Asianet Suvarna News Asianet Suvarna News

ಕಾರವಾರ: ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ದುಡ್ಡಿಲ್ಲ..!

ಜಿಲ್ಲಾಧಿಕಾರಿ ಸರ್ಕಾರಿ ಕರ್ತವ್ಯಕ್ಕೆ ಬಳಕೆ ಮಾಡುವ ವಾಹನದ ಇಂಧನಕ್ಕೆ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಹಾಲಿ ಬಳಕೆ ಮಾಡುತ್ತಿರುವ ಕಾರು ಸರ್ವಿಸ್‌ಗಾಗಿ ಅಥವಾ ದುರಸ್ತಿಗಾಗಿ ತೆಗೆದುಕೊಂಡು ಹೋದಲ್ಲಿ ಜಿಲ್ಲೆಗೆ ಗಣ್ಯ ವ್ಯಕ್ತಿಗಳು ಆಗಮಿಸಿದಾಗ ಬಳಕೆ ಮಾಡುವ ವಿಐಪಿ ಕಾರನ್ನು ಡಿಸಿ ಬಳಸುವಂತಾಗಿದೆ.

No Money for the Fuel of the Uttara Kannada District Collector's Car in Karwar grg
Author
First Published Aug 19, 2023, 11:30 PM IST

ಜಿ.ಡಿ. ಹೆಗಡೆ

ಕಾರವಾರ(ಆ.19): ಒಂದೆಡೆ ಜಿಲ್ಲಾಧಿಕಾರಿ ಕಾರಿಗೆ ಇಂಧನವಿಲ್ಲದೇ ನಿಂತಿದ್ದರೆ, ಮತ್ತೊಂದೆಡೆ ಸರ್ಕಾರದ ಸೌಲಭ್ಯ ಗ್ರಾಮೀಣ ಭಾಗದ ಜನತೆಗೆ ತಲುಪಿಸಬೇಕಿದ್ದ ಗ್ರಾಮ ಸಹಾಯಕರು ಸರ್ಕಾರಿ ವಾಹನಕ್ಕೆ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅಚ್ಚರಿಯ ವಿದ್ಯಮಾನವಾಗಿದೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಸಂಚಾರಕ್ಕಾಗಿ ಎರಡು ಸರ್ಕಾರಿ ವಾಹನ ನೀಡಲಾಗಿದ್ದು, ಆದರೆ ಒಂದು ವಾಹನಕ್ಕೆ ಇಂಧನ ಹಾಕಲು ಅನುದಾನವಿಲ್ಲದೇ ಶೆಡ್‌ ಸೇರಿದೆ. ಟೊಯೋಟಾ ಕಂಪನಿಯ ಇನ್ನೋವಾ ಕೆಎ-30, ಜಿ3456 ಹಾಗೂ ಕೆಎ-30, ಜಿ 7777 ವಾಹನವನ್ನು ಮೊದಲು ನೀಡಲಾಗಿತ್ತು. ವರ್ಷದ ಹಿಂದೆ ಟೊಯೋಟಾ ಇನ್ನೋವಾ ಕ್ರಿಸ್ಟಾಕೆಎ-30, ಜಿಎ 7777 ಹೊಸ ವಾಹನ ನೀಡಲಾಗಿತ್ತು. ಹೀಗಾಗಿ ಅಪರ ಜಿಲ್ಲಾಧಿಕಾರಿ ಬಳಕೆಗೆ ಇದ್ದ ಸಫಾರಿ ಕಾರನ್ನು ಬದಲಿಸಿ ಡಿಸಿ ಬಳಕೆ ಮಾಡುತ್ತಿದ್ದ ಹಳೆಯ ಇನ್ನೋವಾ ಕೆಎ-30, ಜಿ 7777 ವಾಹನವನ್ನು ಎಡಿಸಿ ಓಡಾಟಕ್ಕೆ ನೀಡಲಾಗಿದೆ. ಆದರೆ ಮತ್ತೊಂದು ಇನ್ನೋವಾ ಕೆಎ 30, ಜಿ-3456 ವಾಹನ ಡಿಸಿ ಬಳಕೆಗಿದ್ದು, ಇದಕ್ಕೆ ಇಂಧನ ಹಾಕಲು ಅನುದಾನ ಇಲ್ಲದೆ ಕಳೆದ 1 ವರ್ಷದಿಂದ ಡಿಸಿ ಗೃಹ ಕಚೇರಿಯ ಶೆಡ್‌ನಲ್ಲಿ ಇರಿಸಲಾಗಿದೆ. ಹಾಲಿ ಹೊಸ ಇನ್ನೋವಾ ಕ್ರಿಸ್ಟಾ ಒಂದು ಕಾರನ್ನು ಬಳಕೆ ಮಾಡಲಾಗುತ್ತಿದೆ.

ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಅಂತಹ ಪಾರ್ಟಿಗೆ ಹಾರೋ ವ್ಯಕ್ತಿ ಹೆಬ್ಬಾರ್‌: ಭೀಮಣ್ಣ ನಾಯ್ಕ್ ಆಕ್ರೋಶ

ಜಿಲ್ಲಾಧಿಕಾರಿ ಸರ್ಕಾರಿ ಕರ್ತವ್ಯಕ್ಕೆ ಬಳಕೆ ಮಾಡುವ ವಾಹನದ ಇಂಧನಕ್ಕೆ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಹಾಲಿ ಬಳಕೆ ಮಾಡುತ್ತಿರುವ ಕಾರು ಸರ್ವಿಸ್‌ಗಾಗಿ ಅಥವಾ ದುರಸ್ತಿಗಾಗಿ ತೆಗೆದುಕೊಂಡು ಹೋದಲ್ಲಿ ಜಿಲ್ಲೆಗೆ ಗಣ್ಯ ವ್ಯಕ್ತಿಗಳು ಆಗಮಿಸಿದಾಗ ಬಳಕೆ ಮಾಡುವ ವಿಐಪಿ ಕಾರನ್ನು ಡಿಸಿ ಬಳಸುವಂತಾಗಿದೆ.

ಕರಾವಳಿ ಭಾಗದ ವಾತಾವರಣದಲ್ಲಿ ಉಪ್ಪಿನ ಅಂಶ ಇರುವುದರಿಂದ ವಾಹನಗಳನ್ನು ಬಳಕೆ ಮಾಡದೇ ಹಾಗೆ ನಿಲ್ಲಿಸಿಟ್ಟರೆ ಬಹುಬೇಗನೆ ವಾಹನದ ಬಿಡಿಭಾಗ ತುಕ್ಕು ಹಿಡಿಯಲಿದೆ. ತುರ್ತು ಸಂದರ್ಭದಲ್ಲಿ ಒಂದು ವಾಹನ ಬಳಕೆಗೆ ಸಿಗದೇ ಇದ್ದಲ್ಲಿ ಮತ್ತೊಂದು ವಾಹನ ಬಳಕೆಗೆ ಅನುಕೂಲವಾಗುವಂತೆ ಮತ್ತು ಸರ್ಕಾರಿ ಕಾರು ತುಕ್ಕು ಹಿಡಿದು ಹಾಳಾಗದಂತೆ ಆಗಬೇಕಿದೆ.

ಕಾಯಂ ಚಾಲಕರ ಕೊರತೆ:

ಕಾಯಂ ಚಾಲಕರೇ ಇಲ್ಲದೆ ಗ್ರಾಮ ಸಹಾಯಕರನ್ನು ಸರ್ಕಾರಿ ವಾಹನಕ್ಕೆ ಚಾಲಕರನ್ನಾಗಿ ಮಾಡಿರುವುದು ಅಚ್ಚರಿಯ ವಿದ್ಯಮಾನ. ಡಿಸಿ ಬಳಕೆ ಮಾಡುವ ಸರ್ಕಾರಿ ವಾಹನಕ್ಕೆ ಇಬ್ಬರು ಚಾಲಕರಿದ್ದು, ಇವರಲ್ಲಿ ಒಬ್ಬರು ಗ್ರಾಮ ಸಹಾಯಕರಾಗಿದ್ದಾರೆ. ಒಬ್ಬ ನಿಯೋಜಿತ ಚಾಲಕನಾಗಿದ್ದಾನೆ. ಕಾರವಾರ ಉಪ ವಿಭಾಗಾಧಿಕಾರಿ, ಕಾರವಾರ ತಹಸೀಲ್ದಾರ, ಅಂಕೋಲಾ ತಹಸೀಲ್ದಾರ, ಭಟ್ಕಳ ಎಸಿ ಮತ್ತು ತಹಸೀಲ್ದಾರರ ಸರ್ಕಾರಿ ವಾಹನ ಚಾಲಕರು ಗ್ರಾಮ ಸಹಾಯಕರಾಗಿದ್ದಾರೆ.

ಉತ್ತರ ಕನ್ನಡ: ಕೈಕೊಟ್ಟ ಮಳೆ, ಬತ್ತದ ಬೆಳೆ ಇಳಿಮುಖ, ಆತಂಕದಲ್ಲಿ ಅನ್ನದಾತ..!

ಕುಮಟಾ ಎಸಿ ಹಾಗೂ ತಹಸೀಲ್ದಾರ್‌ ವಾಹನಕ್ಕೆ ಹೊರಗುತ್ತಿಗೆ ಆಧಾರದಲ್ಲಿ, ಜೋಯಿಡಾ ತಹಸೀಲ್ದಾರ್‌ ವಾಹನಕ್ಕೆ ಗ್ರಾಮ ಸಹಾಯಕ, ಹಳಿಯಾಳ ತಹಸೀಲ್ದಾರ್‌Ü ಚಾಲಕ ಹೊರಗುತ್ತಿಗೆ ಮೇಲೆ ನೇಮಕವಾಗಿದ್ದರೆ, ದಾಂಡೇಲಿ ತಹಸೀಲ್ದಾರ್‌ ಚಾಲಕ ಹುದ್ದೆ ಕಾಯಂ ಇದೆ. ಯಲ್ಲಾಪುರ ತಹಸೀಲ್ದಾರ್‌ ಚಾಲಕ ಗ್ರಾಮ ಸಹಾಯಕ, ಶಿರಸಿ ಎಸಿ ಚಾಲಕ ಹೊರಗುತ್ತಿಗೆ, ಶಿರಸಿ ಹಾಗೂ ಸಿದ್ದಾಪುರ ತಹಸೀಲ್ದಾರ್‌ ಚಾಲಕ ಗ್ರಾಮ ಸಹಾಯಕರಾಗಿದ್ದು, ಮುಂಡಗೋಡ ತಹಸೀಲ್ದಾರ್‌ ಸರ್ಕಾರಿ ವಾಹನಕ್ಕೆ ಹೊರಗುತ್ತಿಗೆ ಮೇಲೆ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಗ್ರಾಮ ಸಹಾಯಕರ ಹುದ್ದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಮುಖವಾಗಿದ್ದು, ಕಂದಾಯ ವಸೂಲಿ, ಜನನ-ಮರಣ ನೋಂದಣಿ, ಪ್ರಕೃತಿ ವಿಕೋಪ ನಿರ್ವಹಣೆ, ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಜನತೆಗೆ ತಲುಪಿಸುವುದು ಇವರ ಪ್ರಮುಖ ಕೆಲಸವಾಗಿದೆ. ಇಂತಹ ಹುದ್ದೆಯಲ್ಲಿ ಇರುವವರನ್ನು ಮೂಲಕರ್ತವ್ಯದಿಂದ ಬಿಡುಗಡೆ ಮಾಡಿ ಬೇರೆಡೆ ನಿಯೋಜನೆ ಮಾಡುವುದರಿಂದ ಗ್ರಾಮೀಣ ಭಾಗದ ಜನತೆಗೆ ಸರ್ಕಾರದ ಸೌಲಭ್ಯ ಸಿಗದೇ ನಷ್ಟ ಉಂಟಾಗಲಿದೆ.

Follow Us:
Download App:
  • android
  • ios