8ರ ಬದಲು 11 ಮಂದಿ ಲಿಫ್ಟ್‌ ಏರಿದ್ದರಿಂದ ಕೇಬಲ್‌ ತುಂಡಾಗಿ ದುರ್ಘಟನೆ| ಧಾರವಾಡದ ಧ್ವಾರವಾಟಿಕಾ ಹೋಟೆಲ್‌ನಲ್ಲಿ ನಡೆದ ಘಟನೆ| ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ| 

ಧಾರವಾಡ(ಮಾ.10): ನಿಗದಿತ 8 ಮಂದಿಗೆ ಬದಲಾಗಿ 11 ಮಂದಿ ಬಳಸಿದ್ದರಿಂದ ಲಿಫ್ಟ್‌ನ ಕೇಬಲ್‌ ಆಕಸ್ಮಿಕವಾಗಿ ಕಟ್‌ ಆಗಿ ಕುಸಿದ ಪರಿಣಾಮ 9 ಮಂದಿಗೆ ತೀವ್ರ ಗಾಯಗಳಾದ ಘಟನೆ ಭಾನುವಾರ ತಡರಾತ್ರಿ ನಗರದ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿನ ಕೃಷಿ ವಿವಿ ಎದುರಿರುವ ಸಾಧೂನವರ ಎಸ್ಟೇಟ್‌ನಲ್ಲಿರುವ ಧ್ವಾರವಾಟಿಕಾ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಲಿಫ್ಟ್‌ನಲ್ಲಿದ್ದ 11 ಜನರ ಪೈಕಿ ಒಂಭತ್ತು ಜನರ ಕಾಲುಗಳಿಗೆ ಪೆಟ್ಟಾಗಿದೆ. ಇವರೆಲ್ಲರೂ ಬೇಲೂರು ಕೈಗಾರಿಕಾ ಪ್ರದೇಶದ ಸ್ಟಾರ್‌ ಕಂಪನಿಯೊಂದರ ಸಿಬ್ಬಂದಿಯಾಗಿದ್ದು, ರಾತ್ರಿ ಊಟ ಮುಗಿಸಿ ಮರಳುವಾಗ ಈ ಘಟನೆ ನಡೆದಿದೆ. ಅನಿಲ ರಾಮಸಿಂಗ್‌(34), ಆನಂದ ಪವಾರ್‌(32), ಕೆಂಪಯ್ಯ ಪುರಾಣಿಕ(34), ಆಂಟೋನಿ(44), ಬಸೀರ ಅಹಮ್ಮದ್‌ (22) ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ನಾಲ್ವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

8 ರ ಬದಲು 11 ಜನ

ಘಟನೆ ನಡೆದಿರುವ ಹೋಟೆಲ್‌ನಲ್ಲಿ ತಳಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳಿದ್ದು, ಕೊನೆ ಮಹಡಿಯಿಂದ ತಳ ಮಹಡಿಗೆ ಬರುವ ಲಿಫ್ಟ್‌ನ ಕೇಬಲ್‌ ಕಟ್‌ ಆಗಿದೆ. ನಿಗದಿತ ಭಾರಕ್ಕಿಂತ ಹೆಚ್ಚಿನ ಜನರು ಲಿಫ್ಟ್‌ನ್ನು ಬಳಸಿದ್ದೇ ಈ ರೀತಿ ಕೇಬಲ್‌ ಕಟ್‌ ಆಗಲು ಕಾರಣ. ಈ ಲಿಫ್ಟ್‌ನ್ನು ಏಕಕಾಲಕ್ಕೆ 8 ಜನರು ಮಾತ್ರ ಬಳಸಬಹುದು. ಆದರೆ ಈ ಘಟನೆಯಲ್ಲಿ 11 ಮಂದಿ ಲಿಫ್ಟ್‌ನಲ್ಲಿ ಹತ್ತಿರುವುದಕ್ಕೆ ಹೀಗಾಗಿದೆ ಎಂದು ಲಿಫ್ಟ್‌ನ ತಾಂತ್ರಿಕ ಸಿಬ್ಬಂದಿ ಈರಣ್ಣ ಎಂಬುವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಕುರಿತು ಉಪ ನಗರ ಪೊಲೀಸರಿಗೆ ಮಾಹಿತಿ ಹೋಗಿದೆ. ಆದರೆ ಈವರೆಗೂ ಪ್ರಕರಣ ದಾಖಲಾಗಿಲ್ಲ.
ಧ್ವಾರವಾಟಿಕಾ ಹೋಟೆಲ್‌ನಲ್ಲಿ ಲಿಫ್ಟ್‌ ಕಟ್‌ ಆಗಿ ನಡೆದಿರುವ ಘಟನೆಯಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.