ಬೆಂಗಳೂರು : ಫ್ಲ್ಯಾಟ್ ದುರಂತಕ್ಕೆ ಕಾರಣ ಇನ್ನೂ ನಿಗೂಢ!
- ಬನ್ನೇರುಘಟ್ಟರಸ್ತೆಯಲ್ಲಿರುವ ದೇವರ ಚಿಕ್ಕನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ನಡೆದ ಅಗ್ನಿ ದುರಂತ
- ಅಗ್ನಿ ದುರಂತದ ಕಾರಣ ಇನ್ನು ನಿಗೂಢ
ಬೆಂಗಳೂರು (ಸೆ.23): ಬನ್ನೇರುಘಟ್ಟರಸ್ತೆಯಲ್ಲಿರುವ ದೇವರ ಚಿಕ್ಕನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ನಡೆದ ಅಗ್ನಿ ದುರಂತದ ಕಾರಣ ಇನ್ನು ನಿಗೂಢವಾಗಿಯೇ ಉಳಿದಿದೆ.
ಬುಧವಾರ ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ, ಬೆಸ್ಕಾಂ, ಇಂಡಿಯನ್ ಗ್ಯಾಸ್ ಸಂಸ್ಥೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ದುರಂತ ನಡೆದ ಫ್ಲ್ಯಾಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ಗ್ಯಾಸ್ ಪೈಪ್ ಸೋರಿಕೆ ಅಥವಾ ಸಿಲಿಂಡರ್ ಸ್ಫೋಟ ಹಾಗೂ ಶಾರ್ಟ್ ಸಕ್ರ್ಯೂಟ್ನಿಂದ ಘಟನೆ ಸಂಭವಿಸಿಲ್ಲ ಎಂಬುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 11ರ ಸುಮಾರಿಗೆ ಅಪಾರ್ಟ್ಮೆಂಟ್ಗೆ ಆಗಮಿಸಿದ ತನಿಖಾ ಸಂಸ್ಥೆಯ ಅಧಿಕಾರಿಗಳು 210 ಸಂಖ್ಯೆಯ ಫ್ಲ್ಯಾಟನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ಅಡುಗೆ ಮನೆ, ಬಾತ್ರೂಮ್, ಹಾಲ್, ಬೆಡ್ ರೂಮ್, ಜತೆಗೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಮೊಬೈಲ್ ಚಾರ್ಜಿಂಗ್ ಹಾಕುವ ಸ್ಥಳ ಸೇರಿ ಎಲ್ಲೆಡೆ ಶೋಧಿಸಿದ್ದಾರೆ. ಆದರೆ, ಎಲ್ಲಿಯೂ ಶಾರ್ಟ್ ಸಕ್ರ್ಯೂಟ್ನಿಂದ ಘಟನೆ ನಡೆದಿರುವ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಒಂದು ವೇಳೆ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದ್ದರೆ ಇಷ್ಟುದೊಡ್ಡ ಪ್ರಮಾಣದಲ್ಲಿ ಬೆಂಕಿ ಆಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇಂಡಿಯನ್ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಗ್ಯಾಸ್ ಸಿಲಿಂಡರ್, ಗ್ಯಾಸ್ ಪೈಪ್ಗಳನ್ನು ಪರಿಶೀಲಿಸಿದ್ದಾರೆ. ಎಲ್ಲಿಯೂ ಸೋರಿಕೆ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಮತ್ತೊಂದೆಡೆ ದುರಂತದ ಬಳಿಕ ಅಗ್ನಿಶಾಮಕ ಸಿಬ್ಬಂದಿಯೇ ಮನೆಯಲ್ಲಿದ್ದ ಎರಡು ಸಿಲಿಂಡರ್ಗಳನ್ನು ಹೊರಗಡೆ ತಂದಿದ್ದಾರೆ. ಇನ್ನು ಈ ಮನೆಯವರು ಒಳಗಡೆಯೇ ಸಿಲಿಂಡರ್ ಇಟ್ಟುಕೊಂಡಿದ್ದು, ಅಪಾರ್ಟ್ಮೆಂಟ್ನಲ್ಲಿ ಅಳವಡಿಸಿದ್ದ ಗ್ಯಾಸ್ ಪೈಪ್ ಬಳಕೆ ಮಾಡುತ್ತಿರಲಿಲ್ಲ ಎಂದು ಹೇಳಲಾಗಿದೆ.
ಅಪಾರ್ಟ್ಮೆಂಟ್ನಲ್ಲಿ ಅಗ್ನಿ ದುರಂತ, ಮುಂದುವರೆದ ಖಾಕಿ ಕಾರ್ಯಾಚರಣೆ
ಬೆಸ್ಕಾಂ ಅಧಿಕಾರಿಗಳು ಮನೆಯ ವಿದ್ಯುತ್ ಮೀಟರ್, ಪ್ರತಿಯೊಂದು ಸ್ವಿಚ್ ಬೋರ್ಡ್ಗಳನ್ನು ಪರಿಶೀಲಿಸಿದ್ದಾರೆ. ಜತೆಗೆ ಅಪಾರ್ಟ್ಮೆಂಟ್ ಆವರಣದಲ್ಲಿರುವ ಅಳವಡಿಸಿರುವ ಟ್ರಾನ್ಸ್ಫಾರ್ಮರ್ ಕೂಡ ಪರೀಕ್ಷಿಸಿದ್ದಾರೆ. ಒಂದೆರಡು ದಿನಗಳಲ್ಲಿ ವರದಿ ಬರಲಿದ್ದು, ಘಟನೆಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಕ್ಷಣೆಗೆ ತೊಡಕಾದ ಗ್ರಿಲ್
ಫ್ಲ್ಯಾಟ್ನ ಬಾಲ್ಕನಿಯಲ್ಲಿ ಕಬ್ಬಿಣದ ಗ್ರೀಲ್ ಅಳವಡಿಸಿದ್ದರಿಂದಲೇ ಮಹಿಳೆಯರು ಮೃತಪಟ್ಟಿದ್ದು, ಅಲ್ಲದೆ ರಕ್ಷಣಾ ಕಾರ್ಯಾಕ್ಕೂ ತೊಡಕಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಗ್ರೀಲ್ ಇಲ್ಲದಿದ್ದರೆ, ಬಾಲ್ಕನಿಯಲ್ಲಿದ್ದ ಒಬ್ಬ ಮಹಿಳೆಯನ್ನು ಏಣಿ ಮೂಲಕ ತೆರಳಿ ಬದುಕಿಸಬಹುದಿತ್ತು ಎಂದು ಅಗ್ನಿಶಾಮಕ ಸಿಬ್ಬಂದಿ ಅಭಿಪ್ರಾಯವ್ಯಕ್ತಪಡಿಸಿದರು.
ದುರ್ಘಟನೆಗೆ ಅಪಾರ್ಟ್ಮೆಂಟ್ ಮಾಲೀಕ ಮತ್ತು ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಹೊತ್ತಿಕೊಂಡಾಗ ಜನರನ್ನು ಎಚ್ಚರಿಸಲು ಸೈರನ್ ಇಲ್ಲ. ಬೆಂಕಿ ನಂದಿಸಲು ವಾಟರ್ ಲೈನ್ ವ್ಯವಸ್ಥೆ ಇಲ್ಲ. ಫೈರ್ ಎಕ್ಸ್ಟೆನ್ಶನ್ ನಿರ್ವಹಣೆ ಇಲ್ಲ ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಆರೋಪಿಸಿದ್ದಾರೆ.