದು ಬಂದವರ ರೀತಿ ವರ್ತಿಸುತ್ತಾರೆ. ಅವರಾಡುವ ಇಂಗ್ಲಿಷ್ ಕೂಡ ದೇವರಿಗೇ ಪ್ರೀತಿ ಆದರೂ, ಕನ್ನಡ ಮಾತ್ರ ಅವರ ಬಾಯಲ್ಲಿ ಬರುವುದೇ ಇಲ್ಲ. ಕಮ್ ಯಾ, ಗೋ ಯಾ ಎನ್ನುವ ಇಂಗ್ಲಿಷ್ನಿಂದ ಮಾತನಾಡುತ್ತಾರೆಯೇ ವಿನಾ ಕನ್ನಡ ಮಾತನಾಡಿ ಎಂದರೆ ಮುಖ ಕಿವುಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸೇರಿದಂತೆ ಕೆಲವು ಕಡೆ ಕನ್ನಡ ಮಾತನಾಡದೇ ಎದುರಾಡುತ್ತಿದ್ದವರ ಪರಿಸ್ಥಿತಿ ಏನಾಗಿದೆ ಎನ್ನುವ ವಿಡಿಯೋಗಳು ಕೂಡ ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ಇವರ ಪೈಕಿ ಹಲವರು ಬೇರೆ ರಾಜ್ಯದವರು ಎನ್ನುವುದು ನಿಜವಾದರೂ, ಕರ್ನಾಟಕದಲ್ಲಿಯೇ ಹುಟ್ಟಿದವರ ಸ್ಥಿತಿ ಕೂಡ ಭಿನ್ನವಾಗಿಲ್ಲ ಎನ್ನುವುದೇ ವಿಷಾದನೀಯ ಸಂಗತಿಯಾಗಿದೆ.
ಇದನ್ನೂ ಓದಿ: ಮೂರ್ತಿ ಪೂಜೆಯಲ್ಲಿ ಪಾಲ್ಗೊಳ್ಳೋದು ಶಿರ್ಕ್, ಇದು ಕಟ್ಟಾಜ್ಞೆ: ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮಾತು ಕೇಳಿ...
ಕನ್ನಡದಲ್ಲಿ ಕನ್ನಡೇತರ ಪೈಲೆಟ್ರಿಂದ ಸ್ವಾಗತ
ಇಲ್ಲಿ ಅಚ್ಚ ಕನ್ನಡದಲ್ಲಿ ಯಾರಾದರೂ ಮಾತನಾಡುತ್ತಾರೆ ಎಂದರೆ ಅವರನ್ನು ವಿಚಿತ್ರವಾಗಿ ಅಡಿಯಿಂದ ಮುಡಿಯವರೆಗೆ ನೋಡುವ ಈ ಕಾಲಘಟ್ಟದಲ್ಲಿ ವಿಮಾನದಲ್ಲಿ ಕನ್ನಡೇತರ ಪೈಲೆಟ್ ಒಬ್ಬರು ಇತಿಹಾಸವನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಬಾರದ ಪೈಲೆಟ್ ಒಬ್ಬರು ಕನ್ನಡ ಕಲಿತು ವಿಮಾನದಲ್ಲಿನ ಪ್ರಯಾಣಿಕರಿಗೆ ಕನ್ನಡದಲ್ಲಿಯೇ ಸ್ವಾಗತ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದು ನಿಜವಾದ ಕನ್ನಡಿಗರ ಹರ್ಷಕ್ಕೆ ಕಾರಣವಾಗಿದೆ. ಅವರ ಕನ್ನಡ ಕೇಳಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗರು ಅತ್ಯಂತ ಖುಷಿಯಿಂದ ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಇಂಡಿಗೋ ವಿಮಾನದ ಪೈಲೆಟ್ ಜಸ್ವಂತ್ ಅವರು ಕನ್ನಡದಲ್ಲಿಯೇ ಘೋಷಣೆ ಮಾಡಿದ್ದಾರೆ. ಇಂಡಿಗೋ ವಿಮಾನವನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ಈ ವಿಮಾನವು ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದೆ. ಎರಡೂ ಕಡೆಯಲ್ಲಿ ಕನ್ನಡವೇ ಆಗಿರುವ ಕಾರಣ, ಕನ್ನಡದಲ್ಲಿಯೇ ಕೆಲವೊಂದು ಮಾತುಗಳನ್ನು ಕಲಿತಿದ್ದೇನೆ, ತಪ್ಪಿದ್ದರೆ ಕ್ಷಮಿಸಿ ಎನ್ನುತ್ತಲೇ ಮುದ್ದಾದ ಕನ್ನಡದಿಂದ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ. 25 ಸಾವಿರ ಅಡಿ ಎತ್ತರದಲ್ಲಿ ನಮ್ಮ ವಿಮಾನ ಇದ್ದು, ಗಂಟೆಗೆ 900 ಕಿಲೋ ಮೀಟರ್ ವೇಗದಲ್ಲಿ ಈ ವಿಮಾನ ಹಾರಾಡುತ್ತಿದೆ. ಎಲ್ಲರಿಗೂ ಸ್ವಾಗತ, ಕನ್ನಡದಲ್ಲಿ ಮಾತನಾಡಲು ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. ಅದರ ವಿಡಿಯೋಗೆ ಥರಹೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದ್ದು, ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಬಾರದವರು ಇದನ್ನೊಮ್ಮೆ ನೋಡಬೇಕು ಎನ್ನುತ್ತಿದ್ದಾರೆ.
ಇದನ್ನೂ ಓದಿ: ಬಾನು ಮುಷ್ತಾಕ್ Dasara ಉದ್ಘಾಟನೆ: ಸ್ಪಷ್ಟನೆ ಕೇಳಿದ ಯದುವೀರ- ರಾಣಿ ಪ್ರಮೋದಾ ದೇವಿ ಏನಂದ್ರು?
