Asianet Suvarna News Asianet Suvarna News

ಯಾರಿಗೂ ಆಹಾರ ಕೊರತೆ ಆಗಬಾರದು: ಸಚಿವ ಮುನಿಯಪ್ಪ

ಹೋಬಳಿಯ ಮಂಡಿಬೆಲೆ ಗ್ರಾಮದಲ್ಲಿ ನಡೆಯಲಿರುವ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸಚಿವ ಕೆ.ಎಚ್‌.ಮುನಿಯಪ್ಪ, ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಆರ್‌.ಕೇಶವ ಅವರು ಬಡವರ ಮನೆಗಳಿಗೆ ಆಹಾರದ ದಿನಸಿ ಕಿಟ್‌ಗಳನ್ನು ವಿತರಿಸಿದರು.

No one should be short of food Says Minister KH Muniyappa gvd
Author
First Published Jul 30, 2023, 8:43 PM IST

ವಿಜಯಪುರ (ಜು.30): ಹೋಬಳಿಯ ಮಂಡಿಬೆಲೆ ಗ್ರಾಮದಲ್ಲಿ ನಡೆಯಲಿರುವ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸಚಿವ ಕೆ.ಎಚ್‌.ಮುನಿಯಪ್ಪ, ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಆರ್‌.ಕೇಶವ ಅವರು ಬಡವರ ಮನೆಗಳಿಗೆ ಆಹಾರದ ದಿನಸಿ ಕಿಟ್‌ಗಳನ್ನು ವಿತರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಹಳ್ಳಿಗಳಲ್ಲಿ ದೇವಾಲಯಗಳ ನಿರ್ಮಾಣದಿಂದ ಶಾಂತಿ ಸೌಹಾರ್ದತೆ, ಸಾಮರಸ್ಯ ಬೆಳೆಯುತ್ತದೆ. ಧಾರ್ಮಿಕ ಚಟುವಟಿಕೆಗಳಿಂದ ಗ್ರಾಮಗಳಲ್ಲಿ ನೆಮ್ಮದಿ ದೊರೆಯುತ್ತದೆ. 

ಯಾರೊಬ್ಬರೂ ಆಹಾರ ಕೊರತೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ನಾವು ನ್ಯಾಯಬೆಲೆ ಅಂಗಡಿಗಳ ಮೂಲಕ ತಲಾ 5 ಕೆ.ಜಿ.ಅಕ್ಕಿ ಜೊತೆಗೆ, ಒಬ್ಬರಿಗೆ 170 ರುಪಾಯಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದೇವೆ. ಜಾತ್ರಾ ಮಹೋತ್ಸವದ ಅಂಗವಾಗಿ ಬಡವರಿಗಾಗಿ ಆಹಾರದ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನೂ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಆರ್‌.ಕೇಶವ ಮಾತನಾಡಿ, 2019 ರಲ್ಲಿ ಕೋವಿಡ್‌ ಆರಂಭವಾದಾಗಿನಿಂದಲೂ ಹಳ್ಳಿಯಲ್ಲಿ ಪ್ರತಿವರ್ಷ ದಿನಸಿ ಕಿಟ್‌ಗಳನ್ನು ವೈದ್ಯನಾಥೇಶ್ವರಸ್ವಾಮಿ ದೇವರ ಹೆಸರಿನಲ್ಲಿ ವಿತರಣೆ ಮಾಡುತ್ತಿದ್ದೇವೆ. 

ಅಕ್ಕಿ ಪಡೆಯದ ಬಿಪಿಎಲ್‌ ಕಾರ್ಡುದಾರರಿಗೆ ಕುತ್ತು: ಸಚಿವ ಮುನಿಯಪ್ಪ ಹೇಳಿದ್ದೇನು?

ಗ್ರಾಮದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿದ್ದೇವೆ. ಬಡವರು, ಶ್ರೀಮಂತರು ಎನ್ನುವ ಬೇಧಭಾವವನ್ನು ಬದಿಗಿಟ್ಟು ಎಲ್ಲರೂ ಸಾಮರಸ್ಯದಿಂದ ಸಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು. ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ರಾಜಣ್ಣ, ರಾಮಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ದೇವರಾಜಪ್ಪ, ಗಡ್ಡದನಾಯಕನಹಳ್ಳಿ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜಪ್ಪ, ಯಲಿಯೂರು ವೀರಣ್ಣ, ಮುನಿಆಂಜಿನಪ್ಪ, ಕೆಂಪಣ್ಣ, ಬೈರಾಪುರ ರಾಜಣ್ಣ ಮುಂತಾದವರು ಹಾಜರಿದ್ದರು. ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬಡವರಿಗೆ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು, ದಿನಸಿ ಕಿಟ್‌ ಗಳನ್ನು ವಿತರಣೆ ಮಾಡಿದರು.

ಕಾನೂನು ಸಲಹೆ ಪಡೆದು ಸದಾಶಿವ ವರದಿ ಜಾರಿಗೆ ಯತ್ನ: ಕಾನೂನು ಸಲಹೆ ಪಡೆದು ಸದಾಶಿವ ಆಯೋಗದ ವರದಿ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌ ಮುನಿಯಪ್ಪ ಹೇಳಿದರು. ನಗರದ ತುಳಸಿ ನಾರಾಯಣರಾವ್‌ ಕಲ್ಯಾಣ ಮಂಟಪದಲ್ಲಿ ತಾಲೂಕು ಮಾದಿಗ ಸಮಾಜದ ವತಿಯಿಂದ ಶನಿವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾವೀಗ ಕೊಟ್ಟಭರವಸೆಗಳನ್ನು ಈಡೇರಿಸುತ್ತಾ ನಿಮ್ಮ ನಂಬಿಕೆಗೆ ಅರ್ಹರಾಗುತ್ತಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ಬದಲಿಗೆ ಹಣ ಹಾಕಿದ್ದೇವೆ. 3 ಕೋಟಿ 40 ಲಕ್ಷ ವ್ಯಕ್ತಿಗಳಿಗೆ ಅಕ್ಕಿಯ ಹಣ ಸಂದಾಯ ಮಾಡಿದ್ದೇವೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸುಮಾರು 3 ಲಕ್ಷ ಕಾರ್ಡ್‌ಗಳು ಪೆಂಡಿಂಗ್‌ ಇವೆ. ಅವರಿಗೂ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ಇಡೀ ದೇಶದಲ್ಲಿ ಇಷ್ಟುದೊಡ್ಡ ಯೋಜನೆಗಳ ಗ್ಯಾರಂಟಿಗಳನ್ನು ಒದಗಿಸಿದ್ದು ಕರ್ನಾಟಕ ಮಾತ್ರ. ಅದೂ ಕಾಂಗ್ರೆಸ್‌ ಸರ್ಕಾರದಿಂದ ಸಾಧ್ಯವಾಗಿದೆ. ನಾವು ಬಡವರ ಕೆಲಸ ಮಾಡಲು ಎಂದೂ ಹಿಂಜರಿಯುವುದಿಲ್ಲ. ಐದು ಗ್ಯಾರಂಟಿ ನಿಮ್ಮನ್ನು ತಲುಪಲಿವೆ. ಸಚಿವ ಸುಧಾಕರ್‌ ಅವರಿಂದ ಜಿಲ್ಲೆಯಲ್ಲೂ ಗ್ಯಾರಂಟಿ ಯೋಜನೆಗಳು ಪ್ರಗತಿ ಸಾಧಿಸಿವೆ. ಆತ ಜಾತಿಬಲದ ನಾಯಕನಲ್ಲ. ಸೇವಾ ಮನೋಭಾವದ ನಾಯಕ. ಒಗ್ಗಟ್ಟಿದ್ದರೆ ಮಾತ್ರ ಜನಾಂಗಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಕೇಂದ್ರ ಸರ್ಕಾರ ಬಡವರ ಹೊಟ್ಟೆ ನೋಡಲಿಲ್ಲ: ಸಚಿವ ಮುನಿಯಪ್ಪ

ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪುರ ಮಾತನಾಡಿ, ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಆ ಸಮಾಜ ಮೊದಲು ಕೂಡಬೇಕು, ಒಂದಾಗಬೇಕು, ಒಗ್ಗಟ್ಟಾಗಬೇಕು. ಅಂಬೇಡ್ಕರ್‌ ಅವರು ನಮಗೆಲ್ಲ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ನಿಮಗೆಲ್ಲಾ ಮತ ನೀಡುವ ಶಕ್ತಿ ಕೊಟ್ಟು ನಮ್ಮನ್ನೆಲ್ಲಾ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದಾರೆ. ದುಡ್ದು ಕೊಡುವವರನ್ನು ಬಿಟ್ಟು ನಮ್ಮ ಕೆಲಸ ಮಾಡಿಕೊಡುವವರನ್ನು ಆರಿಸಿಕೊಳ್ಳಬೇಕು. ಆ ಕೆಲಸವನ್ನು ಈ ಬಾರಿ ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂದರು. ಅಕ್ಕಿ ಕೊಡುವುದನ್ನು ವಿರೋಧಿಸಿದವರಿಗೆ ಹಸಿವಿನ ನೋವಿನ ಅರಿವಿರಲಾರದು. ಅವರೆಲ್ಲಾ ಹೊಟ್ಟೆತುಂಬಿದವರು. ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್‌ ಸರ್ಕಾರ ಒಂದು ಹೊಸ ಶಕ್ತಿ ತುಂಬಿದೆ. ಜೀವನವೆಲ್ಲಾ ಸೇವಕರಂತೆಯೇ ಬಂದ ನಮ್ಮ ಸಮಾಜ ಮೊದಲು ರಾಜಕೀಯವಾಗಿ ಮೇಲೇರಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.

Follow Us:
Download App:
  • android
  • ios