Asianet Suvarna News Asianet Suvarna News

ಕೊಡಗು ಜಿಲ್ಲೆಯ ಅಂಗನವಾಡಿಗಳಿಗೆ ಕತ್ತಲೆ ಭಾಗ್ಯ..!

ಕೊಡಗು ಜಿಲ್ಲೆಯ 750 ಅಂಗನವಾಡಿಗಳಿಗೆ ಸರ್ಕಾರ ಕಲ್ಪಿಸಿರುವ ಗೃಹಜ್ಯೋತಿ ಅಲ್ಲ, ಬದಲಾಗಿ ಕತ್ತಲೆಯ ಭಾಗ್ಯ. ಹೌದು ಕೊಡಗು ಜಿಲ್ಲೆಯಲ್ಲಿ ಒಟ್ಟು 871 ಅಂಗನವಾಡಿಗಳಿವೆ. ಅವುಗಳ ಪೈಕಿ 750 ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಕಳೆದ ಏಳೆಂಟು ತಿಂಗಳಿನಿಂದ ನಿರಂತರವಾಗಿ ವಿದ್ಯುತ್ ಸಂಪರ್ಕತವನ್ನೇ ಕಡಿತ ಮಾಡಲಾಗುತ್ತಿದೆ. ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿರುವ ಅಂಗನವಾಡಿಗಳ ವಿದ್ಯುತ್ ಮೀಟರ್ ಬೋರ್ಡನ್ನೇ ಕೆಇಬಿ ಸಿಬ್ಬಂದಿ ಕಿತ್ತುಕೊಂಡು ಹೋಗಿದ್ದಾರೆ. 

No Electricity to Anganwadi Centers in Kodagu grg
Author
First Published Nov 4, 2023, 9:30 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು(ನ.04):  ಚುನಾವಣೆ ಗೆಲ್ಲುವುದಕ್ಕಾಗಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ವಿಪರ್ಯಾಸವೆಂದರೆ ಕೊಡಗು ಜಿಲ್ಲೆಯ ನೂರಾರು ಅಂಗನವಾಡಿಗಳಿಗೆ ಕತ್ತಲೆ ಭಾಗ್ಯ ನೀಡಿದೆ. ಹಾಗಾದರೆ ಏನಿದು ಕತ್ತಲೆ ಭಾಗ್ಯ ಅಂತೀರಾ ಅದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. 

ಮೀಟರ್ ಬೋರ್ಡ್ ಇದೆ ಅದರಲ್ಲಿ ಮೀಟರ್ ಇಲ್ಲ. ಇಲ್ಲಿ ಮೀಟರ್ ಬೋರ್ಡ್ ಇದೆ, ಪ್ಯೂಸ್ ಇಲ್ಲ. ಇಲ್ಲಿ ಎರಡು ಇವೆ ಆದರೆ ವೈಯರ್ ತುಂಡರಿಸಿ ವಿದ್ಯುತ್ ಸಂಪರ್ಕವನ್ನೇ ಕಡಿತ ಮಾಡಲಾಗಿದೆ. ಇದು ಯಾವುದೋ ಮನೆಗಳ ದುಸ್ಥಿತಿ ಅಲ್ಲ, ಬದಲಾಗಿ ಭವಿಷ್ಯದಲ್ಲಿ ದೇಶದ ಸಂಪತ್ತು ಆಗಬೇಕಾಗಿರುವ ಪುಟಾಣಿ ಮಕ್ಕಳು ಕಲಿಯುತ್ತಿರುವ ಅಂಗನವಾಡಿಗಳ ಪರಿಸ್ಥಿತಿ. 

ವೈಜ್ಞಾನಿಕ ಕೃಷಿಯಿಂದ ರೈತರ ಆರ್ಥಿಕತೆ ವೃದ್ಧಿ: ಚಲುವರಾಯಸ್ವಾಮಿಸ್ವಾಮಿ

ಹೌದು, ಇದು ಕೊಡಗು ಜಿಲ್ಲೆಯ 750 ಅಂಗನವಾಡಿಗಳಿಗೆ ಸರ್ಕಾರ ಕಲ್ಪಿಸಿರುವ ಗೃಹಜ್ಯೋತಿ ಅಲ್ಲ, ಬದಲಾಗಿ ಕತ್ತಲೆಯ ಭಾಗ್ಯ. ಹೌದು ಕೊಡಗು ಜಿಲ್ಲೆಯಲ್ಲಿ ಒಟ್ಟು 871 ಅಂಗನವಾಡಿಗಳಿವೆ. ಅವುಗಳ ಪೈಕಿ 750 ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಕಳೆದ ಏಳೆಂಟು ತಿಂಗಳಿನಿಂದ ನಿರಂತರವಾಗಿ ವಿದ್ಯುತ್ ಸಂಪರ್ಕತವನ್ನೇ ಕಡಿತ ಮಾಡಲಾಗುತ್ತಿದೆ. ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿರುವ ಅಂಗನವಾಡಿಗಳ ವಿದ್ಯುತ್ ಮೀಟರ್ ಬೋರ್ಡನ್ನೇ ಕೆಇಬಿ ಸಿಬ್ಬಂದಿ ಕಿತ್ತುಕೊಂಡು ಹೋಗಿದ್ದಾರೆ. 

ನಾಲ್ಕೈದು ತಿಂಗಳಿನಿಂದ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದ ಅಂಗನವಾಡಿಗಳ ಪ್ಯೂಸ್ ಕಿತ್ತುಕೊಂಡು ಹೋಗಿದ್ದಾರೆ. ಮೂರು ತಿಂಗಳಿನಿಂದ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡ ಅಂಗನವಾಡಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇದು ಭವಿಕ್ಷ್ಯದ ಬೌದ್ಧಿಕ ಸಂಪತ್ತು ಆಗಬೇಕಾಗಿರುವ ಪುಟಾಣಿ ಮಕ್ಕಳ ಬದುಕಿಗೆ ಕತ್ತಲೆ ಆವರಿಸುವಂತೆ ಆಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್ ರಮೇಶ್ ಟೀಕಿಸಿದ್ದಾರೆ. 

ಇನ್ನು ಕೆಲವು ಅಂಗನವಾಡಿಗಳ ಶಿಕ್ಷಕಿಯರು ತಮ್ಮ ಸ್ವಂತ ಹಣದಲ್ಲೋ, ಇಲ್ಲ ದಾನಿಗಳ ಸಹಾಯದಿಂದಲೋ ವಿದ್ಯುತ್ ಬಿಲ್ಲು ಪಾವತಿಸಿ ವಿದ್ಯುತ್ ಸಂಪರ್ಕ ಉಳಿಸಿಕೊಂಡಿದ್ದಾರೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯ್ಕಷ ಭಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಬಿಲ್ಲು ಪಾವತಿಸದೇ ಏಕೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು, ಜಿಲ್ಲೆಯ ಎಲ್ಲಾ ಸಿಡಿಪಿಒಗಳನ್ನು ಕೇಳಿದರೆ ಇಲಾಖೆಗೆ ಕಳೆದ ಏಳೆಂಟು ತಿಂಗಳುಗಳಿಂದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಇದರಿಂದ ಬಿದ್ಯುತ್ ಬಿಲ್ಲು ಪಾವತಿಸಲು ಹಣವಿಲ್ಲ ಎನ್ನುವ ಉತ್ತರವನ್ನೇನೋ ನೀಡುತ್ತಾರೆ. 

ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಸಚಿವ ಚೆಲುವರಾಯಸ್ವಾಮಿ ಹೇಳಿದ್ದಿಷ್ಟು

ಆದರೆ ಅಂಗನವಾಡಿಗಳ ಮೀಟರ್ ಬೋರ್ಡ್, ಪ್ಯೂಸ್ಗಳನ್ನು ಕಳೆದ ಏಳೆಂಟು  ತಿಂಗಳ ಹಿಂದೆಯೇ ಕೆಇಬಿ ಸಿಬ್ಬಂದಿ ಕಿತ್ತುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿಯೇ ಅಧಿಕಾರಿಗಳಿಗೆ ಇಲ್ಲ. ಡಿಡಿ ಅವರನ್ನು ಕೇಳಿದರೆ ನಾನು ಈಗಷ್ಟೇ ಜಿಲ್ಲೆಗೆ ಬಂದಿದ್ದೇನೆ. ಆದರೆ ಬಹುತೇಕ್ಕ ಎಲ್ಲಾ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಉತ್ತರಿಸುವ ಹಕ್ಕು ನನಗೆ ಇಲ್ಲ ಎಂದು ಹೇಳುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. 

ಇನ್ನು ಸಿಡಿಪಿಒಗಳು ವಿದ್ಯುತ್ ಸಂಪರ್ಕ ಕಡಿತವಾಗಿಲ್ಲ ಎಂದೆಲ್ಲಾ ಹೇಳುತ್ತಾರೆ. ನಿಜ ಸಂಗತಿ ಎಂದರೆ ವಿದ್ಯುತ್ ಕಡಿತಗೊಂಡು ಪುಟಾಣಿಗಳು ಅಂಗನವಾಡಿಗಳ ಕತ್ತಲೆ ಕೋಣೆಯಲ್ಲಿ ಕಾಲ ಕಳೆಯುವಂತೆ ಆಗಿದೆ. ಒಟ್ಟಿನಲ್ಲಿ ರಾಜ್ಯದ ಜನತೆಗೆ ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ಕೊಡುತ್ತಿದ್ದೇವೆ ಎನ್ನುತ್ತಿರುವ ಸರ್ಕಾರ ಕೊಡಗು ಜಿಲ್ಲೆಯ ಅಂಗನವಾಡಿಯ ಪುಟಾಣಿ ಮಕ್ಕಳಿಗೆ ಕತ್ತಲೆ ಭಾಗ್ಯ ಕಲ್ಪಿಸಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ವಿದ್ಯುತ್ ಸಂಪರ್ಕಕ್ಕೆ ಮುಂದಾಗುತ್ತಾ ಕಾದು ನೋಡಬೇಕಾಗಿದೆ.

Follow Us:
Download App:
  • android
  • ios