ಬೆಳಗಾವಿ ತಾಲೂಕಿನ ಹಲಗಾ- ಮಚ್ಛೆ ಬೈಪಾಸ್‌ ರಸ್ತೆ ಕಾಮಗಾರಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್‌ 

ಬೆಳಗಾವಿ(ನ.26): ಬೆಳಗಾವಿ ತಾಲೂಕಿನ ಹಲಗಾ- ಮಚ್ಛೆ ಬೈಪಾಸ್‌ ರಸ್ತೆ ಕಾಮಗಾರಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿದ್ದ ಮನವಿಯನ್ನು ಗುರುವಾರ ಹೈಕೋರ್ಟ್‌ ತಿರಸ್ಕರಿಸಿದೆ. ಈ ಮೂಲಕ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ರೈತರ ವಿರೋಧದ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತುಜಿಲ್ಲಾಡಳಿತ ಹಲಗಾ-ಮಚ್ಛೆ ಬೈಪಾಸ್‌ ರಸ್ತೆ ಕಾಮಗಾರಿ ಕೈಗೊಂಡಿತ್ತು. ಬೆಳೆದು ನಿಂತ ಬೆಳೆಗಳನ್ನು ರೈತರ ಸಮ್ಮುಖದಲ್ಲೇ ಜೆಸಿಬಿಯಂತ್ರಗಳನ್ನು ಮೂಲಕ ನಾಶ ಪಡಿಸಲಾಯಿತು. ಪ್ರಾಣ ಕೊಡುತ್ತೇವೆ ಹೊರತು ಕೃಷಿ ಜಮೀನು ನೀಡುವುದಿಲ್ಲ. ಯಾವುದೇ ಕಾರಣಕ್ಕೂ ನಾವು ಕೃಷಿ ಜಮೀನು ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದ್ದರು. ಹೋರಾಟವನ್ನು ತೀವ್ರಗೊಳಿಸಿದ್ದರು. ಈ ಬೈಪಾಸ್‌ ರಸ್ತೆ ಕಾಮಗಾರಿ ಕೈಗೊಳ್ಳುವ ಸಂಬಂಧ ರಾಷ್ಟ್ರೀಯಹೆದ್ದಾರಿ ಪ್ರಾಧಿಕಾರ ಹೈಕೋರ್ಟಗೆ ಮನವಿ ಸಲ್ಲಿಸಿತ್ತು. ಮನವಿಯನ್ನು ಕೋರ್ಟ ತಿರಸ್ಕರಿಸಿದೆ.

ಮರಾಠಿ ಪುಂಡಾಟಿಕೆ!: ಕರ್ನಾಟಕ ವಿರುದ್ಧ ಘೋಷಣೆ, ಬಸ್‌ಗೆ ಮಸಿ

ಹಲಗಾ-ಮಚ್ಛೆ ಬೈಪಾಸ್‌ ರಸ್ತೆ ನಿರ್ಮಿಸುವ ಸಂಬಂಧ ಹೊರಡಿಸಲಾದ ನೋಟಿಫಿಕೇಶನ್‌ ಸಂಬಂಧಿತ ರೈತರಿಗೆ ಅನ್ವಯವಾಗುವುದಿಲ್ಲ. ನಾವು ನೋಟಿಫಿಕೇಶನ್‌ ಅನ್ನು ವಿರೋಧಿಸುವುದಿಲ್ಲ. ಆದರೆ, ಇದು ಸಂಬಂಧಿತ ರೈತರಿಗೆ ಅನ್ವಯವಾಗುವುದಿಲ್ಲ ಎಂದು ರೈತರಪರ ವಕೀಲ ರವಿಕುಮಾರ ಗೋಕಾಕ ಕೋರ್ಟನಲ್ಲಿ ತಮ್ಮ ವಾದ ಮಂಡಿಸಿದರು.

ಈ ರಸ್ತೆ ಕಾಮಗಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ರೈತರ ಮೇಲೆ ದಬ್ಬಾಳಿಕೆ ಮಾಡಿ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಮೂಲಕ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ರೈತಪರ ವಕೀಲರು ವಾದ ಮಂಡಿಸಿದರು. ಈ ಕುರಿತು ಸುದೀರ್ಘವಾಗಿ ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಕೀಲ ಸಲ್ಲಿಸಿದ್ದ ಮನವಿಯನ್ನು ಕೋರ್ಟ ತಿರಸ್ಕರಿಸಿದೆ. ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದೆ. ಇದರಿಂದಾಗಿ ಪ್ರಾಧಿಕಾರ ಮತ್ತು ಗುತ್ತಿಗೆದಾರರಿಗೆ ಇದೀಗ ಸಂಕಷ್ಟ ಎದುರಾಗಿದೆ.